ಕರೋನಾ ವೈರಸ್ ಎಫೆಕ್ಟ್: ಸಂಚಾರ ಸ್ಥಗಿತಗೊಳಿಸಲು ಖಾಸಗಿ ಬಸ್ ಮಾಲೀಕರ ನಿರ್ಧಾರ
ಕರೋನಾ ವೈರಸ್ ಹರಡದಂತೆ ತಡೆಯುವ ಕಾರಣಕ್ಕೆ ದೇಶಾದ್ಯಂತ ಮೇ 3ರವರೆಗೆ 2ನೇ ಹಂತದ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಕಾರಣಕ್ಕೆ ದೇಶಾದ್ಯಂತ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿದೆ.

ಈ ಕರೋನಾ ವೈರಸ್ಗೆ ಯಾವುದೇ ಮದ್ದಿಲ್ಲ. ಮುನ್ನೆಚ್ಚರಿಕೆಯೊಂದೇ ಮದ್ದು. ಸಾಮಾಜಿಕ ಅಂತರ ಸೇರಿದಂತೆ ವಿವಿಧ ಕ್ರಮಗಳನ್ನು ಪಾಲಿಸಬೇಕಾದ ಅಗತ್ಯವಿದೆ. ಸಾಮಾಜಿಕ ಅಂತರ ಅನುಸರಿಸದವರಿಗೆ ಕರೋನಾ ವೈರಸ್ ಸೋಂಕು ಹರಡುವ ಸಾಧ್ಯತೆಗಳಿವೆ.

ಸಾಮಾಜಿಕ ಅಂತರವನ್ನು ಕಾಪಾಡುವ ಉದ್ದೇಶದಿಂದ ಲಾಕ್ಡೌನ್ ನಂತರ ಜನರು ಸಾರ್ವಜನಿಕ ಸಾರಿಗೆಗೆ ಬದಲು ಸ್ವಂತ ವಾಹನಗಳಲ್ಲಿ ಪ್ರಯಾಣಿಸುವ ಸಾಧ್ಯತೆಗಳು ದಟ್ಟವಾಗಿವೆ. ಜನರು ಬಸ್, ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಹಿಂಜರಿದು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ನಿರ್ಧರಿಸಬಹುದು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಇದರಿಂದಾಗಿ ಲಾಕ್ಡೌನ್ ನಂತರ, ಕಾರು ಸೇರಿದಂತೆ ಇತರ ವಾಹನಗಳ ಮಾರಾಟವು ಹೆಚ್ಚಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಲಾಕ್ಡೌನ್ನಿಂದಾಗಿ ವಾಹನಗಳ ಮಾರಾಟವು ತೀವ್ರವಾಗಿ ಕುಸಿದಿದೆ. ಆದರೆ ಮುಂಬರುವ ದಿನಗಳಲ್ಲಿ, ಕರೋನಾ ವೈರಸ್ ಕಾರಣದಿಂದಾಗಿಯೇ ವಾಹನಗಳ ಮಾರಾಟದಲ್ಲಿ ಹೆಚ್ಚಳ ಕಂಡುಬರಲಿದೆ.

ಬಸ್ಸು, ಟ್ಯಾಕ್ಸಿಗಳಲ್ಲಿ ಪ್ರಯಾಣಿಸಿದರೆ ಕರೋನಾ ಹರಡಬಹುದೆಂಬ ಭಯವು ಜನರಿಗೆ ವಾಹನಗಳನ್ನು ಖರೀದಿಸಲು ಪ್ರೇರಣೆ ನೀಡಲಿದೆ. ಇದು ವಾಹನ ತಯಾರಕ ಕಂಪನಿಗಳಿಗೆ ಸಂತಸವನ್ನುಂಟು ಮಾಡಿದರೂ, ಖಾಸಗಿ ಬಸ್ ಮಾಲೀಕರನ್ನು ಆತಂಕಕ್ಕೆ ದೂಡಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಏಪ್ರಿಲ್ 14ರವರೆಗೆ ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಲಾಕ್ಡೌನ್ ಸಡಿಲಗೊಳಿಸಿದ ನಂತರ ಬಸ್ಸುಗಳು ಸಂಚಾರ ಆರಂಭಿಸಿದರೂ ಅವು ಲಾಭ ಕಾಣಬಹುದೇ ಎಂಬ ಪ್ರಶ್ನೆ ಎದುರಾಗಿದೆ.

ಕರೋನಾ ಭಯದಿಂದ ಜನ ತಮ್ಮ ವಾಹನಗಳಲ್ಲಿ ಪ್ರಯಾಣಿಸಬಹುದೆಂಬ ಭಯ ಖಾಸಗಿ ಬಸ್ ಮಾಲೀಕರನ್ನು ಕಾಡುತ್ತಿದೆ. ಈ ಕಾರಣಕ್ಕೆ ಕೇರಳದ ಖಾಸಗಿ ಬಸ್ ಮಾಲೀಕರು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
MOSTREAD: ನಟ ವಿಕ್ರಮ್ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್ಡೌನ್ ಅಂತ್ಯಗೊಂಡರೂ ಬಸ್ಸುಗಳನ್ನು ಓಡಿಸದಿರುವ ತಮ್ಮ ತೀರ್ಮಾನವನ್ನು ಕೇರಳ ಸರ್ಕಾರಕ್ಕೆ ತಿಳಿಸಲು ಮುಂದಾಗಿದ್ದಾರೆ. ಕೇರಳದ 10 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಜನರು ಬಸ್ಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಮುಂದಾದರೆ ಅದರಿಂದಲೂ ನಷ್ಟ ಉಂಟಾಗುತ್ತದೆ ಎಂಬುದು ಸಹ ಅವರ ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಬಸ್ಸುಗಳನ್ನು ಓಡಿಸದಿರಲು ನಿರ್ಧರಿಸಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ನಿಂದಾಗಿ ಈಗಾಗಲೇ ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿರುವುದಾಗಿ ಅಲ್ಲಿನ ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ. ಕೇರಳ ರಾಜ್ಯವು ಈ ಸಮಸ್ಯೆಯನ್ನು ಹೇಗೆ ಪರಿಹರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೋವಿಡ್ -19 ವೈರಸ್ ಹರಡುವುದನ್ನು ತಡೆಯುತ್ತಿರುವುದರಲ್ಲಿ ಹಾಗೂ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಲ್ಲಿ ಕೇರಳ ಸರ್ಕಾರವು ಕೈಗೊಂಡಿರುವ ಕ್ರಮಗಳು ದೇಶದ ಗಮನ ಸೆಳೆದಿವೆ. ಕೇರಳವು ಕರೋನಾದಿಂದ ಚೇತರಿಸಿಕೊಳ್ಳುತ್ತಿರುವ ವೇಳೆಯಲ್ಲಿಯೇ ಖಾಸಗಿ ಬಸ್ ಮಾಲೀಕರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಕೇರಳ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲಿಯೂ ಸಹ ಖಾಸಗಿ ಬಸ್ ಮಾಲೀಕರು ಇಂತಹ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಇದು ಖಾಸಗಿ ಬಸ್ಗಳಿಗೆ ಮಾತ್ರವಲ್ಲದೇ ಸರ್ಕಾರಿ ಬಸ್ಸುಗಳಿಗೆ ಸಹ ಅನ್ವಯಿಸುವ ಸಾಧ್ಯತೆಗಳಿವೆ.

ಸರ್ಕಾರಿ ಸ್ವಾಮ್ಯದ ಬಸ್ಸುಗಳು ಸಹ ನಷ್ಟಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಕರೋನಾ ಸಮಸ್ಯೆ ಬಗೆಹರಿದ ನಂತರ ಜನರು ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಹೆಚ್ಚು ಸಂಚರಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ಗಾಗಿ ಬಳಸಲಾಗಿದೆ.


Click it and Unblock the Notifications