ಕರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಆನಂದ್ ಮಹೀಂದ್ರಾ
ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಜನರ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಜನರು ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಪ್ರವಾಸ ಕೈಗೊಳ್ಳುವ ಜನರ ಮೇಲೆ, ಅದರಲ್ಲೂ ವಿಶೇಷವಾಗಿ ವಿದೇಶ ಪ್ರವಾಸಕ್ಕೆ ಹೋಗುವವರ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಅಂತರರಾಷ್ಟ್ರೀಯ, ದೇಶೀಯ ವಿಮಾನಗಳ ಜೊತೆಗೆ, ರೈಲು ಹಾಗೂ ಬಸ್ ಸೇವೆಗಳನ್ನು ಸಹ ರದ್ದುಪಡಿಸಲಾಗಿದೆ. ಭಾರತದಲ್ಲಿ ಕರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಅದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ.

ಈ ಸಂದರ್ಭದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಸಹ ಕರೋನಾ ವೈರಸ್ ವಿರುದ್ಧ ಹೋರಾಡಲು ಕೈಜೋಡಿಸಿವೆ. ಅದರಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಒಂದು. ಮಹೀಂದ್ರಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ, ಕರೋನಾ ವೈರಸ್ ವಿರುದ್ಧ ಹೋರಾಡಲು ಕೈಜೋಡಿಸಿದ್ದಾರೆ.

ಇದರಂತೆ ಮಹೀಂದ್ರಾ ಕಂಪನಿಯು ವೆಂಟಿಲೇಟರ್ಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಮಹೀಂದ್ರಾ ಹಾಲಿಡೇ ರೆಸಾರ್ಟ್ಗಳನ್ನು ತಾತ್ಕಾಲಿಕ ಚಿಕಿತ್ಸೆ ನೀಡಲು ಬಳಸಲಾಗುವುದು. ಆನಂದ್ ಮಹೀಂದ್ರಾರವರ ಈ ಪ್ರಯತ್ನಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ

ಭಾರತದಲ್ಲಿ ಕರೋನಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ, ಆನಂದ್ ಮಹೀಂದ್ರಾರವರು ತಮ್ಮ ಕಂಪನಿಯ ಉತ್ಪಾದನಾ ಘಟಕಗಳಲ್ಲಿ ತಕ್ಷಣವೇ ವೆಂಟಿಲೇಟರ್ಗಳ ಉತ್ಪಾದನೆಯನ್ನು ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಆನಂದ್ ಮಹೀಂದ್ರಾರವರು ತಮ್ಮ ಪೂರ್ತಿ ಸಂಬಳವನ್ನು ಕರೋನಾ ವೈರಸ್ ನಿಯಂತ್ರಣಕ್ಕೆ ಬಳಸಲಿದ್ದಾರೆ.

ಕರೋನಾ ವೈರಸ್ ನಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವೈದ್ಯಕೀಯ ಮೂಲಸೌಕರ್ಯಗಳು ಬೇಕಾಗಿವೆ. ವೈದ್ಯಕೀಯ ಉಪಕರಣಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಈ ಕಾರಣಕ್ಕೆ ಆನಂದ್ ಮಹೀಂದ್ರಾರವರು ಈ ನಿರ್ಧಾರ ಕೈಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆನಂದ್ ಮಹೀಂದ್ರಾರವರು, ನಾವು ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಬೇಕಾಗಿದ್ದು, ವೆಂಟಿಲೇಟರ್ಗಳ ಕೊರತೆಯೂ ಇದೆ. ಈ ಸಂದರ್ಭದಲ್ಲಿ ಮಹೀಂದ್ರಾ ಕಂಪನಿಯು ತನ್ನ ನೆರವನ್ನು ನೀಡಲಿದೆ.

ಇದರ ಅಂಗವಾಗಿ, ಮಹೀಂದ್ರಾ ಕಂಪನಿಯ ಉತ್ಪಾದನಾ ಘಟಕಗಳಲ್ಲಿ ವೆಂಟಿಲೇಟರ್ಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತೇವೆ ಎಂದು ಹೇಳಿದರು. ಕೆಲ ದಿನಗಳ ಹಿಂದಷ್ಟೇ ಕೆನಡಾದಲ್ಲಿರುವ ವಾಹನ ಉದ್ಯಮ ಕಂಪನಿಗಳು ಸಹ ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ನಿರ್ಧಾರವನ್ನು ಕೈಗೊಂಡಿವೆ.

ವಿಶ್ವಾದ್ಯಂತ, ಕರೋನಾ ವೈರಸ್ ಹಾವಳಿಯಿಂದಾಗಿ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ವಾಹನಗಳ ಮಾರಾಟವು ನೆಲ ಕಚ್ಚಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ.

ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ವಾಹನ ಕಂಪನಿಗಳಿಗೆ ಕೆನಡಾ ಸರ್ಕಾರ ನೆರವು ನೀಡಲಿದೆ ಎಂದು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊರವರು ತಿಳಿಸಿದ್ದಾರೆ. ತನ್ನ ಕಂಪನಿಯ ಉತ್ಪಾದನಾ ಘಟಕಗಳಲ್ಲಿ ವೆಂಟಿಲೇಟರ್ ತಯಾರಿಸಲು ಮುಂದಾಗಿರುವ ಆನಂದ್ ಮಹೀಂದ್ರಾರವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.


Click it and Unblock the Notifications