ಬಿಸಿಲಿನಲ್ಲೂ ತಂಪೆರೆಯಲು ಛಾವಣಿಯ ಮೇಲೆ ಉದ್ಯಾನ ನಿರ್ಮಿಸಿದ ಆಟೋ ಚಾಲಕ
ದೇಶದಲ್ಲಿ ಬೇಸಿಗೆ ಬಂತೆಂದರೆ ಸಾಕು ಜನರು ಬಿಸಿಲಿಗೆ ತತ್ತರಿಸುತ್ತಾದರೆ, ಕೆಲವು ಪ್ರದೇಶಗಳಲ್ಲಂತೂ ಜನ ಹೊರಗೆ ಕಾಲಿಡಲು ಆಗುತ್ತಿಲ್ಲ. ಏಕೆಂದರೆ ತಾಪಮಾನ ಗರಿಷ್ಠ 45 ಡಿಗ್ರಿ ದಾಖಲಾಗುತ್ತಿದ್ದು, ಸಾರ್ವಜನಿಕರ ನಿತ್ಯವಸರ ಕೆಲಸಗಳನ್ನು ಮುಗಿಸಲು ಪ್ರಯಾಸ ಪಡುವಂತಾಗಿದೆ. ಈ ನಿಟ್ಟಿನಲ್ಲಿ ಹಲವರು ತಮ್ಮ ನಿತ್ಯ ಕೆಲಸ ಕಾರ್ಯಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ಈ ನಡುವೆ ದೆಹಲಿಯ ಆಟೋ ಚಾಲಕನೋರ್ವ ತನ್ನ ಡ್ರೈವಿಂಗ್ ಕೆಲಸಕ್ಕೆ ಬಿಸಲು ಅಡ್ಡಿಯಾಗಬಾರದೆಂಬ ಕಾರಣಕ್ಕೆ ಆಟೋ ಮೆಲೆಯೇ ಸಣ್ಣ ಉದ್ಯಾನವನ್ನು ನಿರ್ಮಿಸಿದ್ದಾನೆ. ರಸ್ತೆಗಳಲ್ಲಿ ಹಳದಿ ಮತ್ತು ಹಸಿರು ಬಣ್ಣದ ಆಟೋಗಳ ನಡುವೆ ಇಂತಹ ಆಟೋರಿಕ್ಷಾವೂ ಓಡುತ್ತಿದ್ದು, ಕೆಲವು ವಿಶೇಷತೆಗಳಿಂದ ಜನರ ಮನ ಗೆಲ್ಲುತ್ತಿದೆ. ಅಲ್ಲದೇ ಒಮ್ಮೆಯಾದರು ಈ ಆಟೋದಲ್ಲಿ ಪ್ರಯಾಣಿಸಬೇಕು ಎಂದು ಪ್ರಯಾಣಿಕರು ಆಸಕ್ತಿ ತೋರುತ್ತಿದ್ದಾರೆ.

ಆಟೋ ಚಾಲಕ ಮಹೇಂದ್ರ ಕುಮಾರ್ ತಮ್ಮ ಆಟೋರಿಕ್ಷಾದ ಮೇಲ್ಛಾವಣಿಯನ್ನು ಚಿಕ್ಕ ಉದ್ಯಾನವನ್ನಾಗಿ ಪರಿವರ್ತಿಸಿದ್ದಾರೆ, ಅವರ ನಾವೀನ್ಯತೆ ಮತ್ತು ಕೌಶಲ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೇಸಿಗೆಯಲ್ಲಿ ಆಟೊವನ್ನು ತಂಪಾಗಿಡಲು ಛಾವಣಿಯನ್ನೇ ಉದ್ಯಾನವನ್ನಾಗಿ ಪರಿವರ್ತಿಸುವ ಯೋಚನೆಯನ್ನು ಮಾಡಿದ್ದೇನೆ ಎನ್ನುತ್ತಾರೆ ಮಹೇಂದ್ರ. ಇದರಿಂದಾಗಿ ಅವರಿಗೂ ತಂಪು, ಪ್ರಯಾಣಿಕರು ಕೂಡ ಆರಾಮವಾಗಿ ಪ್ರಯಾಣಿಸುತ್ತಿದ್ದಾರೆ.

