ಗುಡ್ನ್ಯೂಸ್: ಬೆಂಗಳೂರು - ತುಮಕೂರು ಫ್ಲೈಓವರ್ ಮೇಲೆ ಸೋಮವಾರದಿಂದ ಬಸ್ ಸೇರಿ ಎಲ್ಲ ವಾಹನಗಳ ಸಂಚಾರ
ಕರ್ನಾಟಕದ (Karnataka) ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಬಗ್ಗೆ ಬಿಗ್ ಅಪ್ಡೇಟ್ ದೊರೆತಿದೆ. ಈ ಮೇಲ್ಸೇತುವೆ ಸೋಮವಾರ (ಜುಲೈ 29)ದಿಂದ ಬಸ್ ಸೇರಿದಂತೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ಗೊರಗುಂಟೆಪಾಳ್ಯ ಮಾರ್ಗವಾಗಿ ತಮ್ಮೂರುಗಳಿಗೆ ಹೋಗುವವರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಗಂಟೆಗಟ್ಟಲೇ ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುವುದು ತಪ್ಪುತ್ತದೆ.
ಈ ಕುರಿತಂತೆ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ (M.N Anucheth) ಪ್ರತಿಕ್ರಿಯೆ ನೀಡಿದ್ದಾರೆ. 'ಜುಲೈ 29ರಿಂದ ಪೀಣ್ಯ ಮೇಲ್ಸೇತುವೆ (ಬೆಂಗಳೂರು - ತುಮಕೂರು ಫ್ಲೈಓವರ್) ಮೇಲೆ ಎಲ್ಲ ರೀತಿಯ ವಾಹನಗಳು ಸಂಚಾರ ಮಾಡಬಹುದು' ಎಂದು ಹೇಳಿದ್ದಾರೆ.

'ಮೇಲ್ಸೇತುವೆಯಲ್ಲಿ ವಿಶೇಷ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೆ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಓಡಾಟವನ್ನು ಮಾತ್ರ ನಿರ್ಬಂಧಿಸಲಾಗಿದೆ. ಜೊತೆಗೆ ಭಾರಿ ವಾಹನಗಳು ಸೇತುವೆ ಎಡ ಪಥದಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಸಂಚರಿಸುವ ಷರತ್ತು ವಿಧಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
4 ಕಿ.ಮೀ ಉದ್ದವಿರುವ ಬೆಂಗಳೂರು - ತುಮಕೂರು ಮೇಲ್ಸೇತುವೆ ಪೀಣ್ಯದಲ್ಲಿ ಆರಂಭವಾಗಿ, ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. ಈ ಮೇಲ್ಸೇತುವೆ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿದೆ. 2021ರ ಡಿಸೆಂಬರ್ನಲ್ಲಿ 8ನೇ ಮೈಲಿ ಹತ್ತಿರ ಮೇಲ್ಸೇತುವೆಯ ಒಂದೆರಡು ಪ್ಲಿಲರ್ ನಡುವೆ ಬಿರುಕು ಬಿಟ್ಟಿದ್ದರಿಂದ ಎಲ್ಲ ವಿಧದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಕೆಲವು ತಿಂಗಳ ನಂತರ, ದ್ವಿಚಕ್ರ ವಾಹನ, ಕಾರು ಒಳಗೊಂಡಂತೆ ಲಘು ವಾಹನಗಳ ಓಡಾಡಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರ ನಿಷೇಧವನ್ನು ಹಾಗೆಯೇ ಮುಂದುವರಿಸಲಾಗಿತ್ತು. ಈ ಹಿನ್ನೆಲೆ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮೇಲ್ಸೇತುವೆ ಕೆಳ ಭಾಗದಲ್ಲಿ ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ನಲ್ಲಿ ಪರದಾಡಬೇಕಾಗಿತ್ತು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಕಾರದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ), ರೂ.38.5 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಬಲಪಡಿಸುವ ಕಾರ್ಯಕ್ಕೆ ಮುಂದಾಗಿತ್ತು. ಒಟ್ಟು 120 ಪಿಲ್ಲರ್ಗಳಿಗೆ ಕೇಬಲ್ ಅಳವಡಿಕೆ ಕಾಮಗಾರಿ ನಡೆಸಿತ್ತು. ಆ ನಂತರ, ಜನವರಿ 16 ರಿಂದ 19, 2024ರವರೆಗೆ ಲೋಡ್ ಟೆಸ್ಟ್ (ಭಾರ ಪರೀಕ್ಷೆ) ಮಾಡಿತ್ತು. ಅದರಲ್ಲೂ ಧನಾತ್ಮಕ ಫಲಿತಾಂಶಗಳು ಕಂಡುಬಂದಿದ್ದವು.
ಸದ್ಯ, ಈ ಮೇಲ್ಸೇತುವೆ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುತ್ತಿರುವುದು ವಿವಿಧ ಜಿಲ್ಲೆಗಳ ಜನರಿಗೆ ಹೆಚ್ಚಿನ ಸಂತೋಷವನ್ನು ತಂದಿದೆ. ಇನ್ಮುಂದೆ ಬಸ್ಗಳು ಕೂಡ ಸಂಚರಿಸುವುದರಿಂದ ಬೇಗನೇ ತಮ್ಮ ಊರುಗಳಿಗೆ ಹೋಗಲು ಸಾಧ್ಯವಾಗಲಿದೆ. ರಜಾದಿನಗಳಲ್ಲಿ ಟ್ರಾಫಿಕ್ನಲ್ಲಿ ಪರದಾಡುವುದು ತಪ್ಪುತ್ತದೆ. ಬಾಕಿಯಿರುವ ಕಾಮಗಾರಿ ಮುಗಿದ ಬಳಿಕ, ವಾರದ ಎಲ್ಲ ದಿನವು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿರೀಕ್ಷೆಯಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications