Metro: ರೈತನಿಗೆ ಮೆಟ್ರೋ ಪ್ರವೇಶ ನಿರಾಕರಣೆ: ವಿಡಿಯೋ ವೈರಲ್, ಅಧಿಕಾರಿ ವಜಾ
ಬೆಂಗಳೂರಿನಲ್ಲಿ ರೈತನ ಬಟ್ಟೆ ಮೆಟ್ರೋ (Metro) ಪ್ರಯಾಣಕ್ಕೆ ಸೂಕ್ತವಲ್ಲವೆಂದು ತಡೆದಿದ್ದ ಭದ್ರತಾ ಸಿಬ್ಬಂದಿಯೊಬ್ಬರನ್ನು ವಜಾಗೊಳಿಸಲಾಗಿದೆ. ರೈತನನ್ನು ತಡೆದು ಬಟ್ಟೆ ಗಲೀಜಾಗಿದೆ ನಿಮಗೆ ಪ್ರಯಾಣಕ್ಕೆ ಅನುಮತಿಸುವುದಿಲ್ಲ ಎಂದು ಹೇಳಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು, ವೈರಲ್ ಆದ ಬಳಿಕ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಘಟನೆಯು ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ರೈತ ಬಿಳಿ ಶರ್ಟ್ ಧರಿಸಿ, ತಲೆಯ ಮೇಲೆ ಗೋಣಿಚೀಲದಂತೆ ಕಾಣುವ ಮೂಟೆಯೊಂದನ್ನು ಹೊತ್ತಿದ್ದರು. ತಪಾಸಣೆಯಲ್ಲಿ ಮೂಟೆಯಲ್ಲಿ ಏನೂ ಅಪಾಯಕಾರಿ ವಸ್ತುಗಳು ಇರಲಿಲ್ಲ. ಅವರ ಬಟ್ಟೆ ಮಾಸಿಹೋಗಿ ಗಲೀಜಾಗಿ ಕಂಡಿದೆ ಅಷ್ಟೇ..

ವೈರಲ್ ವಿಡಿಯೋದಲ್ಲಿ ಹಿಂದಿ ಮಾತನಾಡುತ್ತಿರುವ ರೈತನಿಗೆ ಪ್ರವೇಶ ನೀಡದ ಕಾರಣ ಚೆಕಿಂಗ್ ಪಾಯಿಂಟ್ನಲ್ಲಿ ಲಗ್ಗೇಜ್ ಸ್ಕಾನರ್ ಬಳಿ ನಿಂತಿರುವುದನ್ನು ಕಾಣಬಹುದು. ಇದೇ ವಿಡಿಯೋವನ್ನು ಮಾಡಿದ ಕಾರ್ತಿಕ್ ಎಂಬಾತ ಸಿಬ್ಬಂದಿ ಬಳಿ ಪ್ರವೇಶ ನಿರಾಕರಣೆಯನ್ನು ಪ್ರಶ್ನಿಸುವುದನ್ನು ನೋಡಬಹುದು. ಇಲ್ಲಿ ಪದೇ ಪದೇ ಬಟ್ಟೆ ಗಲೀಜಿರುವುದನ್ನೇ ಕಾರಣವಾಗಿ ಹೇಳಿರುವುದನ್ನು ಕೇಳಬಹುದು.
ರೈತ ಯಾವುದೇ ಮಾರಣಾಯುಧಗಳನ್ನು ಹೊತ್ತೊಯ್ಯುತ್ತಿಲ್ಲ, ಬದಲಿಗೆ ಅವರು ಕೇವಲ ಬಟ್ಟೆಗಳನ್ನು ಮಾತ್ರ ಚೀಲದಲ್ಲಿ ಹೊತ್ತೊಯ್ಯುತ್ತಿದ್ದಾರೆ. ಇದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಿಯಮಗಳ ಉಲ್ಲಂಘನೆಯೇನಲ್ಲ ಎಂದು ವಿಡಿಯೋ ಮಾಡಿದವರ ಜೊತೆಗೆ ಅಲ್ಲೇ ಇದ್ದ ಮತ್ತೊಬ್ಬ ಪ್ರಯಾಣಿಕ ಅಧಿಕಾರಿಗಳಿಗೆ ಹೇಳುತ್ತಿದ್ದರು.

ಸಾಕಷ್ಟು ಸಮಯ ಸಿಬ್ಬಂದಿಯೊಂದಿಗೆ ವಾದ ಮಾಡಿದ ಬಳಿಕ ರೈತನ ಪ್ರವೇಶಕ್ಕೆ ಒಪ್ಪಿಗೆ ನೀಡಲಾಯಿತು. ಕೇವಲ ಗಲೀಜಿರುವ ಬಟ್ಟೆಯನ್ನು ಹಾಕಿದ್ದ ಕಾರಣ ರೈತನಿಗೆ ಹೀಗೆ ಅವಮಾನ ಮಾಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರವೇಶಕ್ಕೆ ಅಡ್ಡಿಪಡಿಸಿದ ಭದ್ರತಾ ಮೇಲ್ವಿಚಾರಕನನ್ನು ವಜಾಗೊಳಿಸಲಾಗಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ BMRCL, ರೈತರಿಗೆ ಉಂಟಾದ ಅನಾನುಕೂಲತೆಗೆ ನಮ್ಮ ಮೆಟ್ರೋ ವಿಶಾದಿಸುತ್ತದೆ. ನಮ್ಮ ಮೆಟ್ರೋ ಅಂತರ್ಗತ ಸಾರಿಗೆ ವಿಧಾನವಾಗಿದೆ, ಎಲ್ಲರನ್ನೂ ಒಳ್ಳಗೊಳ್ಳುವ ಸಾರ್ವಜನಿಕ ಸಾರಿಗೆಯಾಗಿದೆ. ರಾಜಾಜಿನಗರ ಘಟನೆಯ ಬಗ್ಗೆ ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರನ್ನು ವಜಾಗೊಳಿಸಲಾಗಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

ದೇಶದ ಬೆನ್ನೆಲುಬು ಎಂದು ಮಾತಿಗೆ ಹೇಳಿದರೆ ಸಾಲದು, ಅವರನ್ನು ಅಷ್ಟೇ ಗೌರವಿಸಬೇಕಿದೆ. ಪಠ್ಯಗಳಲ್ಲಿ ರೈತರಿಗೆ ನೀಡುವ ಗೌರವ ನಿಜ ಜೀವನದಲ್ಲಿ ನೀಡುತ್ತಿಲ್ಲ. ರೈತನ ಕಷ್ಟವನ್ನು ತಿಂದು ತೇಗುವ ನಮಗೆ, ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದೇ ಇಲ್ಲ ಎಂಬುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು, ಸಿಬ್ಬಂದಿಯ ವಜಾ ಬಳಿಕ ತಣ್ಣಗಾಗಿದ್ದಾರೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications