ದೊಡ್ಡ ದೊಡ್ಡ ಕಂಪನಿಗಳೇ ತಲೆ ತಗ್ಗಿಸುವಂತೆ ಮಾಡಿದ ಸಾಮಾನ್ಯ ರೈತ
ಕರೋನಾ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ 24ರಿಂದ ದೇಶಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಯಿತು. ಲಾಕ್ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆಗಳಾದ ಬಸ್, ರೈಲು, ವಿಮಾನ, ಆಟೋ ಹಾಗೂ ಟ್ಯಾಕ್ಸಿಗಳ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.

ಇದರಿಂದಾಗಿ ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದರು. ಯಾವುದೇ ಸಾರಿಗೆ ಸೌಲಭ್ಯಗಳಿಲ್ಲದ ಕಾರಣಕ್ಕೆ ಕೆಲವರು ಸೈಕಲ್ ಸೇರಿದಂತೆ ತಮ್ಮ ಸ್ವಂತ ವಾಹನಗಳಲ್ಲಿ ನೂರಾರು ಕಿ.ಮೀ ಪ್ರಯಾಣಿಸಿ ತಮ್ಮ ಊರುಗಳನ್ನು ತಲುಪಿದರು. ಇನ್ನೂ ಕೆಲವರು ಕಾಲ್ನಡಿಗೆಯಲ್ಲಿ ಮನೆಗೆ ಮರಳಿದರು.

ಕೆಲವರು ಸಾವಿರಾರು ಕಿ.ಮೀಗಿಂತಲೂ ಹೆಚ್ಚು ದೂರ ನಡೆಯಬೇಕಾಯಿತು. ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತಂದ ಕಂಪನಿಗಳು ಅವರ ನೆರವಿಗೆ ಧಾವಿಸಲಿಲ್ಲ. ಕೆಲ ರಾಜ್ಯ ಸರ್ಕಾರಗಳೂ ಸಹ ಹೊರ ರಾಜ್ಯಗಳ ಕಾರ್ಮಿಕರ ನೆರವಿಗೆ ಧಾವಿಸದೇ ಗಂಭೀರ ಆರೋಪಗಳನ್ನು ಎದುರಿಸಬೇಕಾಯಿತು.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆದರೆ ಬಾಬನ್ ಸಿಂಗ್ ಎಂಬ ರೈತ ತಮ್ಮ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ನೆರವಿಗೆ ಧಾವಿಸಿ ಸುದ್ದಿಯಾಗಿದ್ದಾರೆ. ಬಾಬನ್ ಸಿಂಗ್ ದೆಹಲಿಯ ಬಳಿಯಿರುವ ಜಿಪುರ ಎಂಬ ಹಳ್ಳಿಯಲ್ಲಿ ಅಣಬೆ ಬೆಳೆಯುತ್ತಾರೆ. ಅವರು ಮೇ ತಿಂಗಳಿನಲ್ಲಿ ತಮ್ಮ ಬಳಿ ಕೆಲಸಕ್ಕಿರುವ 10 ಕಾರ್ಮಿಕರನ್ನು ಅವರ ಊರುಗಳಿಗೆ ವಿಮಾನದಲ್ಲಿ ಕಳುಹಿಸಿದ್ದಾರೆ.

ದೊಡ್ಡ ದೊಡ್ಡ ಕಂಪನಿಗಳೇ ತಮ್ಮ ಉದ್ಯೋಗಿಗಳನ್ನು ವಿಮಾನದಲ್ಲಿ ಕಳುಹಿಸಿಲ್ಲ. ಆದರೆ ಲಾಕ್ಡೌನ್ ಕಾರಣಕ್ಕೆ ಸಾಮಾನ್ಯ ರೈತನೊಬ್ಬ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಕಳುಹಿಸಿದ್ದು ದೊಡ್ಡ ಸುದ್ದಿಯಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಇಷ್ಟಕ್ಕೆ ಸುಮ್ಮನಾಗದ ಬಾಬನ್ ಸಿಂಗ್ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ವಿಮಾನದ ಮೂಲಕ ಊರುಗಳಿಗೆ ತೆರಳಿದ್ದ 10 ಕಾರ್ಮಿಕರು ದೆಹಲಿಗೆ ವಾಪಸ್ ಬರಲು ವಿಮಾನದ ಟಿಕೆಟ್ ಗಳನ್ನು ಬುಕ್ ಮಾಡಿದ್ದಾರೆ. ಆ 10 ಜನರಿಗೆ ತಮ್ಮೊಂದಿಗೆ ಇನ್ನೂ 10 ಜನರನ್ನು ಕರೆತರುವಂತೆ ತಿಳಿಸಿ, 20 ಟಿಕೆಟ್ ಗಳನ್ನು ಬುಕ್ ಮಾಡಿದ್ದಾರೆ.

20 ಮಂದಿ ದೆಹಲಿಗೆ ಬರಲು ಬಾಬನ್ ಸಿಂಗ್ ರೂ.1 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ದೆಹಲಿಗೆ ವಾಪಸಾದ ನಂತರ ಆ ಕಾರ್ಮಿಕರು ಅಣಬೆ ಕೃಷಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ 20 ಜನರಲ್ಲಿ 10 ಜನರು ಮೊದಲ ಬಾರಿಗೆ ವಿಮಾನದಲ್ಲಿ ಸಂಚರಿಸುತ್ತಿದ್ದಾರೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಗಸ್ಟ್ 27ರಂದು ಈ ಎಲ್ಲಾ ಕಾರ್ಮಿಕರು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ವಿಮಾನದ ಮೂಲಕ ದೆಹಲಿಗೆ ವಾಪಸಾಗುತ್ತಿರುವ ಕಾರ್ಮಿಕರಲ್ಲಿ ಬಿಹಾರದ ಸಮಸ್ತಿಪುರ ಜಿಲ್ಲೆಯ ನವೀನ್ ರಾಮ್ ಸಹ ಒಬ್ಬರು.

ಈ ಬಗ್ಗೆ ಮಾತನಾಡಿರುವ ಅವರು ಮೇ ತಿಂಗಳಿನಲ್ಲಿ ಮೊದಲ ಬಾರಿಗೆ ವಿಮಾನ ಏರುವಾಗ ಭಯವಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ರೀತಿಯ ಭಯವಾಗುತ್ತಿಲ್ಲ. ವಿಮಾನದ ಬದಲು ರೈಲು ಮೂಲಕ ಬರಲು ಪ್ರಯತ್ನಿಸಿದೆವು. ಆದರೆ ಯಾವುದೇ ರೈಲುಗಳಿಲ್ಲ ಎಂದು ಹೇಳಿದ್ದಾರೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಆಗಸ್ಟ್ ತಿಂಗಳಿನಲ್ಲಿ ಅಣಬೆ ಕೃಷಿಯ ಋತುಮಾನವು ಆರಂಭವಾಗುತ್ತದೆ. ರೈಲುಗಳಿಗಾಗಿ ಕಾಯುತ್ತಿದ್ದರೆ ಅಣಬೆ ಕೃಷಿ ಮಾಡಲಾಗುವುದಿಲ್ಲ. ನಾನು ಈ ಬಗ್ಗೆ ನಮ್ಮ ಬಾಸ್ ಗೆ ಹೇಳಿದಾಗ ಅವರು ವಿಮಾನದಲ್ಲಿ ಟಿಕೆಟ್ಗಳನ್ನು ಬುಕ್ ಮಾಡುವುದಾಗಿ ತಿಳಿಸಿದರು ಎಂದು ನವೀನ್ ರಾಮ್ ಹೇಳಿದ್ದಾರೆ.

ಬಾಬನ್ ಸಿಂಗ್, ಎಲ್ಲಾ ಕಾರ್ಮಿಕರು ತಮ್ಮ ಊರುಗಳಿಂದ ಬಿಹಾರ ರಾಜಧಾನಿ ಪಾಟ್ನಾದಲ್ಲಿರುವ ವಿಮಾನ ನಿಲ್ದಾಣಕ್ಕೆ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.ಬಾಬನ್ ಸಿಂಗ್ ಪ್ರತಿವರ್ಷ 3 ಎಕರೆಗಿಂತ ಹೆಚ್ಚು ಭೂಮಿಯಲ್ಲಿ ಅಣಬೆಗಳನ್ನು ಬೆಳೆಯುತ್ತಾರೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಆದರೆ ಈ ಬಾರಿ ಕರೋನಾ ವೈರಸ್ ಕಾರಣದಿಂದಾಗಿ ಕೇವಲ 1 ಎಕರೆಯಲ್ಲಿ ಅಣಬೆ ಬೆಳೆಯಲಿದ್ದಾರೆ. ನಾನು ನನ್ನ ಬಳಿ ಕೆಲಸ ಮಾಡುವವರನ್ನು ನನ್ನ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇನೆ.

ಅವರು ನನ್ನ ಬಳಿ 15-20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬಾಸ್ ಎಂದರೆ ಈ ರೀತಿ ಇರಬೇಕು ಎಂದು ಬಾಬನ್ ಸಿಂಗ್ ರವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸಿಸಲಾಗುತ್ತಿದೆ.
ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.


Click it and Unblock the Notifications