Bengaluru - Tumakuru Flyover: ಬೆಂಗಳೂರು - ತುಮಕೂರು ಫ್ಲೈಓವರ್ ಮೇಲೆ ಕೆಲವೇ ದಿನಗಳಲ್ಲಿ ಬಸ್ ಸಂಚಾರ!
ಕರ್ನಾಟಕದ (Karnataka) ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ. ಕೆಲವೇ ದಿನಗಳಲ್ಲಿ ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ತುಮಕೂರು, ಹಾಸನ, ಚಿತ್ರದುರ್ಗ ದಾವಣಗೆರೆ, ಧಾರವಾಡ, ಹಾವೇರಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ 14 ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸರಿ ಸುಮಾರು ಮೂರು ವರ್ಷಗಳ ನಂತರ, ಜುಲೈ ಅಂತ್ಯದೊಳಗೆ ಪೀಣ್ಯ ಮೇಲ್ಸೇತುವೆ (ಬೆಂಗಳೂರು-ತುಮಕೂರು ಫ್ಲೈಓವರ್) ಮೇಲೆ ಬಸ್ ಒಳಗೊಂಡಂತೆ ಭಾರೀ ವಾಹನಗಳ ಸಂಚಾರ ಪುನರಾರಂಭವಾಗಲಿದೆ ಎಂದು ವರದಿಯಾಗಿದೆ. ಆದಾಗ್ಯೂ, ಒಂದಷ್ಟು ದುರಸ್ತಿ ಕಾರ್ಯಗಳು ಬಾಕಿಯಿರುವುದರಿಂದ ವಾರಕ್ಕೊಮ್ಮೆ ಶುಕ್ರವಾರ ಬೆಳಗ್ಗೆ 6 ರಿಂದ ಶನಿವಾರ ಬೆಳಗ್ಗೆ 6 ರವರೆಗೆ ಈ ಮೇಲ್ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ ಎಂದು ತಿಳಿದುಬಂದಿದೆ.

ನಾಲ್ಕು ಕಿಲೋಮೀಟರ್ ಉದ್ದವಿರುವ ಬೆಂಗಳೂರು-ತುಮಕೂರು ಮೇಲ್ಸೇತುವೆ ಪೀಣ್ಯದಲ್ಲಿ ಆರಂಭವಾಗಿ, ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. ಇದು ಕರ್ನಾಟಕದ ಪ್ರಮುಖ ಜಿಲ್ಲೆ ಕೇಂದ್ರಗಳಿಗೆ ಸಂಪರ್ಕ ಕೊಂಡಿಯಾಗಿದೆ. 2021ರ ಡಿಸೆಂಬರ್ನಲ್ಲಿ 8ನೇ ಮೈಲಿ ಹತ್ತಿರ ಮೇಲ್ಸೇತುವೆಯ ಒಂದೆರಡು ಪ್ಲಿಲರ್ ನಡುವೆ ಬಿರುಕು ಬಿಟ್ಟಿದ್ದರಿಂದ ಎಲ್ಲ ವಿಧದ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು.
ಕೆಲವು ತಿಂಗಳ ಬಳಿಕ, ದ್ವಿಚಕ್ರ ವಾಹನ, ಕಾರು ಒಳಗೊಂಡಂತೆ ಲಘು ವಾಹನಗಳ ಓಡಾಡಕ್ಕೆ ಅವಕಾಶ ಕೊಡಲಾಗಿತ್ತು. ಆದರೆ, ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರ ನಿಷೇಧವನ್ನು ಹಾಗೆಯೇ ಮುಂದುವರಿಸಲಾಗಿತ್ತು. ಪರಿಣಾಮ ವಾರಾಂತ್ಯ ಹಾಗೂ ಹಬ್ಬಗಳ ಋತುವಿನಲ್ಲಿ ಫ್ಲೈಓವರ್ ಕೆಳಗೆ ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಳ್ಳಬೇಕಾಗಿತ್ತು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಕಾರದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ), ರೂ.38.5 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಬಲಪಡಿಸುವ ಕಾರ್ಯಕ್ಕೆ ಮುಂದಾಗಿತ್ತು. ಒಟ್ಟು 120 ಪಿಲ್ಲರ್ಗಳಿಗೆ ಕೇಬಲ್ ಅಳವಡಿಕೆ ಕಾಮಗಾರಿ ನಡೆಸಿತ್ತು. ಆ ಬಳಿಕ, ಜನವರಿ 16 ರಿಂದ 19, 2024 ರವರೆಗೆ ಲೋಡ್ ಟೆಸ್ಟ್ (ಭಾರ ಪರೀಕ್ಷೆ) ಮಾಡಿತ್ತು. ಅದರಲ್ಲೂ ಸಕಾರಾತ್ಮಕ ಫಲಿತಾಂಶಗಳು ಕಂಡುಬಂದಿದ್ದವು.
ಈ ಬಗ್ಗೆ ಎನ್ಎಚ್ಎಐ ಬೆಂಗಳೂರು ವಿಭಾಗದ ಯೋಜನಾ ನಿರ್ದೇಶಕ ಕೆ.ಬಿ.ಜಯಕುಮಾರ್ ಅವರು ಮಾತನಾಡಿ, 'ನಾವು ಜುಲೈ ಕೊನೆಯ ವಾರದಲ್ಲಿ ಭಾರೀ ವಾಹನಗಳಿಗೆ ಮೇಲ್ಸೇತುವೆಯನ್ನು ಮುಕ್ತಗೊಳಿಸುತ್ತವೆ. ಈ ಸಂಬಂಧ ತಜ್ಞರ ಸಮಿತಿ ಮತ್ತು ಟ್ರಾಫಿಕ್ ಪೊಲೀಸರ ಶಿಫಾರಸುಗಳ ಜೊತೆಗೆ ಸಂಚಾರ ದಟ್ಟಣೆ ಸ್ಥಿತಿಗತಿ ವಿವರಿಸುವ ವರದಿಯನ್ನು ಎನ್ಎಚ್ಎಐ ಪ್ರಧಾನ ಕಚೇರಿಗೆ ಸಲ್ಲಿಸಲಾಗಿದೆ. ಮುಂದಿನ ವಾರ ಅನುಮೋದನೆ ದೊರೆಯುವ ನಿರೀಕ್ಷೆಯಿದೆ' ಎಂದು ಹೇಳಿದ್ದಾರೆ.
ಸದ್ಯ, ಸೂಚನಾ ಫಲಕಗಳಿಗೆ ಬಣ್ಣ ಬಳಿಯುವ ಕೆಲಸಗಳು ನಡೆಯುತ್ತಿವೆ. ಮೇಲ್ಸೇತುವೆಯಲ್ಲಿ ವಾಹನಗಳ ವೇಗ ಮಿತಿಯನ್ನು ಗಂಟೆಗೆ 40 ಕಿಲೋಮೀಟರ್ಗೆ ಸೀಮಿತಗೊಳಿಸಬಹುದು ಎಂದು ತಿಳಿದುಬಂದಿದೆ. ಈ ಮೇಲ್ಸೇತುವೆಯಿಂದ ಅರ್ಧ ಕರ್ನಾಟಕದ ಜಿಲ್ಲೆಗಳ ಜನರಿಗೆ ಹೆಚ್ಚಿನ ಸಹಾಯವಾಗಲಿದ್ದು, ಬೇಗ ಬಸ್ಗಳಲ್ಲಿ ತಮ್ಮ ಊರಿಗೆ ಪ್ರಯಾಣಿಸಬಹುದು. ರಜಾದಿನಗಳಲ್ಲಿ ಟ್ರಾಫಿಕ್ನಲ್ಲಿ ಪರದಾಡುವುದು ತಪ್ಪುತ್ತದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications