ಅಪಘಾತಕ್ಕೀಡಾದ ಬಾಲಕನಿಗೆ ಸೈಕಲ್ ನೀಡಿ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್
ಸಾಮಾನ್ಯವಾಗಿ ಸಾರ್ವಜನಿಕರಿಗೆ ಪೊಲೀಸರೆಂದರೆ ಭಯ. ಇನ್ನೂ ಕೆಲವು ಜನ ಸಾಮಾನ್ಯರು ಪೊಲೀಸರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಆದರೆ ಎಲ್ಲಾ ಪೊಲೀಸರು ಆ ರೀತಿ ಇರುತ್ತಾರೆ ಎಂಬುದು ಸರಿಯಲ್ಲ. ಯಾರೋ ಕೆಲವರು ಮಾಡುವ ತಪ್ಪುಗಳಿಗೆ ಎಲ್ಲಾ ಪೊಲೀಸರನ್ನು ಹೊಣೆ ಮಾಡುವುದು ಸರಿಯಲ್ಲ.

ಪೊಲೀಸ್ ಇಲಾಖೆಯಲ್ಲಿಯೂ ಹಲವಾರು ಜನ ಹೃದಯವಂತರಿದ್ದಾರೆ. ಅಂತಹವರಲ್ಲಿ ಪ್ರತಾಪ್ ಸಿಂಹ ಸಹ ಒಬ್ಬರು. ಅವರು ಕೊಯಮತ್ತೂರಿನಲ್ಲಿ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮಾಡಿದ ಒಂದು ಕೆಲಸ ಈಗ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗುತ್ತಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದ ಹುಡುಗನಿಗೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಹೊಸ ಸೈಕಲ್ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಕೊಯಮತ್ತೂರಿನ ಕೆರೆ ರಸ್ತೆಯಲ್ಲಿ ಡೈರಿ ಕಂಪನಿ ಪ್ರದೇಶವಿದೆ. ಇಲ್ಲಿ ಸುಭಾಷ್ ಚಂದ್ರ ಬೋಸ್ ಎಂಬ ಹುಡುಗನೊಬ್ಬ ವಾಸಿಸುತ್ತಾನೆ. ಸುಭಾಷ್ ಚಂದ್ರ ಬೋಸ್ ಕಡು ಬಡತನವಿರುವ ಕುಟುಂಬಕ್ಕೆ ಸೇರಿದ ಹುಡುಗ.

ಆತ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಈ ವಯಸ್ಸಿನಲ್ಲಿ ಆತ ತನ್ನ ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಕೊಂಡಿದ್ದಾನೆ. ಸುಭಾಷ್ ಚಂದ್ರ ಬೋಸ್ ತಂದೆ ಆಟೋ ಓಡಿಸುತ್ತಿದ್ದಾರೆ.

ಇನ್ನು ಆತನ ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ತಂದೆ ತಾಯಿಗೆ ನೆರವಾಗಲು ಸುಭಾಷ್ ಚಂದ್ರ ಬೋಸ್ ಆರ್ಎಸ್ ಪುರಂ ಪ್ರದೇಶದ ಪಾನಿಪುರಿ ಅಂಗಡಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಾನೆ. ಈ ಕೆಲಸದಿಂದ ಆತ ಪ್ರತಿದಿನ ರೂ. 100 ಸಂಪಾದಿಸುತ್ತಾನೆ.

ಸುಭಾಷ್ ಚಂದ್ರ ಬೋಸ್ ಎರಡು ವಾರಗಳ ಹಿಂದೆ ಅಪಘಾತಕ್ಕೀಡಾಗಿದ್ದ. ಆತ ತನ್ನ ಕೆಲಸ ಮುಗಿಸಿ ಸೈಕಲ್ ನಲ್ಲಿ ಮನೆಗೆ ಮರಳುತ್ತಿದ್ದ. ಅಂದ ಹಾಗೆ ಆತ ಚಾಲನೆ ಮಾಡುತ್ತಿದ್ದಿದ್ದು ತನ್ನ ಸ್ನೇಹಿತನ ಸೈಕಲ್ ಅನ್ನು. ಈ ವೇಳೆ ಕಾರೊಂದು ಸುಭಾಷ್ ಚಂದ್ರ ಬೋಸ್ ಚಲಾಯಿಸುತ್ತಿದ್ದ ಸೈಕಲ್ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಾಯಗೊಂಡ ಬಾಲಕ ಸುಭಾಷ್ ಚಂದ್ರ ಬೋಸ್ ನನ್ನು ಚಿಕಿತ್ಸೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಆತ ಸವಾರಿ ಮಾಡುತ್ತಿದ್ದ ಸೈಕಲ್ ಸಂಪೂರ್ಣವಾಗಿ ಹಾಳಾಗಿದೆ. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣ ಮುಖನಾಗಿ ಮನೆಗೆ ಮರಳಿದ.

ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಪ್ರತಾಪ್ ಸಿಂಹ ಸುಭಾಷ್ ಚಂದ್ರ ಬೋಸ್ ನನ್ನು ಭೇಟಿ ಮಾಡಿ ಆತನ ಆರೋಗ್ಯ ವಿಚಾರಿಸಿದ್ದಾರೆ. ಪ್ರತಾಪ್ ಸಿಂಹರವರು ಅಪಘಾತದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸುಭಾಷ್ ಚಂದ್ರ ಬೋಸ್ ನನ್ನು ಅವರು ಭೇಟಿ ಮಾಡಿದ್ದ ವೇಳೆ ಅವರಿಗೆ ಕೆಲವು ಸಂಗತಿಗಳು ತಿಳಿದು ಬಂದಿವೆ.

ಬಾಲಕ ಸುಭಾಷ್ ಚಂದ್ರ ಬೋಸ್ ಸೈಕ್ಲಿಂಗ್ ನಲ್ಲಿ ಆಸಕ್ತಿ ಹೊಂದಿರುವ ಸಂಗತಿ ಅವರಿಗೆ ತಿಳಿದು ಬಂದಿದೆ. ಸುಭಾಷ್ ಚಂದ್ರ ಬೋಸ್ ತಾನು ವಾಸಿಸುವ ಪ್ರದೇಶದ ಜನರ ಅಚ್ಚು ಮೆಚ್ಚಿನ ಹುಡುಗನಾಗಿದ್ದಾನೆ. ಪ್ರತಾಪ್ ಸಿಂಹರವರು ಹೊಸ ಸೈಕಲ್ ಖರೀದಿಸಿ ಅದನ್ನು ಸುಭಾಷ್ ಚಂದ್ರ ಬೋಸ್ಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

ಟ್ರಾಫಿಕ್ ಪೋಲಿಸ್ ಇನ್ಸ್ಪೆಕ್ಟರ್ ಪ್ರತಾಪ್ ಸಿಂಹ ತಮ್ಮ ಸ್ವಂತ ಹಣದಲ್ಲಿ ರೂ. 4,800 ಬೆಲೆಯ ಹೊಸ ಸೈಕಲ್ ಖರೀದಿಸಿ ಅದನ್ನು ಸುಭಾಷ್ ಚಂದ್ರ ಬೋಸ್ಗೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ನ್ಯೂಸ್ 18 ತಮಿಳು ಪತ್ರಿಕೆ ವರದಿ ಮಾಡಿದೆ.

ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ ತಾಣದಲ್ಲಿ ಈ ಹಿಂದೆ ಪೋಷಕರು ತಮ್ಮ ಮಕ್ಕಳಿಗೆ ಹೊಸ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದ ಬಗ್ಗೆ ಹಾಗೂ ತಮ್ಮ ಹೆತ್ತವರಿಗೆ ಮಕ್ಕಳು ಉಡುಗೊರೆ ನೀಡಿದ್ದ ಹಲವು ಸುದ್ದಿಗಳನ್ನು ಪ್ರಕಟಿಸಲಾಗಿತ್ತು.

ಆದರೆ ಅಪಘಾತದಲ್ಲಿ ಗಾಯಗೊಂದು ಚೇತರಿಸಿಕೊಂಡ ಬಾಲಕನಿಗೆ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಸೈಕಲ್ ಉಡುಗೊರೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಬಾಲಕ ಸುಭಾಷ್ ಚಂದ್ರ ಬೋಸ್ ನಂತೆಯೇ ಹಲವು ಬಾಲಕರು ಈಗ ತಮ್ಮ ಕೆಲಸ ಕಾರ್ಯಗಳಿಗಾಗಿ ಸೈಕಲ್ ಬಳಸಲು ಮುಂದಾಗುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಹತ್ತಿರದ ಕಚೇರಿ ಹಾಗೂ ಅಂಗಡಿಗಳಿಗೆ ತೆರಳಲು ಜನರು ಈಗ ಸೈಕಲ್ ಬಳಸುತ್ತಿದ್ದಾರೆ ಎಂಬುದು ಗಮನಾರ್ಹ.

ಇದರ ಜೊತೆಯಲ್ಲಿ ಕೆಲವರು ವ್ಯಾಯಾಮ ಮಾಡಲು ಸೈಕಲ್ ಸವಾರಿ ಮಾಡುತ್ತಾರೆ. ಸೈಕಲ್ಗಳ ಬಳಕೆ ಹೆಚ್ಚಾದಂತೆ ಜನರ ಆರೋಗ್ಯವು ಸುಧಾರಿಸುತ್ತದೆ. ಜೊತೆಗೆ ಪರಿಸರ ಮಾಲಿನ್ಯವು ಸಹ ಕಡಿಮೆಯಾಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಂದ ಭಾರತದ ಪರಿಸರವು ದಿನೇ ದಿನೇ ಹದಗೆಡುತ್ತಿದೆ.
ಗಮನಿಸಿ: ಮೊದಲ ಚಿತ್ರವನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications