BWSSB: ಬೆಂಗಳೂರಿಗರೇ ಎಚ್ಚರ! ವಾಹನ ತೊಳೆಯಲು ನೀರು ಬಳಸಿದರೆ ರೂ.5 ಸಾವಿರ ದಂಡ
ಬೇಸಿಗೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಈ ವರ್ಷ ತುಸು ಬೇಗನೇ ಇದರ ಪರಿಣಾಮ ಅಲ್ಲಲ್ಲಿ ಕಾಣಿಸತೊಡಗಿದೆ. ಸದ್ಯ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಅನವಶ್ಯಕವಾಗಿ ನೀರನ್ನು ಬಳಸಿದರೆ ದಂಡ ವಿಧಿಸುವುದಾಗಿ ಎಚ್ಚರಿಸಿದೆ.
ವಾಹನ ತೊಳೆಯುವುದು, ತೋಟಗಾರಿಕೆ, ನಿರ್ಮಾಣ ಮತ್ತು ನೀರಿನ ಕಾರಂಜಿಗಳಂತಹ ಮನರಂಜನಾ ಉದ್ದೇಶಗಳಿಗಾಗಿ ಜನರು ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿ BWSSB ಆದೇಶ ಹೊರಡಿಸಿದೆ. ನಗರದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಮಳೆ ಕೊರತೆಯಿಂದ ಅಂತರ್ಜಲ ಕುಸಿದಿದೆ, ನೀರನ್ನು ವ್ಯರ್ಥ ಮಾಡದೇ ವಿವೇಚನೆಯಿಂದ ಬಳಸುವಂತೆ ಬೆಂಗಳೂರಿನ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

BWSSB ಆದೇಶವನ್ನು ಉಲ್ಲಂಘಿಸಿದರೆ 5,000 ರೂ. ದಂಡವನ್ನು ವಿಧಿಸಲಾಗುತ್ತದೆ, ಪುನರಾವರ್ತಿತ ಉಲ್ಲಂಘನೆಗಾಗಿ, 5,000 ರೂ. ದಂಡ ಮತ್ತು ಪ್ರತಿ ದಿನಕ್ಕೆ 500 ರೂ. ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಸಾರ್ವಜನಿಕರು BWSSB ಆದೇಶಕ್ಕೆ ಸಹಕರಿಸುವಂತೆ ಕೋರಿದ್ದು, ಯಾವುದೇ ಉಲ್ಲಂಘನೆಗಳನ್ನು ಕಂಡರೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾಲ್ ಸೆಂಟರ್ಗೆ (1916)ಗೆ ಕರೆ ಮಾಡುವಂತೆ ನಾಗರಿಕರನ್ನು ಒತ್ತಾಯಿಸಿದೆ.
ಕಳೆದ ಒಂದು ವಾರದಿಂದ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವು ನಗರದ ನೀರಿನ ಬಿಕ್ಕಟ್ಟನ್ನು ಎದುರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ. ಮಾಲ್ಗಳು ಮತ್ತು ಚಿತ್ರಮಂದಿರಗಳಲ್ಲಿ ಕೂಡ ನೀರನ್ನು ಯಾವುದೇ ಕಾರಣಕ್ಕೂ ಸ್ವಚ್ಚತಾ ಕಾರ್ಯಗಳಿಗೆ ಬಳಸಬಾರದು, ಕೇವಲ ಕುಡಿಯಲು ಮಾತ್ರ ಬಳಸುವಂತೆ ಎಚ್ಚರಿಕೆ ನೀಡಲಾಗಿದೆ.

ಕಾವೇರಿ ನೀರು ಪೂರೈಸುವ ಪ್ರದೇಶಗಳಲ್ಲಿ ಸದ್ಯ ನೀರಿನ ಕೊರತೆ ಇಲ್ಲ. ಕಾವೇರಿ ನೀರು ಸರಬರಾಜು ಇನ್ನೂ ಪ್ರಾರಂಭವಾಗದ ನಗರದ ಉಳಿದ ಭಾಗಗಳಲ್ಲಿ ಈ ಸಮಸ್ಯೆ ಇದೆ ಎಂದು BWSSB ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಹೇಳಿದರು. ಬೆಂಗಳೂರು ನಗರದಲ್ಲಿ ಪ್ರಸ್ತುತ ದಿನಕ್ಕೆ 1,450 MLD ಬೇಡಿಕೆ ಇದ್ದು, ಬೇಡಿಕೆಯನ್ನು ಪೂರೈಸಲು ನಾವು ಪ್ರಸ್ತುತ 1,470 MLD ಪೂರೈಸುತ್ತಿದ್ದೇವೆ ಎಂದು ಮನೋಹರ್ ತಿಳಿಸಿದ್ದಾರೆ.
BWSSB ಅಂಕಿಅಂಶಗಳ ಪ್ರಕಾರ, ಬೆಂಗಳೂರು ನಗರದ 1.40 ಕೋಟಿ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸುವುದು ಬಹಳ ಮುಖ್ಯ. ಬೇಸಿಗೆಯ ಶಾಖವು ತೀವ್ರಗೊಳ್ಳುತ್ತಿರುವುದರಿಂದ ಅಂತರ್ಜಲ ಸಂಪನ್ಮೂಲಗಳು ಕ್ಷೀಣಿಸುತ್ತಿವೆ. ನಾಗರಿಕರಿಗೆ ಅದರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕುಡಿಯುವ ನೀರು ವ್ಯರ್ಥವಾಗುವುದನ್ನು ನಿಲ್ಲಿಸುವುದು ಅವಶ್ಯಕ" ಎಂದು BWSSB ಆದೇಶದಲ್ಲಿ ತಿಳಿಸಲಾಗಿದೆ.

ನಗರದಾದ್ಯಂತ ಉಲ್ಲಂಘನೆಗಳನ್ನು ಗುರುತಿಸುವ ಕಾರ್ಯಸಾಧ್ಯತೆಯ ಬಗ್ಗೆ ಮನೋಹರ್ ಮಾತಾಡಿ, "ಉಲ್ಲಂಘನೆಗಳನ್ನು ಗಮನಿಸಲು ಪ್ರತಿದಿನ ತಮ್ಮ ಪ್ರದೇಶಗಳಲ್ಲಿ ಗಸ್ತು ತಿರುಗಲು ನಾವು ಮೀಟರ್ ರೀಡರ್ಗಳಿಗೆ ನಿರ್ದೇಶನ ನೀಡಿದ್ದೇವೆ. ನೀರಿನ ದುರುಪಯೋಗವನ್ನು ವರದಿ ಮಾಡುವ ಮೂಲಕ ನಾಗರಿಕರು ನಮಗೆ ಸಹಾಯ ಮಾಡಬೇಕೆಂದು ವಿನಂತಿಸುತ್ತಿದ್ದೇವೆ. ನಾಗರಿಕರು ನಮಗೆ ಮಾಹಿತಿ ನೀಡಿದರೆ, ನಾವು ತ್ವರಿತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications