BMTC: ಬಿಎಂಟಿಸಿಗೆ ರಜತ ಮಹೋತ್ಸವದ ಸಂಭ್ರಮ, ತನ್ನ ಮಾಜಿ ಉದ್ಯೋಗಿ ರಜನಿಯನ್ನು ಮರೆತಿಲ್ಲ..!
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ಎಷ್ಟೋ ಜನರ ಬದುಕಿಗೆ ಆಧಾರವಾಗಿದ್ದು, ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ನಿರ್ದಿಷ್ಟ ಗಮ್ಯ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುತ್ತದೆ. ಈ ಸಂಸ್ಥೆ ರಜತ ಮಹೋತ್ಸವದ (25 ವರ್ಷ) ಸಂಭ್ರಮದಲ್ಲಿದೆ. ಅದ್ದೂರಿ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದ್ದು, ಸಿದ್ಧತೆಗಳು ಆರಂಭವಾಗಿವೆ.
ಸದ್ಯದ ಮಾಹಿತಿ ಪ್ರಕಾರ, ರವೀಂದ್ರ ಕಲಾಕ್ಷೇತ್ರ ಅಥವಾ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಸಲು ಬಿಎಂಟಿಸಿ ತಯಾರಿ ನಡೆಸುತ್ತಿದೆ. ಆದರೆ, ಸಮಾರಂಭಕ್ಕೆ ದಿನಾಂಕ ನಿಗದಿಯಾಗಿಲ್ಲ. ಮುಖ್ಯ ಅತಿಥಿಯಾಗಿ ಆಗಮಿಸಲು ರಜನಿಕಾಂತ್ ಅವರನ್ನು ಆಹ್ವಾನಿಸಲು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದಕ್ಕಾಗಿ ರಜನಿಕಾಂತ್ ಜೊತೆಯಲ್ಲಿ ಸಚಿವರ ಆಪ್ತರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ, ರಜನಿಕಾಂತ್ ಅವರು, ತಾವು ಕೆಲಸ ಮಾಡಿದ್ದ ಬೆಂಗಳೂರಿನ ಜಯನಗರದ ಬಿಎಂಟಿಸಿ 4ನೇ ಡಿಪೋಗೆ ಭೇಟಿ ನೀಡಿ, ಅಲ್ಲಿ ಕೆಲವೊತ್ತು ಕಾಲ ಕಳೆದಿದ್ದರು. ಡಿಪೋ ಸಿಬ್ಬಂದಿ ರಜನಿಕಾಂತ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟಿದ್ದರು. ಬಿಎಂಟಿಸಿಯ ನಿವೃತ್ತ ಚಾಲಕರಾಗಿರುವ ರಾಜ್ ಬಹುದ್ದೂರ್, ಆರಂಭಿಕ ದಿನಗಳಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್ ಅವರನ್ನು ಚಿತ್ರರಂಗಕ್ಕೆ ಹೋಗುವಂತೆ ಪ್ರೋತ್ಸಾಹಿಸಿದ್ದರಂತೆ.
ಬಿಎಂಟಿಸಿ ಹಿನ್ನೆಲೆಯನ್ನು ನೋಡುವುದಾದರೆ, 1997 ಆಗಸ್ಟ್ 15 ರಂದು ಕೆಎಸ್ಆರ್ಟಿಸಿಯನ್ನು ವಿಭಜಿಸಿ, ಪ್ರತ್ಯೇಕವಾಗಿ ನಾಲ್ಕು ನಿಗಮಗಳನ್ನು ಸ್ಥಾಪನೆ ಮಾಡಲಾಯಿತು. ಅವುಗಳೆಂದರೆ, ಎನ್ಡಬ್ಲ್ಯೂಆರ್ಟಿಸಿ, ಕೆಕೆಆರ್ಟಿಸಿ, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿಗಮವಾಗಿ ಶುರುವಾದಾಗ ಕೇವಲ 2088 ಬಸ್ ಇದ್ದವು. ಅದು, ವರ್ಷಗಳು ಉರುಳಿದಂತೆ ಹೆಚ್ಚಾಗಿವೆ.

ಈಗ, ಬಿಎಂಟಿಸಿಯ ಒಟ್ಟು ಬಸ್ ಗಳ ಸಂಖ್ಯೆ 6570ಕ್ಕೆ ತಲುಪಿ, ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ. 49 ಡಿಪೋಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 29,019 ಸಿಬ್ಬಂದಿಯ ಕುಟುಂಬಕ್ಕೆ ಆಧಾರವಾಗಿದೆ. ಶಾಂತಿನಗರದಲ್ಲಿ ಮುಖ್ಯಕಚೇರಿ ಹೊಂದಿದೆ. ಪ್ರತಿನಿತ್ಯ 57 ಸಾವಿರ ಟ್ರಿಪ್ ನಡೆಸುತ್ತಿದ್ದು, ಲಕ್ಷಾಂತರ ಜನರು ಸುರಕ್ಷಿತವಾಗಿ ಪ್ರಯಾಣಿಸುತ್ತಿದ್ದು, ಬೆಂಗಳೂರಿಗರ ಜೀವನಾಡಿಯಾಗಿ ಹೊರಹೊಮ್ಮಿದೆ.
ಇನ್ನು, ಬಿಎಂಟಿಸಿ ಬಸ್ಗಳಲ್ಲಿ ರಾತ್ರಿ ಪ್ರಯಾಣ ಟಿಕೆಟ್ ದರ ಏರಿಕೆಯನ್ನು ರದ್ದುಗೊಳಿಸಿ, ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಪ್ರತಿದಿನ ಹಗಲಿನಲ್ಲಿ ಸಂಚರಿಸುವ ಬಸ್ ಗಳಿಗೆ ಹೋಲಿಸಿದರೆ, ರಾತ್ರಿ ವೇಳೆ ಸಂಚರಿಸುವ ಬಸ್ ಪ್ರಯಾಣ ದರ ಒಂದೂವರೆ ಪಟ್ಟು ಹೆಚ್ಚಿತ್ತು. ಅದನ್ನು ಕೊನೆಗೊಳಿಸಿರುವ ಬಿಎಂಟಿಸಿ, ಏಕರೂಪದ ಟಿಕೆಟ್ ದರವನ್ನು ಜಾರಿ ಮಾಡಿದೆ. ಇನ್ಮುಂದೆ 24 ಗಂಟೆಯೂ ಒಂದೇ ಟಿಕೆಟ್ ದರ ಇರುತ್ತಾರೆ.
ಬಿಎಂಟಿಸಿಯಲ್ಲಿ ರಾತ್ರಿ ವೇಳೆ ಪ್ರಯಾಣಿಕರ ಕೊರತೆಯಿಂದ ಪ್ರಯಾಣ ದರವನ್ನು ಹೆಚ್ಚಿತ್ತು. ಆದರೆ, ರಾಜ್ಯಾದ್ಯಂತ ಶಕ್ತಿ ಯೋಜನೆಗಳು ಜಾರಿಯಾದ ಬಳಿಕ, ಎಲ್ಲ ಅವಧಿಯಲ್ಲಿ ಜನರು ಓಡಾಟ ನಡೆಸುತ್ತಿರುವುದರಿಂದ ನಿಗಮವು ಈ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಇದರಿಂದ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಿ, ತಡರಾತ್ರಿ ಮನೆಗೆ ತೆರಳುವ ಪ್ರತಿಯೊಬ್ಬ ಪ್ರಯಾಣಿಕರಿಗೂ ದೊಡ್ಡಮಟ್ಟದ ಅನುಕೂಲವಾಗಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications