ಬೆಂಗಳೂರಿನಲ್ಲಿ ಜಾರ್ಖಂಡ್ ನೋಂದಾಯಿತ ಕಾರನ್ನು ಅಡ್ಡಗಟ್ಟಿ ಗೂಂಡಾ ವರ್ತನೆ: ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಜಾರ್ಖಂಡ್ ನೋಂದಾಯಿತ ವಾಹನದಲ್ಲಿ ಹೊರಟಿದ್ದ ಸ್ನೇಹಿತರ ಕಾರನ್ನು ಅಡ್ಡಗಟ್ಟಿದ ದ್ವಿಚಕ್ರ ವಾಹನ ಸವಾರ ಬೆದರಿಕೆ ಹಾಕಿದ್ದು, ಈ ದೃಶ್ಯಗಳನ್ನು ಕಾರಿನಲ್ಲಿದ್ದವರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಉತ್ತರ ಭಾರತದಲ್ಲಿ ಬೆಂಗಳೂರಿಗರನ್ನು ಗೂಂಡಾಗಳಂತೆ ಬಿಂಬಿಸುತ್ತಿದ್ದಾರೆ.
ಹೀಗೆ ಬಿಂಬಿಸಲು ಇದೊಂದೆ ಘಟನೆ ಕಾರಣವಲ್ಲ, ಈ ಹಿಂದೆ ಇಸ್ರೋ ವಿಜ್ಞಾನಿಯೊಬ್ಬರಿಗೆ ಕಿರುಕುಳ ನೀಡಿದ ಘಟನೆ ಕೂಡ ಕಾರಣವಾಗಿದೆ. ಬೆಂಗಳೂರಿನಲ್ಲಿ ಕಾರುಗಳಲ್ಲಿ ಸಂಚರಿಸುವ ಜನರನ್ನು ಸ್ಥಳೀಯರು ಬೇಕೆಂತಲೇ ತಡೆದು ಸೌರ್ಜನ್ಯವೆಸಗುತ್ತಾರೆ ಎಂದು ವರದಿಗಳಾಗುತ್ತಿವೆ. ಇದೀಗ ನಡೆದಿರುವ ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದ್ರೆ ವಿಡಿಯೋದಲ್ಲಿ ಕಾಣುವ ಸ್ಕೂಟರ್ ಸವಾರನ ನಡವಳಿಕೆ ಗೂಂಡಾ ವರ್ತೆಯನ್ನು ತೋರಿಸಿದೆ.

ಇನ್ನು ಬೆಂಗಳೂರಿನ ಯಾವ ಪ್ರದೇಶದಲ್ಲಿ ಘಟನೆ ನಡೆದಿದೆ ಎಂಬುದನ್ನು ವಿಡಿಯೋದಲ್ಲಿ ತಿಳಿಸಿಲ್ಲ. ಸ್ಕೂಟರ್ ಸವಾರ ಕಾರಿಗೆ ಜಾಗ ಬಿಡದೆ ಹಲವು ಬಾರಿ ತಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಕೊನೆಗೆ ಸ್ಕೂಟರ್ ಸವಾರ ಕಾರಿನ ಮುಂದೆ ಸ್ಕೂಟರ್ ನಿಲ್ಲಿಸಿ ಕಾರನ್ನು ನಿಲ್ಲಿಸಲು ಒತ್ತಾಯಿಸಿದ್ದಾನೆ. ಸ್ಕೂಟರ್ನಿಂದ ಇಳಿದು ವಾಹನದ ಕಡೆಗೆ ಬರುವುದನ್ನು ಕಂಡು ಕಾರಿನಲ್ಲಿದ್ದವರು ಗಾಬರಿಗೊಂಡಿದ್ದಾರೆ.
ಸ್ಕೂಟರ್ ಸವಾರನ ವರ್ತನೆ ಕಂಡು ಕಾರು ಚಾಲಕ ಮೊದಲೇ ಪೊಲೀಸರಿಗೆ ಕರೆ ಮಾಡಿದ್ದಾನೆ. ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸುವಷ್ಟರಲ್ಲಿ ವಾಹನದಲ್ಲಿದ್ದ ಇತರ ಪ್ರಯಾಣಿಕರು ಗಾಬರಿಗೊಂಡು ಕಿಟಕಿಗಳನ್ನು ತೆರೆಯದಂತೆ ಚಾಲಕನನ್ನು ಒತ್ತಾಯಿಸಿದ್ದಾರೆ. ನಂತರ ಸ್ಕೂಟರ್ ಸವಾರ ಕಾರಿನ ಸುತ್ತ ಒಂದು ರೌಂಡ್ ಹಾಕಿ ಕಾರಿನಲ್ಲಿದ್ದವರನ್ನು ಭಯಗೊಳಿಸಿದ್ದಾನೆ.

