ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಹೆಚ್ಚುತ್ತಿದೆ ಅಪಘಾತ: ಪ್ರಾಣ ಕಳೆದುಕೊಂಡವರೆಷ್ಟು?
ಬಹುನಿರೀಕ್ಷಿತ ಬೆಂಗಳೂರು - ಮೈಸೂರು ನಡುವಿನ ಎಕ್ಸ್ಪ್ರೆಸ್ ವೇ ಉದ್ಘಾಟನೆಗೆ ಸನಿಹವಾಗಿದ್ದು, ಈಗಾಗಲೇ ವಾಹನ ಸಂಚಾರ ಕೂಡ ಆರಂಭವಾಗಿದೆ. ಆದರೆ, ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿರುವುದು ಆತಂಕ ಮೂಡಿಸಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಈ ಎಕ್ಸ್ಪ್ರೆಸ್ ವೇಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ನಿಂದ ವಾಹನಗಳ ಸಂಚಾರ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿವರೆಗೆ ಸರಿ ಸುಮಾರು 335ಕ್ಕೂ ಅಪಘಾತ ಪ್ರಕರಣಗಳು ವರದಿಯಾಗಿದ್ದು, 80ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 51 ಕಿಮೀ ಹೆದ್ದಾರಿ ಹಾದುಹೋಗಲಿದ್ದು, 6 ತಿಂಗಳಲ್ಲಿ 110ಕ್ಕೂ ಅಧಿಕ ಅಪಘಾತಗಳು ನಡೆದಿದ್ದು, 41ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸುಮಾರು 100 ಜನ ಗಾಯಾಳುಗಳಾಗಿದ್ದಾರೆ ಎಂದು ವರದಿಯಾಗಿದೆ.

ಮಂಡ್ಯ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 225 ಅಪಘಾತ ಪ್ರಕರಣಗಳು ವರದಿಯಾಗಿದ್ದು, 43 ಮಂದಿ ಪ್ರಾಣಬಿಟ್ಟಿದ್ದಾರೆ. ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಡಿಸೆಂಬರ್ನಲ್ಲಿ 40 ಅಪಘಾತ ಸಂಭವಿಸಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆಯಷ್ಟೇ ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಮತ್ತಿಕೆರೆ ಸಮೀಪ 3 ಕಾರುಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಮೂವರು ಗಾಯಾಳುಗಳಾಗಿದ್ದರು. ಹೆದ್ದಾರಿ ಕಾಮಗಾರಿ ಕೊನೆಯ ಹಂತಕ್ಕೆ ಬಂದ ಡಿಸೆಂಬರ್, ಜನವರಿ ತಿಂಗಳಲ್ಲಿಯೇ ಹೆಚ್ಚಿನ ಅಪಘಾತ ಪ್ರಕರಣಗಳು ಸಂಭವಿಸಿವೆ.
ಬಿಡದಿ, ರಾಮನಗರ, ಚನ್ನಪಟ್ಟಣ ಬೈಪಾಸ್ಗಳಲ್ಲಿ ವಾಹನಗಳು ಗರಿಷ್ಠ 120-140 kmph ವೇಗವಾಗಿ ಚಲಿಸುತ್ತಿದೆ. ಜೊತೆಗೆ ಸರ್ವೀಸ್ ರಸ್ತೆಗಳಲ್ಲೂ ಸಂಚಾರ ದಟ್ಟಣೆ ಹೆಚ್ಚಿದ್ದು, ಬೇಗನೇ ತಲುಪಬೇಕೆಂಬ ಮನಸ್ಥಿತಿಯಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಎಕ್ಸ್ಪ್ರೆಸ್ ವೇಯಲ್ಲಿ ಎಲ್ಲಿಯೂ ವೇಗ ಮಿತಿ ಹಾಗೂ ಇತರೆ ಮಾಹಿತಿಯನ್ನು ಒದಗಿಸುವ ಸೂಚನಾ ಫಲಕಗಳು ಇಲ್ಲ. ಜೊತೆಗೆ ಮೈಸೂರು ಜಿಲ್ಲೆಯಲ್ಲಿ ಹಾದುಹೋಗುವ ಹೆದ್ದಾರಿಯಲ್ಲಿ ಸೇತುವೆಗಳು ಹೆಚ್ಚು ತಿರುವಿನಿಂದ ಕೂಡಿರುವುದು ಅಪಘಾತಕ್ಕೆ ಕಾರವಾಗಿದೆ.
ಈ ಬೆಂಗಳೂರು - ಮೈಸೂರು ನಡುವಿನ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡಲು ರೂ.8172 ಕೋಟಿ ವ್ಯಯಿಸಲಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ. ಈ ರಸ್ತೆ ನಿರ್ಮಾಣದಿಂದ ಆಗುವ ಪ್ರಯೋಜನವೆಂದರೆ, ಬೆಂಗಳೂರು - ಮೈಸೂರು ನಡುವೆ ಈ ಹಿಂದೆ ಇದ್ದ 150 ನಿಮಿಷಗಳ ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಯಲಿದೆ.
ಒಟ್ಟು 118 ಕಿಲೋ ಮೀಟರ್ ದಶಪಥದ ಹೆದ್ದಾರಿ ಇದಾಗಿದ್ದು, ಎರಡು ಕಡೆ ತಲಾ ಮೂರು ಪಥ ಒಳಗೊಂಡಿರುವ 6 ಪಥದ ಎಕ್ಸ್ಪ್ರೆಸ್ ವೇ ಇರಲಿದೆ. ಉಳಿದಂತೆ ಎರಡು ಬದಿಯಲ್ಲಿ ತಲಾ 2 ಪಥಗಳಿರುವ ಸರ್ವಿಸ್ ರಸ್ತೆ ಹೊಂದಿದ್ದು, ಈ ಮೂಲಕ NH 275 ದಶಪಥದ ರಸ್ತೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆದಿದ್ದು, ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ಕಳೆದ ಫೆಬ್ರವರಿ 28ರಿಂದ ಈ ಹೆದ್ದಾರಿಯಲ್ಲಿ ಆರಂಭವಾಗಬೇಕಿದ್ದ ಟೋಲ್ ಸಂಗ್ರಹವನ್ನು ಜನರ ವಿರೋಧದಿಂದ ಮುಂದೂಡಲಾಗಿತ್ತು. ಅದನ್ನು ಮಾರ್ಚ್ 15ರ ಬಳಿಕ ಆರಂಭಿಸಲಾಗುವುದು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದರು. 6 ಪಥದ ಎಕ್ಸ್ಪ್ರೆಸ್ವೇಯಲ್ಲಿ ಸಂಚರಿಸುವವರೂ ಮಾತ್ರ ಶುಲ್ಕ ಪಾವತಿಸಬೇಕಾಗಿದ್ದು, ಉಳಿದಂತೆ ಎರಡು ಬದಿಯ ಸರ್ವಿಸ್ ರಸ್ತೆ ಓಡಾಟ ನಡೆಸುವವರೂ ಯಾವುದೇ ಮೊತ್ತ ಕಟ್ಟುವ ಅಗತ್ಯವಿಲ್ಲ. ವಾಹನ ಮಾದರಿ ಆಧರಿಸಿ ರೂ.135 ರಿಂದ ರೂ.720 ಶುಲ್ಕ ಕಟ್ಟಬೇಕು.
ಒಟ್ಟಾರೆ, ಜನರ ಅನುಕೂಲಕ್ಕಾಗಿ ಈ ಹೆದ್ದಾರಿ ನಿರ್ಮಾಣ ಮಾಡಿದ್ದು, ರಸ್ತೆ ಪ್ರಾಧಿಕಾರವು ವೇಗದ ಮಿತಿ ಸೇರಿದಂತೆ ಹಲವು ಸೂಚನಾ ಫಲಕಗಳನ್ನು ಅಳವಡಿಸಬೇಕಾಗಿದೆ. ಜೊತೆಗೆ ತಿರುವಿನಿಂದ ಕೂಡಿರುವ ರಸ್ತೆಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಲ್ಲದೆ, ಪ್ರಯಾಣಿಕರು ಕೂಡ ತಮ್ಮ ವಾಹನಗಳನ್ನು ನಿರ್ದಿಷ್ಟ ವೇಗದ ಮಿತಿಯಲ್ಲಿ ಓಡಿಸಿದರೆ, ಇಂತಹ ಅಪಘಾತಗಳಾಗುವುದನ್ನು ತಪ್ಪಿಸಬಹುದು. ಪ್ರತಿಯೊಬ್ಬರು ಜೀವ ಅಮೂಲ್ಯ ಎಂಬುದನ್ನು ಅರಿತರೆ ಒಳ್ಳೆಯದು.


Click it and Unblock the Notifications