ಅಪಘಾತಗಳಿಗೆ ಒಳ್ಳೆಯ ರಸ್ತೆಗಳೇ ಕಾರಣವೆಂದ ಸಂಸದ
ಒಳ್ಳೆಯ ರಸ್ತೆಗಳಿದ್ದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಆದರೆ ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ಒಳ್ಳೆಯ ರಸ್ತೆಗಳಿಂದಲೇ ಹೆಚ್ಚು ಅಪಘಾತಗಳಾಗುತ್ತವೆ ಎಂದು ಹೇಳಿ ಸಾರ್ವಜನಿಕರಿಂದ ಟೀಕೆಗೊಳಗಾಗಿದ್ದರು.

ಈಗ ಮತ್ತೊಬ್ಬ ಜನನಾಯಕ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಈ ಬಾರಿ ಇದೇ ರೀತಿಯ ಹೇಳಿಕೆ ನೀಡಿರುವವರು ಅಸ್ಸಾಂನ ತೇಜ್ಪುರದ ಬಿಜೆಪಿಯ ಲೋಕಸಭಾ ಸದಸ್ಯ ಪಲ್ಲಬ್ ಲೋಚನ್ ದಾಸ್. ಈ ಹೇಳಿಕೆಯು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ.

ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಪಲ್ಲಬ್ ಲೋಚನ್ ದಾಸ್ರವರು, ಹದಗೆಟ್ಟ ರಸ್ತೆಗಳು ಯುವಕರು ತಮ್ಮ ವಾಹನಗಳನ್ನು ನಿಧಾನವಾಗಿ ಓಡಿಸುವಂತೆ ಮಾಡುತ್ತವೆ. ಇದರಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ.

ರಸ್ತೆಗಳು ಚೆನ್ನಾಗಿದ್ದರೆ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ಇದರಿಂದ ಹೆಚ್ಚಿನ ಅಪಘಾತಗಳಾಗುತ್ತವೆ ಎಂದು ಹೇಳಿದರು. ವಿಶ್ವದಾದ್ಯಂತ ಅತಿ ಹೆಚ್ಚು ಅಪಘಾತವಾಗುವ ರಸ್ತೆಗಳಲ್ಲಿ ಭಾರತದ ರಸ್ತೆಗಳು ಒಂದು ಎಂಬುದನ್ನು ಗಮನಿಸಬೇಕು.

ವಾಹನ ಚಾಲಕರು ರಸ್ತೆ ಗುಂಡಿಗಳಲ್ಲಿ ಬೀಳುವುದನ್ನು ತಪ್ಪಿಸಲು ಯತ್ನಿಸುವಾಗ ಅಥವಾ ಗುಂಡಿಯಲ್ಲಿ ಬಿದ್ದಾಗ ದ್ವಿಚಕ್ರ ವಾಹನಗಳು ಕೆಳಗೆ ಬಿದ್ದು ಸಾಕಷ್ಟು ಅಪಘಾತಗಳು ಸಂಭವಿಸಿವೆ. ಮಳೆ ಬೀಳುವ ಸಂದರ್ಭಗಳಲ್ಲಿ ರಸ್ತೆ ಗುಂಡಿಗಳು ಹಾಗೂ ಹದಗೆಟ್ಟ ರಸ್ತೆಗಳು ಸಾಕಷ್ಟು ಅಪಾಯಕಾರಿಯಾಗುತ್ತವೆ.

ಮಳೆ ಬಿದ್ದಾಗ ಗುಂಡಿಗಳಲ್ಲಿ ನೀರು ನಿಂತು, ಗುಂಡಿಗಳು ಕಾಣದೇ ವಾಹನ ಚಾಲಕರ ಪ್ರಾಣಕ್ಕೆ ಮಾರಕವಾಗುತ್ತವೆ. ಪಲ್ಲಬ್ ಲೋಚನ್ರವರ ಪ್ರಕಾರ ಸುಗಮ ರಸ್ತೆಗಳಲ್ಲಿ ವಾಹನಗಳು ಹೆಚ್ಚು ವೇಗವಾಗಿ ಸಂಚರಿಸುತ್ತವೆ. ಇದು ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಉತ್ತಮ ರಸ್ತೆಗಳು ವೇಗಕ್ಕೆ ಕಾರಣವಾಗುತ್ತವೆ ಎಂಬುದು ನಿಜವಾದರೂ, ಅಪಘಾತಗಳು ಒಳ್ಳೆಯ ರಸ್ತೆಗಳಲ್ಲಿ ಮಾತ್ರವೇ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗದು. ಕೆಟ್ಟ ರಸ್ತೆಗಳೇ ಒಳ್ಳೆಯ ರಸ್ತೆಗಳಿಗಿಂತ ಹೆಚ್ಚು ಹಾನಿಯನ್ನುಂಟು ಮಾಡುತ್ತವೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಯಾವುದೇ ವಾಹನ ಸವಾರ ಮೊದಲ ಬಾರಿಗೆ ಆ ಪ್ರದೇಶದಲ್ಲಿ ವಾಹನ ಚಾಲನೆ ಮಾಡುತ್ತಿದ್ದರೆ, ಆ ಪ್ರದೇಶದ ರಸ್ತೆಗಳ ಬಗ್ಗೆ ತಿಳಿಯದಿದ್ದರೆ, ಆ ರಸ್ತೆಯಲ್ಲಿ ಎದುರಾಗುವ ಒಂದು ಗುಂಡಿಯಿಂದಾಗಿ ವಾಹನ ಸವಾರನು ವಾಹನದ ಮೇಲಿನ ಬ್ಯಾಲೆನ್ಸ್ ಕಳೆದುಕೊಳ್ಳುತ್ತಾನೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಕಳೆದ ವರ್ಷ ಮುಂಬೈಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಹುಡುಗನೊಬ್ಬ ರಸ್ತೆ ಗುಂಡಿಯಲ್ಲಿ ಬಿದ್ದು, ಟ್ರಕ್ ಆತನ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಭಾರತದಲ್ಲಿ ಗಂಟೆಗೆ 100 ಕಿ.ಮೀ ಹಾಗೂ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನಗಳು ಚಲಿಸುವ ಹಲವು ಎಕ್ಸ್ಪ್ರೆಸ್ವೇಗಳಿವೆ. ಅವುಗಳಲ್ಲಿ ಯಾವಾಗಲೂ ಅಪಘಾತಗಳಾಗುವುದಿಲ್ಲ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಅಪಘಾತಕ್ಕೆ ಕಾರಣ ಕೇವಲ ವೇಗ ಮಾತ್ರವಲ್ಲ. ರಸ್ತೆಗಳ ವಿನ್ಯಾಸ ಕೂಡ ಮುಖ್ಯವಾಗಿದೆ. ನಗರದ ಒಳಗೆ ಜನರು ವೇಗವಾಗಿ ವಾಹನಗಳನ್ನು ಚಲಾಯಿಸದಂತೆ ನೋಡಿಕೊಂಡು, ಸಂಬಂಧಪಟ್ಟ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತಂದ ಹಲವು ರಾಜ್ಯಗಳಲ್ಲಿ ಅಸ್ಸಾಂ ಕೂಡ ಒಂದು. ತಿದ್ದುಪಡಿ ಮಾಡಲಾದ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ, ವೇಗವಾಗಿ ಚಲಿಸುವ ವಾಹನಗಳಿಗೆ ಕಡಿವಾಣ ಹಾಕಲು ಹಾಗೂ ಭಾರೀ ದಂಡ ವಿಧಿಸಲು ಅವಕಾಶವಿದೆ.

ಪ್ರಪಂಚದ ಬಹುತೇಕ ದೇಶಗಳು ರಸ್ತೆ ಅಪಘಾತಗಳನ್ನು ಕಾನೂನಿನ ಮೂಲಕವೇ ನಿಭಾಯಿಸುತ್ತವೆ. ವೇಗದ ಬಗ್ಗೆ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಜನ ಜಾಗೃತಿ ಮೂಡಿಸುವುದರಿಂದಲೂ ಅಪಘಾತಗಳನ್ನು ಕಡಿಮೆ ಮಾಡಬಹುದಾಗಿದೆ.


Click it and Unblock the Notifications








