ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ಜೆಸಿಬಿ ಮೂಲಕ ನದಿ ದಾಟಿದ ಕರೋನಾ ವಾರಿಯರ್ಸ್
ಕರೋನಾ ವೈರಸ್ ಎರಡನೇ ಅಲೆ ಪ್ರಭಾವವು ದೇಶಾದ್ಯಂತ ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಸುಮಾರು ಎರಡು ತಿಂಗಳ ಹಿಂದೆ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಅನ್ನು ಆಯಾ ರಾಜ್ಯ ಸರ್ಕಾರಗಳು ಹಂತ ಹಂತವಾಗಿ ಸಡಿಲಗೊಳಿಸುತ್ತಿವೆ.

ಲಾಕ್ಡೌನ್ ಸಡಿಲಿಕೆ ಕುರಿತು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಕರೋನಾ ಸೋಂಕು ಹರಡುವಿಕೆ ಪ್ರಮಾಣವು ಕಡಿಮೆಯಾಗಿದ್ದರೂ ವೈದ್ಯಕೀಯ ಸಿಬ್ಬಂದಿಗಳ ಮೇಲಿರುವ ಕೆಲಸದ ಒತ್ತಡ ಇನ್ನೂ ಕಡಿಮೆಯಾಗಿಲ್ಲ.

ಇತ್ತೀಚಿಗೆ ಲಡಾಖ್ನಲ್ಲಿ ನಡೆದ ಘಟನೆಯೊಂದು ಈ ಮಾತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಕರೋನಾ ವೈರಸ್ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡಿದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೂ ವೈದ್ಯರ ಸೇವೆ ಅನಿವಾರ್ಯವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸೌಲಭ್ಯಗಳ ಕೊರತೆ ಎಂಬ ಕಾರಣಕ್ಕೆ ಸೇವೆ ನೀಡದೇ ಸುಮ್ಮನಿರುವಂತಿಲ್ಲ. ಮೂಲ ಸೌಕರ್ಯಗಳು ಇಲ್ಲದ ಸ್ಥಳಕ್ಕೆ ತೆರಳಲು ವೈದ್ಯರ ತಂಡವೊಂದು ಜೆಸಿಬಿ ವಾಹನದಲ್ಲಿ ನದಿ ದಾಟಿದೆ. ಇದನ್ನು ಹೊರತು ಪಡಿಸಿದರೆ ಆ ತಂಡಕ್ಕೆ ಬೇರೆ ದಾರಿಯಿರಲಿಲ್ಲ.

ಲಡಾಖ್ ಸಂಸದ ಟೇಜರಿಂಗ್ ನಂಗ್ಯಾಲ್ ಈ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಚಿತ್ರದಲ್ಲಿ ಜೆಸಿಬಿ ನದಿಯಲ್ಲಿ ಸಾಗುತ್ತಿರುವುದನ್ನು ಹಾಗೂ ಅದರ ಮುಂಭಾಗದಲ್ಲಿ ನಾಲ್ವರು ಅರೆವೈದ್ಯರು ಕುಳಿತಿರುವುದನ್ನು ಕಾಣಬಹುದು.

ಈ ಚಿತ್ರವನ್ನು ಶೇರ್ ಮಾಡಿರುವ ಸಂಸದರು, ಕರೋನಾ ವಾರಿಯರ್ಸ್'ಗೆ ನಮ್ಮ ನಮಸ್ಕಾರ. ಗ್ರಾಮೀಣ ಲಡಾಖ್ನಲ್ಲಿ ಸೇವೆ ನೀಡಲು ಕೋವಿಡ್ ಯೋಧರು ನದಿ ದಾಟುತ್ತಿದ್ದಾರೆ. ಮನೆಯಲ್ಲಿಯೇ ಇರಿ.

ಸುರಕ್ಷಿತವಾಗಿರಿ, ಆರೋಗ್ಯವಾಗಿರಿ. ಕರೋನಾ ವಾರಿಯರ್'ಗಳಿಗೆ ಸಹಕರಿಸಿ ಎಂದು ಪೋಸ್ಟ್ ಮಾಡಿದ್ದಾರೆ. ಸಂಸದರು ಶೇರ್ ಮಾಡಿರುವ ಈ ಚಿತ್ರಕ್ಕೆ ಹಲವಾರು ಜನರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ.

ಅವರಲ್ಲಿ ಕೆಲವರು ವೈದ್ಯಕೀಯ ಸಿಬ್ಬಂದಿಯ ಈ ಸವಾಲಿನ ಪ್ರಯಾಣವನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಸಾಕಷ್ಟು ರಸ್ತೆ ಸೌಲಭ್ಯಗಳನ್ನು ಒದಗಿಸದೇ ಇರುವ ಬಗ್ಗೆ ಸಂಸದರನ್ನು ಪ್ರಶ್ನಿಸಿದ್ದಾರೆ.

ಲಡಾಖ್ ಅನ್ನು ಕೇಂದ್ರ ಸರ್ಕಾರವು 2019ರಲ್ಲಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ ಈಗ 20,000 ಗಡಿ ತಲುಪುತ್ತಿದೆ. ಈ ಪೈಕಿ 1,011 ಪ್ರಕರಣಗಳು ಸಕ್ರಿಯವಾಗಿವೆ ಎಂದು ವರದಿಯಾಗಿದೆ.
ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications