ಟೋಲ್ ಪ್ಲಾಜಾಗಳಿಲ್ಲದೇ ಟೋಲ್ ಶುಲ್ಕ ಸಂಗ್ರಹಿಸುವ ದೇಶದ ಮೊದಲ ಎಕ್ಸ್ಪ್ರೆಸ್ವೇಯಿದು
ದೆಹಲಿ - ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸುವ ವಾಹನ ಸವಾರರ ಪ್ರಯಾಣವು ಸೆಪ್ಟೆಂಬರ್ 1 ರಿಂದ ದುಬಾರಿಯಾಗಲಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಮಾರ್ಗದಲ್ಲಿ ಸೆಪ್ಟೆಂಬರ್ 1 ರಿಂದ ಟೋಲ್ ಸಂಗ್ರಹಿಸಲು ಸಿದ್ಧತೆ ನಡೆಸಿದೆ. ದೇಶದಲ್ಲಿ ಮೊದಲ ಬಾರಿಗೆ ಟೋಲ್ ಪ್ಲಾಜಾಗಳಿಲ್ಲದೆ ಈ ಎಕ್ಸ್ಪ್ರೆಸ್ವೇಯಲ್ಲಿ ಟೋಲ್ ಶುಲ್ಕ ಸಂಗ್ರಹವನ್ನು ಆರಂಭಿಸಲಾಗುವುದು.

ದೆಹಲಿ - ಮೀರತ್ ಎಕ್ಸ್ಪ್ರೆಸ್ವೇ, ಈ ವರ್ಷದ ಏಪ್ರಿಲ್ನಲ್ಲಿ ಸಾರ್ವಜನಿಕರ ಸಂಚಾರಕ್ಕಾಗಿ ತೆರೆಯಲ್ಪಟ್ಟಿತು. ಆರು ಪಥಗಳ ರೈಲ್ವೇ ಮೇಲ್ಸೇತುವೆ (ಆರ್ಒಬಿ) ಸಿದ್ಧವಾಗದ ಕಾರಣ ವಾಹನ ಸವಾರರಿಂದ ಟೋಲ್ ಶುಲ್ಕ ಸಂಗ್ರಹವನ್ನು ಆರಂಭಿಸಿರಲಿಲ್ಲ. ಈಗ ಆರ್ಒಬಿ ಸಿದ್ಧವಾಗಿರುವುದರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ಟೋಲ್ ಶುಲ್ಕ ಸಂಗ್ರಹಕ್ಕಾಗಿ ರಸ್ತೆ ಸಾರಿಗೆ ಇಲಾಖೆಯ ಅನುಮೋದನೆಯನ್ನು ಕೋರಿದೆ.

ಸಾರಿಗೆ ಇಲಾಖೆಯಿಂದ ಅನುಮೋದನೆ
ಸಾರಿಗೆ ಇಲಾಖೆಯು ಈ ಮಾರ್ಗದಲ್ಲಿ ಟೋಲ್ ಶುಲ್ಕ ಸಂಗ್ರಹಿಸಲು ಮೌಖಿಕವಾಗಿ ಅನುಮತಿಯನ್ನು ನೀಡಿದೆ. ಈಗ ಲಿಖಿತ ಅನುಮೋದನೆಗಾಗಿ ಕಾಯಲಾಗುತ್ತಿದೆ. ಅನುಮೋದನೆ ಪಡೆದ ನಂತರ ಎನ್ಎಚ್ಎಐ ಟೋಲ್ ದರಗಳನ್ನು ಪ್ರಕಟಿಸಲಿದೆ. ಇದರ ನಂತರ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹವನ್ನು ಆರಂಭಿಸಲಾಗುವುದು. ಕೇಂದ್ರ ಸಾರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, ಸೆಪ್ಟೆಂಬರ್ 1 ರಿಂದ ಟೋಲ್ ಶುಲ್ಕ ಸಂಗ್ರಹವಾಗುವ ಸಾಧ್ಯತೆಗಳಿವೆ.

ದುಬಾರಿ ಶುಲ್ಕ
ರಸ್ತೆ ಸಾರಿಗೆ ಇಲಾಖೆಯು ಈಗಾಗಲೇ ಟೋಲ್ ಶುಲ್ಕವನ್ನು ಅಂದಾಜು ಮಾಡಿದೆ. ಮಾಹಿತಿಗಳ ಪ್ರಕಾರ ಈ ಎಕ್ಸ್ಪ್ರೆಸ್ವೇಯಲ್ಲಿ ಟೋಲ್ ಶುಲ್ಕವನ್ನು ಎರಡು ದರದಲ್ಲಿ ವಿಧಿಸಲಾಗುತ್ತದೆ. ಮೊದಲಿಗೆ ಹೆಚ್ಚು ಅಂಡರ್ಪಾಸ್ಗಳು ಅಥವಾ ಆರ್ಒಬಿಗಳು ಇರುವ ಕಡೆ ಟೋಲ್ ಶುಲ್ಕವನ್ನು ಪ್ರತಿ ಕಿ.ಮೀಗೆ ರೂ. 2 ರಂತೆ ವಿಧಿಸಲಾಗುತ್ತದೆ.

ಕಡಿಮೆ ಅಂಡರ್ಪಾಸ್ಗಳು ಇರುವ ಕಡೆ ಪ್ರತಿ ಕಿ.ಮೀಗೆ 1 ರೂಪಾಯಿ 60 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಈ ಎಕ್ಸ್ಪ್ರೆಸ್ವೇ ಮೂಲಕ ದೇಶದ ರಾಜಧಾನಿ ದೆಹಲಿಯಿಂದ ಮೀರತ್ಗೆ ಬರುವ ವಾಹನಗಳು ಸರಾಸರಿ ರೂ. 120 ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ.

ಟೋಲ್ ಪ್ಲಾಜಾ ಇಲ್ಲದೆ ಟೋಲ್ ಸಂಗ್ರಹ
ದೆಹಲಿ - ಮೀರತ್ ಎಕ್ಸ್ಪ್ರೆಸ್ವೇ ಟೋಲ್ ಬೂತ್ಗಳಿಲ್ಲದೆ ಟೋಲ್ ಶುಲ್ಕ ಸಂಗ್ರಹಿಸುವ ದೇಶದ ಮೊದಲ ಎಕ್ಸ್ಪ್ರೆಸ್ವೇ ಆಗಿರಲಿದೆ. ಇದರ ಜೊತೆಗೆ ಈ ಎಕ್ಸ್ಪ್ರೆಸ್ವೇ ವಾಹನಗಳು ಸಂಚರಿಸುವ ದೂರಕ್ಕೆ ಅನುಗುಣವಾಗಿ ಟೋಲ್ ಶುಲ್ಕ ವಿಧಿಸುವ ದೇಶದ ಮೊದಲ ಎಕ್ಸ್ಪ್ರೆಸ್ವೇ ಆಗಲಿದೆ.

ಈ ರೀತಿ ಶುಲ್ಕ ವಿಧಿಸುವುದಕ್ಕಾಗಿ ಈ ಎಕ್ಸ್ಪ್ರೆಸ್ವೇನಲ್ಲಿ 130 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡರ್ (ಎಎನ್ಪಿಆರ್) ಕ್ಯಾಮೆರಾಗಳನ್ನು ಸಂಪೂರ್ಣ ಎಕ್ಸ್ ಪ್ರೆಸ್ ವೇನಲ್ಲಿ ಅಳವಡಿಸಲಾಗಿದ್ದು, ಕಳೆದ ಮೂರು ತಿಂಗಳಿನಿಂದ ಇದರ ಪ್ರಯೋಗ ನಡೆಸಲಾಗುತ್ತಿದೆ.

ಯೋಜನಾ ವೆಚ್ಚ
ದೆಹಲಿ - ಮೀರತ್ ಎಕ್ಸ್ಪ್ರೆಸ್ವೇ, 60 ಕಿ.ಮೀ ಉದ್ದದ ಎಕ್ಸ್ಪ್ರೆಸ್ವೇ ಹಾಗೂ 22 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿದೆ. ಈ ಎಕ್ಸ್ಪ್ರೆಸ್ವೇಯನ್ನು ಸುಮಾರು ರೂ. 8,346 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಾಹನ ಸವಾರರ ಅನುಕೂಲಕ್ಕಾಗಿ ಈ ಎಕ್ಸ್ಪ್ರೆಸ್ವೇಯಲ್ಲಿ ಆಂಬ್ಯುಲೆನ್ಸ್, ಕ್ರೇನ್, ಪೆಟ್ರೋಲ್ ಬಂಕ್, ರೆಸ್ಟೋರೆಂಟ್, ವಾಹನ ನಿರ್ವಹಣೆ ಅಂಗಡಿಗಳಂತಹ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.

ದೆಹಲಿ - ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಸೈಕ್ಲಿಸ್ಟ್ಗಳಿಗಾಗಿ ಹಾಗೂ ಪಾದಚಾರಿಗಳಿಗಾಗಿ ವಿಶೇಷ ಟ್ರ್ಯಾಕ್ ನಿರ್ಮಿಸಲಾಗಿದೆ. ಎಕ್ಸ್ಪ್ರೆಸ್ವೇಯ 1 ಹಾಗೂ 2 ನೇ ಹಂತದ ರಸ್ತೆಗಳು 2.5 ಮೀಟರ್ ಸೈಕಲ್ ಕಾರಿಡಾರ್ ಹಾಗೂ 2 ಮೀಟರ್ ಅಗಲದ ಫುಟ್ ಪಾತ್ ಹೊಂದಿವೆ. ಫುಟ್ ಪಾತ್ ಹಾಗೂ ಸೈಕಲ್ ಟ್ರ್ಯಾಕ್ ಗಳಲ್ಲಿ ಪ್ರತ್ಯೇಕ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ.

ದೆಹಲಿ - ಮೀರತ್ ಎಕ್ಸ್ ಪ್ರೆಸ್ ವೇಯಿಂದಾಗಿ ದೆಹಲಿ ಹಾಗೂ ಮೀರತ್ ನಡುವಿನ ಪ್ರಯಾಣ ಅವಧಿಯು 2.5 ಗಂಟೆಗಳಿಂದ ಕೇವಲ 45 ನಿಮಿಷಗಳಿಗೆ ಇಳಿದಿದೆ.ಈ ಎಕ್ಸ್ಪ್ರೆಸ್ವೇಯಲ್ಲಿ ವಾಹನಗಳ ಗರಿಷ್ಠ ವೇಗದ ಮಿತಿ 80 ಕಿ.ಮೀಗಳಿಂದ 100 ಕಿ.ಮೀಗಳವರೆಗೆ ಇರಲಿದೆ.

ಕೇಂದ್ರ ಸಾರಿಗೆ ಇಲಾಖೆಯು ಹೊಸ ಹೊಸ ಹೆದ್ದಾರಿಗಳನ್ನು ಹಾಗೂ ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸುವ ಮೂಲಕ ಹಲವು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತಿದೆ. ನಮ್ಮ ಕರ್ನಾಟಕದಲ್ಲಿಯೂ ಸಹ ಬೆಂಗಳೂರು - ಮೈಸೂರು ನಡುವಿನ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈ ಹೆದ್ದಾರಿ ಸಂಚಾರಕ್ಕೆ ತೆರೆದುಕೊಂಡ ನಂತರ ಈ ಎರಡು ನಗರಗಳ ನಡುವಿನ ಸಂಚಾರ ಅವಧಿಯು 90 ನಿಮಿಷಗಳಿಗೆ ಇಳಿಯಲಿದೆ.

ಈಗ ಇರುವ ಹೆದ್ದಾರಿಯಲ್ಲಿ ಈ ಎರಡು ನಗರಗಳ ನಡುವೆ ಸಂಚರಿಸಲು ಸುಮಾರು 3 ಗಂಟೆ ಬೇಕಾಗುತ್ತದೆ. ಈ ಹೆದ್ದಾರಿಯು ಮುಂದಿನ ವರ್ಷ ಸಾರ್ವಜನಿಕರ ಬಳಕೆಗೆ ತೆರೆದು ಕೊಳ್ಳಲಿದೆ ಎಂದು ಇತ್ತೀಚಿಗಷ್ಟೇ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಸಚಿವರಾದ ನಿತಿನ್ ಗಡ್ಕರಿರವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದರು.


Click it and Unblock the Notifications