ಛಾವಣಿಯ ಉದ್ಯಾನ
ಆಟೋ ಛಾವಣಿಯನ್ನು ಉದ್ಯಾನವನವನ್ನಾಗಿ ನಿರ್ಮಿಸಲು, ಅವರು ಆಟೋರಿಕ್ಷಾದ ಮೇಲ್ಛಾವಣಿಯ ಮೇಲೆ ಒರಟಾದ ಪ್ಯಾಚ್ ಅನ್ನು ಹಾಕಿ, ಅದರ ಸುತ್ತಲೂ ಮಣ್ಣನ್ನು ತುಂಬಿ ರಾಗಿ, ಟೊಮ್ಯಾಟೊ, ಲೆಟಿಸ್ ಸೇರಿದಂತೆ 20 ವಿವಿಧ ರೀತಿಯ ಹೂವುಗಳು ಮತ್ತು ಗಿಡಗಳನ್ನು ನೆಟ್ಟಿದ್ದಾರೆ. ಇದು ಛಾವಣಿಯನ್ನು ಸಂಪೂರ್ಣವಾಗಿ ಆವರಿಸಿದ್ದು, ಸಣ್ಣ ಪಾರ್ಕ್ನಂತೆ ಕಾಣುತ್ತಿದೆ.

ಈ ಆಟೋ ಜನಸಂದಣಿಯಲ್ಲಿ ಎದ್ದು ಕಾಣುತ್ತಿದೆ. ಅಲ್ಲದೇ ತಾನು ಸಂಚಿರಿಸುವ ಪ್ರದೇಶದಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಎಂದು ಆಟೋ ಚಾಲಕ ಹೇಳಿದ್ದಾರೆ. ಆಟೋದಲ್ಲಿ ಕುಳಿತವರು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡುವ ಮೂಲಕ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಆಟೋ ಚಾಲಕನಿಗೆ ಪ್ರಶಂಸೆಗಳ ಸುರಿಮಳೆ ಗೈಯ್ಯುತ್ತಿದ್ದಾರೆ.

ಸುಮಾರು 2 ವರ್ಷಗಳ ಹಿಂದೆಯೇ ಈ ಐಡಿಯಾ ಬಂದಿದ್ದು, ಅಂದಿನಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಆಟೋದ ಮೇಲ್ಛಾವಣಿಯಲ್ಲಿ ತೋಟಗಳನ್ನು ಹಾಕುತ್ತಿರುವುದಾಗಿ ಆಟೋ ಚಾಲಕ ಮಹೇಂದ್ರ ಹೇಳಿದ್ದಾರೆ. ಈ ಆಟೋ ದೆಹಲಿಯ 45 ಡಿಗ್ರಿ ತಾಪಮಾನದಲ್ಲೂ ತಂಪಾಗಿರುತ್ತದೆ. ಅಲ್ಲದೇ ಕಾರಿನಲ್ಲಿನ ಹವಾನಿಯಂತ್ರಣದ ಅನುಭವವನ್ನು ನೀಡುತ್ತದೆ ಎಂದು ಚಾಲಕ ಮಹೇಂದ್ರ ಹೇಳಿದರು.

ಆಟೋ ಒಳಗೆ ಫ್ಯಾನ್ ಅಳವಡಿಕೆ
ಉದ್ಯಾನವನವಷ್ಟೇ ಅಲ್ಲ, ಈ ಆಟೋದೊಳಗೆ ಮಹೇಂದ್ರ ಇನ್ನಷ್ಟು ಜುಗಾಡ್ಗಳನ್ನು ಹಾಕಿ ಪ್ರಯಾಣಿಕರನ್ನು ತಂಪಾಗಿಸಿದ್ದಾನೆ. ಆಟೋದೊಳಗೆ ಎರಡು ಸಣ್ಣ ಕೂಲರ್ಗಳು ಮತ್ತು ಫ್ಯಾನ್ಗಳನ್ನು ಸಹ ಅಳವಡಿಸಲಾಗಿದೆ. ಮಹೇಂದ್ರ ಅವರ ಪ್ರಕಾರ ದೆಹಲಿಯ ಬಿಸಿಲಿನ ಬೇಗೆಯಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸೌಕರ್ಯ ಮತ್ತು ತಂಪಾಗಿ ಅವರ ಪ್ರಯಾಣವು ಸುಗಮವಾಗುವಂತೆ ಮಾಡುವುದು ಅವರ ಪ್ರಯತ್ನವಾಗಿದೆ.

ಇನ್ನು ಈ ಆಟೋದಲ್ಲಿ ಪ್ರಯಾಣಿಸುವವರಿಗೆ ಯಾವುದೇ ಹೆಚ್ಚುವರಿ ಹಣವನ್ನು ಕೇಳುತ್ತಿಲ್ಲ. ಮೀಟರ್ ಎಷ್ಟು ಓಡುತ್ತದೋ ಅಷ್ಟೇ ಹಣವನ್ನು ಪಡೆಯಲಾಗುತ್ತಿದೆ. ಆದರೆ ಗ್ರಾಹಕರೇ ಈ ಆಟೋ ಚಾಲಕನ ಐಡಿಯಾಗೆ ಮೆಚ್ಚಿ ಹೆಚ್ಚುವರಿ ಹಣವನ್ನು ಪಾವತಿಸುತ್ತಿದ್ದಾರೆ. ಇದರಿಂದ ಆಟೋಚಾಲಕ ಕೂಡ ತನ್ನ ಆಟೋದಲ್ಲಿನ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಮುಂದಾಗಿದ್ದಾನೆ.

ಒಮ್ಮೆ ಈ ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು ಜೀವಮಾನವಿಡೀ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಮಹೇಂದ್ರ. ಈ ಆಟೋದಲ್ಲಿ ಪ್ರಯಾಣಿಸಿದ ನಂತರ ಗ್ರಾಹಕರು 10-20 ರೂಪಾಯಿ ಹೆಚ್ಚು ಪಾವತಿಸಲು ಹಿಂಜರಿಯುವುದಿಲ್ಲ. ನನ್ನ ಈ ಹೊಸ ಪ್ರಯತ್ನ ಪ್ರಯಾಣಿಕರಿಗೂ ಹೊಸ ಅನುಭವ ನೀಡುತ್ತಿದ್ದು, ಕೆಲ ಪ್ರಯಾಣಿಕರು ನನ್ನ ನಂಬರ್ ಪಡೆದು ಕೆಲಸವಿದ್ದಾಗ ಕೆರೆ ಮಾಡಿ ನನ್ನ ಆಟೋದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದರು.

ಸಾಮಾನ್ಯವಾಗಿ ದೆಹಲಿಯಲ್ಲಿ ಬೇಸಿಗೆ ಕಾಲದಲ್ಲಿ ಜನರ ಸಂಚಾರ ತುಂಬಾ ಕಡಿಮೆಯಾಗಿರುತ್ತದೆ. ಆದರೆ ಇಂತಹ ಆಟೋಗಳಿಂದ ಜನರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಬೇಸಿಗೆಯಲ್ಲು ಹೊರ ಬರಬಹುದು ಎಂಬ ಉದ್ದೇಶದಿಂದ ಹಲವರು ಆಟೋ ಚಾಲಕರು ಛಾವಣಿಯ ಮೇಲೆ ಉದ್ಯಾನವನ್ನು ಇಡಲು ಮುಂದಾಗಿದ್ದು, ಮುಂದಿನ ದಿಗಳಲ್ಲಿ ಈ ಆಲೋಚನೆಯು ಇನ್ನಷ್ಟು ಆಟೋಚಾಲಕರಿಗೆ ಉತ್ತಮ ಆದಾಯ ಗಳಿಕೆಯಲ್ಲಿ ಸಹಾಯವಾಗಲಿದೆ.


Click it and Unblock the Notifications