ಕರೋನಾ ವೈರಸ್ನಿಂದ ಕುಸಿದ ಟ್ಯಾಕ್ಸಿ ಉದ್ಯಮ
ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸುವುದು ಜನರ ಜೀವನದ ಭಾಗವೇ ಆಗಿ ಹೋಗಿದೆ. ಜನರು ಸಾರ್ವಜನಿಕ ಸಾರಿಗೆ ವಾಹನಗಳಿಗಿಂತ ಖಾಸಗಿ ಕಂಪನಿಗಳ ಟ್ಯಾಕ್ಸಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಭಾರತದಲ್ಲಿ ಓಲಾ ಹಾಗೂ ಉಬರ್ ಕಂಪನಿಗಳು ಟ್ಯಾಕ್ಸಿ ಸೇವೆ ನೀಡಲು ಮುಂಚೂಣಿಯಲ್ಲಿವೆ.

ಈ ಕ್ಯಾಬ್ಗಳನ್ನು ಬಳಸುತ್ತಿರುವ ಗ್ರಾಹಕರು, ಹೆಚ್ಚಿನ ದರವನ್ನು ಪಡೆದು ಹಗಲು ದರೋಡೆ ಮಾಡಲಾಗುತ್ತಿದೆ ಎಂದು ದೂರುತ್ತಿದ್ದಾರೆ. ಹಬ್ಬ ಮತ್ತಿತರ ವಿಶೇಷ ದಿನಗಳಂದು ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಲವು ರಾಜ್ಯ ಸರ್ಕಾರಗಳು ಕ್ಯಾಬ್ ಕಂಪನಿಗಳ ಈ ಹಗಲು ದರೋಡೆಗೆ ಅಂತ್ಯ ಹಾಡಲು ತೀರ್ಮಾನಿಸಿದೆ. ಇತ್ತೀಚಿಗಷ್ಟೇ ಮಹಾರಾಷ್ಟ್ರ ಸರ್ಕಾರವು ಈ ಸಂಬಂಧ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಲ್ಲಿ ಹೆಚ್ಚುವರಿ ಸರ್ಚಾರ್ಜ್ಗಳಿಗೆ ಕಡಿವಾಣ ಹಾಕುವ ಯೋಜನೆಯನ್ನು ಹೊಂದಲಾಗಿದೆ.

ಇನ್ನು ಕೆಲವು ರಾಜ್ಯ ಸರ್ಕಾರಗಳು ಆಟೋ ರಿಕ್ಷಾಗಳಲ್ಲಿ ಹೊಸ ಮೀಟರ್ ಅಳವಡಿಸುವಂತೆ ಸೂಚಿಸಿವೆ. ಸರ್ಕಾರಗಳ ಈ ನಿರ್ಧಾರಗಳಿಂದ ಕ್ಯಾಬ್ ಕಂಪನಿಗಳು ಹಾಗೂ ಆಟೋ ರಿಕ್ಷಾ ಮಾಲೀಕರು ಮುಜುಗರಕ್ಕೊಳಗಾಗಿದ್ದಾರೆ.

ಇಂತಹ ಸಂದರ್ಭದಲ್ಲಿಯೇ ಇಡೀ ವಿಶ್ವಕ್ಕೆ ಮಾರಣಾಂತಿಕ ಕೋವಿಡ್ -19 (ಕರೋನಾ) ವೈರಸ್ ಅಪ್ಪಳಿಸಿದೆ. ಕೋವಿಡ್ -19 ವೈರಸ್ ಬಗ್ಗೆ ವಿವಿಧ ಮಾಹಿತಿಗಳು ಹರಡುತ್ತಿದ್ದು, ಜನರು ಭಯಭೀತರಾಗಿದ್ದಾರೆ. ವೈರಸ್ ಸೋಂಕಿಗೆ ಒಳಗಾದ ಜನರು ಮಾತನಾಡುವುದರಿಂದ, ಸೀನುವುದರಿಂದ, ಸ್ಪರ್ಶಿಸುವುದರಿಂದ ಕರೋನಾ ವೈರಸ್ ಹರಡುತ್ತದೆ.

ಈ ಕಾರಣಗಳಿಂದಾಗಿ, ಜನರು ಹೊರಗೆ ಹೋಗಲು ಹೆದರುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸೇರುತ್ತಿಲ್ಲ. ಕರ್ನಾಟಕ ರಾಜ್ಯ ಸರ್ಕಾರವು ಒಂದು ವಾರ ಎಲ್ಲಾ ಸೇವೆಗಳನ್ನು ಬಂದ್ ಮಾಡುವಂತೆ ಆದೇಶಿಸಿದೆ.

ಹೀಗಾಗಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆಗಳನ್ನು ನೀಡುತ್ತಿವೆ. ಇದರಿಂದಾಗಿ ಜನರು ಮನೆಗಳಲ್ಲಿಯೇ ಇರುವಂತಾಗಿದೆ.

ಹೆಚ್ಚಿನ ಸಂಖ್ಯೆಯ ಜನರು ಮನೆಯಲ್ಲಿಯೇ ಇರುತ್ತಿರುವುದರಿಂದ ಬಾಡಿಗೆ ಕಾರುಗಳ ಬಳಕೆಯಲ್ಲಿ ಕುಸಿತ ಉಂಟಾಗಿದೆ. ಮುಖ್ಯವಾಗಿ ಬೆಂಗಳೂರು ಹಾಗೂ ಮುಂಬೈ ನಗರಗಳ ಬಾಡಿಗೆ ವಾಹನಗಳಲ್ಲಿ ತೀವ್ರ ಕುಸಿತವಾಗಿರುವ ವರದಿಗಳಿವೆ.

ಈ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ವಾಹನಗಳು ಈಗ ಗ್ರಾಹಕರಿಲ್ಲದೇ ರಸ್ತೆಬದಿಯಲ್ಲಿ ನಿಂತಿವೆ. ಇದಕ್ಕೆಲ್ಲಾ ಮುಖ್ಯ ಕಾರಣವಾಗಿರೋದು ಕರೋನಾ ಭಯ. ಇದರಿಂದಾಗಿ ಬ್ಯಾಂಕಿನಲ್ಲಿ ಇಎಂಐ ಪಾವತಿಸುವ ಟ್ಯಾಕ್ಸಿ ಚಾಲಕರ ಜೀವನ ಡೋಲಾಯಮಾನವಾಗಿದೆ.

ಮುಂಬರುವ ದಿನಗಳಲ್ಲಿ ಅವರು ಇಎಂಐ ಅನ್ನು ಹೇಗೆ ಪಾವತಿಸುತ್ತಾರೆ ಎಂಬ ಪ್ರಶ್ನೆಗಳು ಉದ್ಬವಿಸಿವೆ. ಬ್ಯಾಂಕುಗಳು ಕ್ಯಾಬ್ ಚಾಲಕರ ಇಎಂಐ ಮರುಪಾವತಿಯನ್ನು ಒಂದೆರಡು ತಿಂಗಳು ಮುಂದೂಡಬೇಕು ಎಂಬ ಬೇಡಿಕೆಯನ್ನಿಡಲಾಗಿದೆ.

ಕೋವಿಡ್ -19 ವೈರಸ್ ಹರಡುವಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಶಾಪಿಂಗ್ ಮಾಲ್ ಹಾಗೂ ಚಿತ್ರಮಂದಿರಗಳು ಸೇರಿದಂತೆ ಅನೇಕ ರಾಜ್ಯಗಳಲ್ಲಿರುವ ಸಾರ್ವಜನಿಕ ಸ್ಥಳಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ವೈರಸ್ ಹೆಚ್ಚಾಗಿರುವ ಕೇರಳ ಹಾಗೂ ಬೆಂಗಳೂರಿನಲ್ಲಿ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಬಾಡಿಗೆ ವಾಹನಗಳನ್ನು ಬಳಸುವವರ ಸಂಖ್ಯೆಯಲ್ಲಿ ತೀವ್ರ ಕುಸಿತ ಉಂಟಾಗಿದೆ. ಕಳೆದ ವಾರ 40%ನಿಂದ 50%ನಷ್ಟು ಕುಸಿತವಾಗಿರುವ ಬಗ್ಗೆ ವರದಿಗಳಾಗಿವೆ. ಇದೇ ವೇಳೆ, ವೊಗೊ ಹಾಗೂ ಯೂಲ್ನಂತಹ ಕಂಪನಿಗಳಿಗೆ ಯಾವುದೇ ತೊಂದರೆಯಾಗಿಲ್ಲವೆಂದು ಹೇಳಲಾಗುತ್ತಿದೆ. ಆದರೆ ಈ ಕಂಪನಿಗಳು ಖುಷಿ ಪಡುವಂತಿಲ್ಲ.

ಯಾಕೆಂದರೆ ಈ ಕಂಪನಿಗಳು ಪರಿಸ್ಥಿತಿ ಯಾವಾಗ ಬೇಕಾದರೂ ಬದಲಾಗಬಹುದೆಂಬ ಭಯದಲ್ಲಿವೆ. ಉಬರ್ ಹಾಗೂ ಓಲಾ ಕಂಪನಿಗಳು ವೈರಸ್ ಹರಡದಂತೆ ಮಾಡಲು ನಿರ್ದಿಷ್ಟ ರಕ್ಷಣಾ ಸಾಧನಗಳನ್ನು ಬಳಸುವಂತೆ ಚಾಲಕರಿಗೆ ಸೂಚಿಸಿವೆ. ಆ್ಯಂಟಿಸೆಪ್ಟಿಕ್ಗಳನ್ನು ತಮ್ಮ ಬಳಿಯಿಟ್ಟು ಕೊಳ್ಳುವಂತೆಯೂ ಕ್ಯಾಬ್ ಚಾಲಕರಿಗೆ ಸೂಚಿಸಲಾಗಿದೆ.
ಮೂಲ: ಇಟಿ ಆಟೋ


Click it and Unblock the Notifications