ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಬಳಕೆ ನಿಷೇಧಿಸಿದ ಬೆಂಗಳೂರು ಪೊಲೀಸರು
ಹೆಲ್ಮೆಟ್'ಗಳು ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷತೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣಕ್ಕಾಗಿಯೇ ಭಾರತದ ಮೋಟಾರು ವಾಹನ ಕಾಯ್ದೆಯನ್ವಯ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಸವಾರರು ಮಾತ್ರವಲ್ಲದೆ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೂ ಸಹ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇಂತಹ ಸನ್ನಿವೇಶದಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ನಿರ್ದಿಷ್ಟ ತಾಂತ್ರಿಕ ಲಕ್ಷಣವಿರುವ ಹೆಲ್ಮೆಟ್ ಧರಿಸಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಲ್ಮೆಟ್ ತಯಾರಕ ಕಂಪನಿಗಳು ಬೆಂಗಳೂರು ಸಂಚಾರಿ ಪೊಲೀಸರ ಕ್ರಮವನ್ನು ವಿರೋಧಿಸಿವೆ. ಹೆಲ್ಮೆಟ್ ತಯಾರಕ ಕಂಪನಿಗಳು ಹೆಲ್ಮೆಟ್ ಬಳಕೆದಾರರನ್ನು ಆಕರ್ಷಿಸಲು ಹಾಗೂ ಹೆಲ್ಮೆಟ್ ಬಳಕೆಯನ್ನು ಹೆಚ್ಚು ಆಸಕ್ತಿಕರವಾಗಿಸಲು ಹೆಲ್ಮೆಟ್ ಗಳನ್ನು ಅತ್ಯಾಧುನಿಕ ಫೀಚರ್ ಗಳನ್ನು ನೀಡುತ್ತಿವೆ.

ಈ ಅತ್ಯಾಧುನಿಕ ಫೀಚರ್ ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸಹ ಸೇರಿದೆ. ಈ ಫೀಚರ್ ವಾಹನ ಸವಾರರಿಗೆ ತಮ್ಮ ಸೆಲ್ ಫೋನ್ಗಳಿಗೆ ಬರುವ ಕರೆಗಳನ್ನು ಸ್ವೀಕರಿಸಲು ನೆರವಾಗುತ್ತದೆ. ಬೆಂಗಳೂರು ನಗರ ಸಂಚಾರಿ ಪೊಲೀಸರು ಬ್ಲೂ ಟೂತ್ ಫೀಚರ್ ಹೊಂದಿರುವ ಹೆಲ್ಮೆಟ್ ಬಳಕೆಯನ್ನು ನಿಷೇಧಿಸಿದ್ದಾರೆ. ನಿಯಮ ಉಲ್ಲಂಘಿಸಿ ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವವರು ಭಾರೀ ದಂಡವನ್ನು ತೆರಬೇಕಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಧರಿಸಿ ವಾಹನ ಸವಾರರು ವಾಹನ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ಕಾರಣಕ್ಕೆ ಪೊಲೀಸರು ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಬ್ಲೂಟೂತ್ ಬಳಸಿ ಮಾತನಾಡುವಾಗ ವಾಹನ ಸವಾರರ ಗಮನವು ಬೇರೆ ಕಡೆಗೆ ಹೋಗುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಕಾರುಗಳಲ್ಲಿ ಬಳಸಲಾಗುವ ಹ್ಯಾಂಡ್ಸ್ ಫ್ರೀ ಫೀಚರ್ ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಈಗ ಬೆಂಗಳೂರು ನಗರ ಸಂಚಾರ ಪೊಲೀಸರು ಬ್ಲೂಟೂತ್ ಹೊಂದಿರುವ ಹೆಲ್ಮೆಟ್ ಬಳಕೆಯನ್ನು ನಿಷೇಧಿಸಿದ್ದಾರೆ. ಬೆಂಗಳೂರು ನಗರ ಪೊಲೀಸರ ಈ ಕ್ರಮವು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹೆಲ್ಮೆಟ್ ಬಳಕೆದಾರರಿಗೆ ಆಘಾತವನ್ನುಂಟು ಮಾಡಿದೆ.

ಇದರ ಜೊತೆಗೆ ಹೆಲ್ಮೆಟ್ ತಯಾರಕರ ಸಂಘವು ಸಹ ಬೆಂಗಳೂರು ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬ್ಲೂಟೂತ್ ಸಂಪರ್ಕ ಹೊಂದಿರುವ ಹೆಲ್ಮೆಟ್ ಗಳು ದ್ವಿಚಕ್ರ ವಾಹನ ಸವಾರರಿಗೆ ವರದಾನವಾಗಿವೆ. ಆದರೆ ಇನ್ನು ಮುಂದೆ ಬೆಂಗಳೂರಿನ ದ್ವಿಚಕ್ರ ವಾಹನ ಸವಾರರು ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹೆಲ್ಮೆಟ್ ಧರಿಸುವಂತಿಲ್ಲ. ಈ ಹಿಂದೆ ಕೇರಳ ರಾಜ್ಯ ಸರ್ಕಾರವು ಇದೇ ರೀತಿ ಕ್ರಮಗಳನ್ನು ಕೈಗೊಂಡಿತ್ತು.

ಕೇರಳ ರಾಜ್ಯದಲ್ಲಿ ಕಾರು ಚಾಲಕರು ಬ್ಲೂಟೂತ್ ಮೂಲಕ ಸೆಲ್ ಫೋನ್ ನಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದ ಹಲವು ವಾಹನ ಸವಾರರಿಗೆ ಕೇರಳ ಸಾರಿಗೆ ಇಲಾಖೆಯು ಭಾರೀ ಮೊತ್ತದ ದಂಡ ವಿಧಿಸಿದೆ ಎಂಬುದು ಗಮನಾರ್ಹ. ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರ ಸಂಘದ ಅಧ್ಯಕ್ಷರಾದ ರಾಜೀವ್ ಕಪೂರ್ ರವರು ಬೆಂಗಳೂರು ಪೊಲೀಸರ ಕ್ರಮವನ್ನು ವಿರೋಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬೆಂಗಳೂರು ನಗರ ಸಂಚಾರಿ ಪೊಲೀಸರ ಈ ಕ್ರಮವು ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹೆಲ್ಮೆಟ್ ಉದ್ಯಮಕ್ಕೆ ಆಘಾತವನ್ನುಂಟು ಮಾಡಿದೆ. ಕಾರು ಅಥವಾ ದ್ವಿ ಚಕ್ರ ವಾಹನ ಚಾಲನೆ ಮಾಡುವಾಗ ವಾಹನ ಸವಾರರ ಕೈಯಲ್ಲಿ ಮೊಬೈಲ್ ಫೋನ್ ಇರುವುದಕ್ಕಿಂತ ಬ್ಲೂಟೂತ್ ಇರುವುದು ಸುರಕ್ಷಿತವಾಗಿದೆ. ಈ ತಂತ್ರಜ್ಞಾನವು ಸುರಕ್ಷಿತ ಚಾಲನೆಗೆ ಅಡ್ಡಿಯನ್ನುಂಟು ಮಾಡುವುದಿಲ್ಲ.

ಜಗತ್ತಿನ ಹಲವು ದೇಶಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹೆಲ್ಮೆಟ್ ಬಳಕೆಗೆ ಅವಕಾಶ ನೀಡಲಾಗಿದೆ. ಅಮೆರಿಕಾದಲ್ಲಿ SNELL, BELL ಹಾಗೂ ಆಸ್ಟ್ರೇಲಿಯಾದಲ್ಲಿ ಫೋರ್ಸೈಟ್, ಚೀನಾದಲ್ಲಿ ಲಿವಲ್ ಹಾಗೂ ಎಲ್ಎಸ್2 ನಂತಹ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹೆಲ್ಮೆಟ್ಗಳ ಬಳಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ರಾಜೀವ್ ಕಪೂರ್ ರವರು ಹೇಳಿದರು.

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ಮೃತ ಪಡುತ್ತಾರೆ ಎಂಬುದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಕಳೆದ ವರ್ಷ ಲಾಕ್ ಡೌನ್ ನಡುವೆಯೂ ಸುಮಾರು 1.20 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಮೃತ ಪಟ್ಟಿದ್ದಾರೆ. ರಸ್ತೆ ಅಪಘಾತಗಳಲ್ಲಿ ಮೃತ ಪಡುವ ಬಹುತೇಕ ಜನರು ದ್ವಿಚಕ್ರ ವಾಹನ ಸವಾರರು ಎಂಬುದು ಗಮನಾರ್ಹ.

ದ್ವಿಚಕ್ರ ವಾಹನ ಸವಾರರಿಗೆ ಅಪಘಾತಗಳಾದಾಗ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗುತ್ತವೆ. ಈ ಕಾರಣಕ್ಕೆ ದ್ವಿಚ್ರಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

2019ರಲ್ಲಿ ಜಾರಿಗೆ ಬಂದ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ರೂ. 1,000 ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಧರಿಸಿದ ಹಿಂಬದಿ ಸವಾರರಿಗೂ ಇಷ್ಟೇ ಮೊತ್ತದದಂಡ ವಿಧಿಸಲಾಗುತ್ತದೆ.


Click it and Unblock the Notifications