ಇಲ್ಲಿಗೆ ವಿಡಿಯೋ ಮುಕ್ತಾಯಗೊಳ್ಳುವುದನ್ನು ನಾವು ನೋಡಬಹುದು. ಬಳಿಕ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಕೆಲ ವಾರಗಳ ಹಿಂದೆ ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯ ಹೊರಭಾಗದಲ್ಲಿ ಇಸ್ರೋ ವಿಜ್ಞಾನಿಯೊಬ್ಬರಿಗೆ ಕಿರುಕುಳ ನೀಡಿದ ಘಟನೆ ಕೂಡ ವೈರಲ್ ಆಗಿತ್ತು.
ಸ್ಕೂಟರ್ ಸವಾರ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಲು ವಿಜ್ಞಾನಿಯ ವಾಹನಕ್ಕೆ ಅನೇಕ ಬಾರಿ ಒದ್ದಿದ್ದಾನೆ. ಟಿವಿಎಸ್ ಎನ್ಟಾರ್ಕ್ನಲ್ಲಿ ಬಂದ ಯುವಕನೊಬ್ಬ ಕಾರಿನ ಮುಂದೆ ತನ್ನ ವಾಹನವನ್ನು ನಿಲ್ಲಿಸಿ, ವಿಜ್ಞಾನಿಯನ್ನು ಅವಾಚ್ಯವಾಗಿ ನಿಂದಿಸಿ ಕಾರನ್ನು ಎರಡು ಬಾರಿ ಒದೆಯುವ ದೃಶ್ಯಗಳು ವೈರಲ್ ಆಗಿದ್ದವು. ಕೂಡಲೇ ಕ್ರಮ ಕೈಗೊಂಡ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು.

ಈ ವರ್ಷದ ಆರಂಭದಲ್ಲಿ ನಡೆದ ಮತ್ತೊಂದು ಘಟನೆ ಡ್ಯಾಶ್ಕ್ಯಾಮ್ನಲ್ಲಿ ಸೆರೆಹಿಡಿಯಲಾಗಿತ್ತು. ಯಮಹಾ YZF-R15 ನಲ್ಲಿ ಇಬ್ಬರು ವ್ಯಕ್ತಿಗಳು, ದಂಪತಿಯೊಂದು ಹೊರಟಿದ್ದ ಕಾರಿಗೆ ಕಲ್ಲುಗಳನ್ನು ಎಸೆದು ಅಡ್ಡಿಪಡಿಸಿದ್ದರು. ಆರಂಭದಲ್ಲಿ ಎರಡು ಬಾರಿ ಪರಿಸ್ಥಿತಿಯಿಂದ ಪಾರಾದರಾದರೂ ಬೈಕರ್ಗಳು ಅವರನ್ನು ಹಿಂದಿಕ್ಕಿ ಮೂರನೇ ಬಾರಿಗೆ ಅವರನ್ನು ತಡೆದು ನಿಲ್ಲಿಸಿ ಜಗಳ ಮಾಡಿದ್ದರು.
ಈ ಘಟನೆಯು ಹಗಲು ಹೊತ್ತಿನಲ್ಲಿ ಸಂಭವಿಸಿದೆ. ಎರಡು ಬಾರಿ ಪರಿಸ್ಥಿತಿಯನ್ನು ತಪ್ಪಿಸಿದ ನಂತರ, ಬೈಕರ್ಗಳು ಉದ್ರೇಕಗೊಂಡು ಮೂರನೇ ಬಾರಿ ಬೈಕ್ ಅಡ್ಡ ಹಾಕಿ ದಂಪತಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಸಲು ಪ್ರಯತ್ನಿಸಿದ್ದರು. ಕಾರಿನ ಗಾಜು ಒಡೆದು ಹಾಕಲು ಪದೇ ಪದೇ ಪ್ರಯತ್ನಿಸಿದ್ದರು. ಬಳಿಕ ಹೇಗೋ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲಾಯಿತು.
ಬೆಂಗಳೂರಿನಲ್ಲಿ ಕೆಲ ಪುಂಡು ಪೋಕರಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಈ ಬಗ್ಗೆ ಹಲವು ಕ್ರಮಗಳನ್ನು ತೆಗೆದುಕೊಂಡರೂ ಪದೆ ಪದೇ ನಡೆಯುತ್ತಿವೆ. ಈ ಬಗ್ಗೆ ಪೊಲೀಸರು ಇನ್ನೂ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಈ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ನಿಮಗೂ ಬೆಂಗಳೂರಿನಲ್ಲಿ ಇಂತಹ ಅನುಭವವಾಗಿದ್ದರೇ ನಮ್ಮೊಂದಿಗೆ ಹಂಚಿಕೊಳ್ಳಿ.


Click it and Unblock the Notifications