ಭುಜಕ್ಕೆ ಬುಲೆಟ್ ಇಳಿದರೂ 30 ಕಿ.ಮೀ ವಾಹನ ಓಡಿಸಿ ಪ್ರಯಾಣಿಕರ ಜೀವ ಉಳಿಸಿದ ಚಾಲಕ
ಮಿನಿ ಬಸ್ ಚಾಲಕರೊಬ್ಬರು 35 ಪ್ರಯಾಣಿಕರನ್ನು ದರೋಡೆಕೊರರಿಂದ ರಕ್ಷಿಸಿ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಅಮರಾವತಿ - ನಾಗ್ಪುರ ಹೆದ್ದಾರಿಯಲ್ಲಿ ಕಾರಿನಲ್ಲಿ ಬಂದಿದ್ದ ಡಕಾಯಿತರು, ಮಿನಿ ಬಸ್ ಅನ್ನು ಬೆನ್ನಟ್ಟಿದ್ದ ವೇಳೆ ಚಾಲಕ ತನ್ನ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಚಾಲಕ ಗುಂಡಿನ ದಾಳಿಗೆ ಓಳಗಾಗಿರುವುದಾಗಿ ವರದಿಯಾಗಿದೆ.
ಘಟನೆ ಕಳೆದ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 35 ಪ್ರಯಾಣಿಕರಿದ್ದ ಮಿನಿ ಬಸ್ ಅನ್ನು ಕಾರಿನಲ್ಲಿ ಬಂದಿದ್ದ ಡಕಾಯಿತರ ಗ್ಯಾಂಗ್, ಮಹಾರಾಷ್ಟ್ರದ ಅಮರಾವತಿ - ನಾಗ್ಪುರ ಹೆದ್ದಾರಿಯ ಶೇಗಾಂವ್ ಬಳಿ ಬೆನ್ನಟ್ಟಿದ್ದರು. ಈ ಎಲ್ಲಾ ಪ್ರಯಾಣಿಕರು ಶೇಗಾಂವ್ನಿಂದ ನಾಗ್ಪುರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.

ಚಾಲಕ ಖೋಮ್ದೇವ್ ಕವಾಡೆ ತನ್ನ ತೋಳಿನಲ್ಲಿ ಬುಲೆಟ್ ಇದ್ದರೂ ಬರೋಬ್ಬರಿ 30 ಕಿ.ಮೀ ಮಿನಿಬಸ್ ಅನ್ನು ಓಡಿಸುವ ಮೂಲಕ ಧೈರ್ಯವನ್ನು ತೋರಿದ್ದಾರೆ. ದರೋಡೆಕೋರರು ಮಿನಿ ಬಸ್ ಅನ್ನು ಬೆನ್ನಟ್ಟಿದಾಗ ಅವರನ್ನು ಓವರ್ಟೇಕ್ ಮಾಡಲು ಮುಂದೆ ಬಿಟ್ಟಿದ್ದಾರೆ. ಈ ವೇಳೆ ಡಕಾಯಿತರು ನಾಲ್ಕು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ಹೆಚ್ಚಾಗಿ ವಿಂಡ್ಸ್ಕ್ರೀನ್ ಮೇಲೆ ಗುಂಡು ಹಾರಿಸಿದ್ದು, ಒಂದು ಬುಲಟ್ ಚಾಲಕನಿಗೆ ತಗುಲಿದೆ.
ಏನೇ ಆಗಲಿ ದರೋಡೆಕೋರರಿಗೆ ಸಿಗಬಾರದು ಎಂದು ನಿರ್ಣಯಿಸಿದ್ದ ಚಾಲಕ, ಎಷ್ಟೇ ಅಡ್ಡಗಟ್ಟಲು ಪ್ರಯತ್ನಿಸಿದರೂ ಮಿನಿ ಬಸ್ ಅನ್ನು ಎಲ್ಲೂ ನಿಲ್ಲಿಸಿಲ್ಲ. ಅವರ ಚಾಲನಾ ಕೌಶಲ್ಯದಿಂದ ದರೋಡೆಕೋರರನ್ನು ದಾಟಿ ಪ್ರಯಾಣಿಕರನ್ನು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ದು ನಿಲ್ಲಿಸಿದ್ದರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡಕಾಯಿತರ ಹೆಚ್ಚಿನ ಬುಲೆಟ್ಗಳಿಂದ ಬಸ್ ಚಾಲಕ ಸ್ವಲ್ಪಮಟ್ಟಿಗೆ ತಪ್ಪಿಸಿಕೊಂಡಿದ್ದರಾದರೂ, ಅವುಗಳಲ್ಲಿ ಒಂದು ಕೈಗೆ ತಗುಲಿ ಗಾಯಗೊಂಡಿದ್ದಾರೆ. ಗಾಯಗೊಂಡ ಚಾಲಕ ತನ್ನ ನಿಯಂತ್ರಣವನ್ನು ಕಳೆದುಕೊಳ್ಳಲಿಲ್ಲ ಎಂದು ವರದಿ ಹೇಳಿದೆ. ಬಸ್ ಅನ್ನು ನಿಲ್ಲಿಸುವುದರಿಂದಾಗುವ ಪರಿಣಾಮವನ್ನು ಅರಿತಿದ್ದ ಚಾಲಕ ವಾಹನವನ್ನು ನಿಯಂತ್ರಿಸಿ, ತೋಳಿನಿಂದ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಮುನ್ನುಗ್ಗಿದ್ದಾರೆ.
ಚಾಲಕ ನಾಗ್ಪುರದಿಂದ 100 ಕಿ.ಮೀ ದೂರದಲ್ಲಿರುವ ಸವಾಡಿ ಗ್ರಾಮದಲ್ಲಿ ಡಕಾಯಿತರಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡಿ, ಕೊನೆಗೆ ಅವರನ್ನು ಹಿಂದೆ ಸರಿಸಿ 35 ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ವೀರೋಚಿತವಾಗಿ ಬಸ್ಸನ್ನು ಓಡಿಸಿ ಚಾಲಕ ಎಲ್ಲಾ ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾದ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಯ ಬಳಿಕ ಅಮರಾವತಿ ಪೊಲೀಸರು ಬಸ್ ಮಿನಿ ಬಸ್ ಅನ್ನು ನಂದಗಾಂವ್ಪೇಟೆ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಗಾಯಗೊಂಡಿದ್ದ ಚಾಲಕನನ್ನು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ದರೋಡೆಕೋರರನ್ನು ಸೆರೆಹಿಡಿಯಲು ನಾಗಪುರದ ಹತ್ತಿರದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಿಂದ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ದರೋಡೆಕೋರರ ಗ್ಯಾಂಗ್ ಯುಪಿ ನೋಂದಣಿ ಸಂಖ್ಯೆಯ ವಾಹನವನ್ನು ಕದ್ದಿರುವುದು ತಿಳಿದುಬಂದಿದೆ. ಅವರ ವಾಹನ ನಗರದ ಕಡೆಗೆ ಹೋಗಿರುವುದನ್ನು ವೀಡಿಯೊ ಬಹಿರಂಗಪಡಿಸಿದೆ. ನಂತರ ಕಾರು ಇಲ್ಲಿನ ಗೊಂಡಖೇರಿ ಟೋಲ್ ನಾಕಾದಿಂದ ಜಬಲ್ಪುರ ಹೆದ್ದಾರಿಯ ಕಡೆಗೆ ಕ್ಯಾಂಪ್ಟಿ-ಕನ್ಹಾನ್ ಮಾರ್ಗವಾಗಿ ಹೋಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications