ಕಂಡವರ ಬೈಕಿಗೆ ಬೆಂಕಿಯಿಟ್ಟು ಮನೆಗೆ ಹೋದ: ಪೊಲೀಸರಿಗೆ ಸಿಂಪಲ್ ಕಾರಣ ಕೊಟ್ಟ!
ದೇಶದಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ, ಇವಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಆ ಕುರಿತ ಚರ್ಚೆಗಳು ಹೆಚ್ಚಾಗುತ್ತವೆ. ಇತ್ತೀಚೆಗೆ ಇಂತಹದ್ದೇ ಘಟನೆಯೊಂದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದೆಹಲಿಯ ವ್ಯಕ್ತಿಯೊಬ್ಬ ಬೈಕ್ವೊಂದಕ್ಕೆ ಬೆಂಕಿಯಿಟ್ಟಿರುವ ಘಟನೆ ನಡೆದಿದ್ದು, ಇದಕ್ಕೆ ಆತ ಕೊಟ್ಟ ಕಾರಣ ಅಚ್ಚರಿಗೊಳಿಸಿದೆ.
ದೆಹಲಿಯಲ್ಲಿ ಚಳಿ ಆವರಿಸುತ್ತಿದ್ದಂತೆಯೇ ನಗರದ ಪುಲ್ ಪ್ರಹ್ಲಾದ್ಪುರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮೈ ಬೆಚ್ಚಗಾಗಲು ಮೋಟಾರ್ ಸೈಕಲ್ಗೆ ಬೆಂಕಿ ಹಚ್ಚಿದ ಘಟನೆ ಗುರುವಾರ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ 2.5 ನಿಮಿಷಗಳ ವೀಡಿಯೊದಲ್ಲಿ, ಕಿಶನ್ ಕುಮಾರ್ ಎಂಬಾತ ಮನೆ ಮುಂದೆ ನಿಲ್ಲಿಸಿದ್ದ ಮೋಟಾರ್ಸೈಕಲ್ಗೆ ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು.

ಉರಿಯುತ್ತಿರುವ ದ್ವಿಚಕ್ರ ವಾಹನದ ಮುಂದೆ ಕುಮಾರ್ ಸ್ವಲ್ಪ ಹೊತ್ತು ನಿಂತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮಧ್ಯ ರಾತ್ರಿ 3 ಗಂಟೆ ಸುಮಾರಿಗೆ ಕುಮಾರ್ ಯಾರೂ ಇಲ್ಲದಿರುವುದನ್ನು ಗಮನಿಸಿ ಹೀರೋ ಸ್ಪ್ಲೆಂಡರ್ ಮೋಟಾರ್ಸೈಕಲ್ ಮೇಲೆ ಗೋಣಿಚೀಲವನ್ನು ಹಾಕಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೋಟಾರು ಸೈಕಲ್ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ನಂತರ, ವಾಹನದ ಮಾಲೀಕ ಮತ್ತು ನೆರೆಯವರು ತಮ್ಮ ಮನೆಗಳಿಂದ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. "ನಮಗೆ ಮುಂಜಾನೆ 4.37 ಕ್ಕೆ ಕರೆ ಬಂದಿದೆ, ಸ್ಥಳಕ್ಕೆ ತಂಡವನ್ನು ಕಳುಹಿಸಲಾಯಿತು. ಅಗ್ನಿಶಾಮಕ ಇಲಾಖೆಯ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು. ಆದರೆ ಆ ಹೊತ್ತಿಗೆ ಮೋಟಾರ್ಸೈಕಲ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕುಮಾರ್ನನ್ನು ಗುರುತಿಸಿ ಆತನನ್ನು ಆತನ ಮನೆಯಿಂದ ಬಂಧಿಸಲಾಗಿದೆ. ತುಂಬಾ ಚಳಿಯಿದ್ದ ಕಾರಣ ಮೋಟಾರ್ ಸೈಕಲ್ಗೆ ಬೆಂಕಿ ಹಚ್ಚಿದ್ದೇನೆ ಎಂದು ಕುಮಾರ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 435 (ಬೆಂಕಿ ಅಥವಾ ಸ್ಫೋಟಕ ವಸ್ತುಗಳಿಂದ ಹಾನಿ ಮಾಡುವ ಉದ್ದೇಶದಿಂದ ಕಿಡಿಗೇಡಿತನ) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲ ನಿವಾಸಿಗಳು ಘಟನೆಯ ಮೊದಲು ಅದೇ ಸ್ಥಳದ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲಿ ಕುಮಾರ್ ಕುಳಿತಿರುವುದನ್ನು ನೋಡಿದ್ದಾರೆ. ಕುಮಾರ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು, ಘಟನೆ ನಡೆದ ಅದೇ ಬ್ಲಾಕ್ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ಈ ಘಟನೆ ನಡೆದಾಗ ಕುಮಾರ್ಗೆ ಯಾರಾದ್ರು ಸಾಥ್ ನೀಡಿದ್ದರಾ ಎಂಬುದರ ಕುರಿತು ವಿಚಾರಿಸಲಾಗುತ್ತಿದೆ.
ಆತ ಮದ್ಯದ ಅಮಲಿನಲ್ಲಿದ್ದಾನೋ ಅಥವಾ ಯಾವುದಾದರೂ ಮಾದಕ ದ್ರವ್ಯ ಸೇವಿಸಿದ್ದಾನೋ ಎಂದು ತಿಳಿಯಲು ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಹಾಗೆಯೇ ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದು, ಮೋಟಾರ್ ಸೈಕಲ್ ಮಾಲೀಕನಿಗೆ ಪರಿಹಾರ ಕೊಡಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರು ತಿಳಿಸಿಲ್ಲ.
ವಿಕೃತ ಮನಸ್ಥಿತಿಗಳನ್ನು ಹೊಂದಿರುವ ಕೆಲವರು ನಮ್ಮ ಮಧ್ಯೆಯೇ ಸಾಮನ್ಯರಂತೆ ಓಡಾಡಿಕೊಂಡು ಇರುತ್ತಾರೆ. ಇಂಥವರನ್ನು ಪತ್ತೆಹಚ್ಚುವುದು ಕೂಡ ತುಂಬಾ ಕಷ್ಟ, ಆದ್ರೂ ಸ್ಥಳೀಯ ಸಿಸಿ ಕ್ಯಾಮರ ದೃಷ್ಯಾವಳಿಗಳು ಆರೋಪಿಯನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ನಮ್ಮ ಜಾಗೃತಿಯಲ್ಲಿ ನಾವಿದ್ದು, ಪ್ರತಿ ಮನೆ ಅಥವಾ ಆಯಾ ಸಣ್ಣ ರಸ್ತೆಗಳಿಗೆ ಕನಿಷ್ಠ ಒಂದು ಸಿಸಿ ಕ್ಯಾಮರಾ ಇರುವುದು ತುಂಬಾ ಮುಖ್ಯ ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications