ಸಾರಿಗೆ ಇಲಾಖೆಯ ಆದೇಶಕ್ಕೆ ಡೋಂಟ್ ಕೇರ್: ಆಟೋ ಸೇವೆ ಮುಂದುವರೆಸುತ್ತಿರುವ ಓಲಾ, ಉಬರ್
ಮತ್ತೆ ನಗರದಲ್ಲಿ ಟ್ಯಾಕ್ಸಿ ಸಂಸ್ಥೆಗಳು ತಮ್ಮ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಆಟೋ ಸೇವೆಗಳನ್ನು ಮುಂದುವರಿಸುವ ಮೂಲಕ ಸಾರಿಗೆ ಇಲಾಖೆಯ ಆದೇಶವನ್ನು ಕಡೆಗಣಿಸಿದ್ದಾರೆ. ಮಂಗಳವಾರ ಪ್ರತಿನಿಧಿಗಳೊಂದಿಗಿನ ಸಭೆಯ ನಂತರ ಸಾರಿಗೆ ಇಲಾಖೆಯು ಓಲಾ, ಉಬರ್ ಮತ್ತು ರಾಪಿಡೊ ಆಟೋ ಸೇವೆಗಳನ್ನು ಕಾನೂನುಬಾಹಿರವೆಂದು ಉಲ್ಲೇಖಿಸಿ ಸ್ಥಗಿತಗಿಳಿಸಲು ಆದೇಶಿಸಲಾಗಿತ್ತು.

ಬುಧವಾರ (ಅಕ್ಟೋಬರ್ 12) ರಿಂದ ಜಾರಿಗೆ ಬರುವಂತೆ ಆಟೋ ಸೇವೆಗಳನ್ನು ಒಟ್ಟುಗೂಡಿಸದಂತೆ ಇಲಾಖೆಯು ಸೂಚಿಸಿದೆ. ಆದರೂ, ಬುಧವಾರ ಬೆಳಿಗ್ಗೆ ಸೇವೆಗಳನ್ನು ಮುಂದುವರಿಸುವ ಮೂಲಕ ಇಲಾಖೆಯ ಆದೇಶವನ್ನು ಧಿಕ್ಕರಿಸಲಾಗಿದೆ.

ಹೈಕೋರ್ಟ್ ಮೆಟ್ಟಿಲೇರುವ ವಿಚಾರ
ಇಲಾಖೆ ಕೈಗೊಂಡಿರುವ ಕ್ರಮಕ್ಕೆ ತಡೆ ಕೋರಿ ಕರ್ನಾಟಕ ಹೈಕೋರ್ಟ್ನ ಮೊರೆ ಹೋಗಲು ಅಗ್ರಿಗೇಟರ್ಗಳ ಪೈಕಿ ಒಬ್ಬರು ಯೋಜಿಸುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಮಂಗಳವಾರ ಆಟೋ ಸೇವೆಗಳನ್ನು ಮುಂದುವರಿಸದಂತೆ ಸಂಗ್ರಾಹಕರಿಗೆ ನೋಟಿಸ್ ನೀಡಲಾಗಿದೆ. ಇವರಲ್ಲಿ ಒಬ್ಬರು ತಡೆ ಕೋರಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯನ್ನು ಪರಿಗಣಿಸಿ ಇಲಾಖೆಯು ನ್ಯಾಯಾಲಯದ ಮುಂದೆ ಕೇವಿಯಟ್ ಸಲ್ಲಿಸಲಿದೆ. ಕಾನೂನು ಬಾಹಿರ ಸೇವೆಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗುವುದು ಮತ್ತು ತಡೆಯಾಜ್ಞೆ ನೀಡದಂತೆ ಮನವಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಗ್ರಿಗೇಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಉದ್ದೇಶಪೂರ್ವಕವಾಗಿ ಇಲಾಖೆಯು ಸೈಬರ್ ಕ್ರೈಂ ವಿಭಾಗದ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿದೆ. ವಾಹನಗಳನ್ನು ಅಗ್ರಿಗೇಟರ್ಗಳೊಂದಿಗೆ ಕೈ ಜೋಡಿಸಿದ ಚಾಲಕರ ವಿರುದ್ಧ ಇಲಾಖೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ತಪ್ಪಾಗುವಿಕೆಗಳಿಗೆ ಸಂಗ್ರಾಹಕರು ಜವಾಬ್ದಾರರಾಗಿರುತ್ತಾರೆ, ಆಟೋ ಚಾಲಕರಲ್ಲ ಎಂದು ಅಧಿಕಾರಿ ಹೇಳಿದರು.

ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು
ಅಕ್ಟೋಬರ್ 6 ರಂದು, ಹೆಚ್ಚುವರಿ ಶುಲ್ಕ ವಿಧಿಸುವ ದೂರುಗಳ ಹಿನ್ನೆಲೆಯಲ್ಲಿ ಇಲಾಖೆಯು ಸಂಗ್ರಾಹಕರಿಗೆ ನೋಟಿಸ್ ನೀಡಿತ್ತು. ತಕ್ಷಣದಿಂದ ಜಾರಿಗೆ ಬರುವಂತೆ ಆಟೋ ಸೇವೆಗಳನ್ನು ನಿಲ್ಲಿಸುವಂತೆ ಸಂಗ್ರಾಹಕರಿಗೆ ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಅವರಿಂದ ಲಿಖಿತ ಪ್ರತಿಕ್ರಿಯೆಗಳ ನಂತರ, ಇಲಾಖೆಯು ಮಂಗಳವಾರ ಸಭೆ ನಡೆಸಿ ಬುಧವಾರದಿಂದ ಜಾರಿಗೆ ಬರುವಂತೆ ಆಟೊ ಸೇವೆಗಳನ್ನು ನಿಲ್ಲಿಸಲು ಮತ್ತು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಮತ್ತೊಮ್ಮೆ ನೋಟಿಸ್ ಜಾರಿಗೊಳಿಸಲಾಗಿದೆ.

ಸಭೆಯ ನಂತರ, ಸಾರಿಗೆ ಆಯುಕ್ತ T.H.M ಕುಮಾರ್ ಅವರು ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಸಮ್ಮತಿಸಿದ್ದಾರೆ. ಪರವಾನಗಿ ಪಡೆಯುವವರೆಗೆ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಆಟೋ ಸೇವೆಗಳನ್ನು ಸ್ಥಗಿತಗೊಳಿಸುತ್ತಾರೆ ಎಂದು ಹೇಳಿದ್ದರು. ಆದರೆ ಈಗ ಇಲಾಖೆಯ ಆದೇಶವನ್ನು ಧಿಕ್ಕರಿಸಿರುವ ಮೂಲಕ ಇಲಾಖೆ ಮತ್ತು ಅಗ್ರಿಗೇಟರ್ಗಳ ನಡುವಿನ ಜಗಳ ಮುಂದುವರಿಯುವ ಸೂಚನೆ ಕಾಣುತ್ತಿದೆ.

ಆಟೋ ಸೇವೆಗೆ ಏಕೆ ಅನುಮತಿ ಇಲ್ಲ
ಕ್ಯಾಬ್ ಸೇವೆ ಎಂದರೆ ಗರಿಷ್ಟ ಆರು ಮಂದಿಯ ಆಸನ ಸಾಮರ್ಥ್ಯವನ್ನು ಹೊಂದಿರಬೇಕು ಎಂಬ ನಿಯಮವಿದೆ. ಆದರೆ ಒಲಾ, ಉಬರ್, ರಾಪಿಡೋ ಅಗ್ರಿಗೇಟರ್ಗಳು ನಿಯಮ ಮೀರಿ ಆಟೋಗಳನ್ನು ಈ ಸೇವೆಗೆ ಇಳಿಸಿದ್ದಾರೆ. ಅಲ್ಲದೇ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಗ್ರಾಹಕರಿಂದ ಸುಳಿಗೆ ಮಾಡಲಾಗುತ್ತಿದೆ.

ಸಾರಿಗೆ ಇಲಾಖೆಯು ರಾಜ್ಯದ ರಾಜಧಾನಿಯಲ್ಲಿ ಆಟೋಗಳಿಂದ ವಿಧಿಸಬಹುದಾದ ಕನಿಷ್ಠ ದರವಾಗಿ 30 ರೂ. ಇದ್ದರೇ, ಆಟೋ-ಹೇಲಿಂಗ್ ಅಪ್ಲಿಕೇಶನ್ನಿಂದ ಕನಿಷ್ಟ ದರವಾಗಿ ರೂ. 100 ವರೆಗೆ ವಿಧಿಸಲಾಗುತ್ತಿದೆ. ಈ ಕುರಿತ ದೂರುಗಳು ಹೆಚ್ಚಾಗುತ್ತಲೇ ಸಾರಿಗೆ ಇಲಾಖೆ ಎಚ್ಚೆತ್ತು ರಾಜ್ಯ ನಿಗದಿಪಡಿಸಿದ ಕನಿಷ್ಠ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಗೆ ವಿಧಿಸಲಾಗಿದೆ ಎಂಬ ವರದಿಗಳ ಬಗ್ಗೆ ಸರ್ಕಾರ ವಿವರಣೆಯನ್ನು ಕೋರಿತ್ತು.

ದ್ವಿಚಕ್ರ ಸೇವೆಗೂ ಅನುಮತಿ ಪಡೆದಿಲ್ಲ
ಇತ್ತೀಚೆಗೆ ಜನಪ್ರಿಯವಾಗಿರುವ ರಾಪಿಡೋ ಕೂಡ ತನ್ನ ದ್ವಿಚಕ್ರ ವಾಹನ ಸೇವೆಗಾಗಿ ಯಾವುದೇ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ. ಇದು ಕಾನೂನು ಬಾಹಿರವಾಗಿದ್ದು, ರ್ಯಾಪಿಡೋ ದ್ವಿಚಕ್ರ ವಾಹನ ಸೇವೆಯನ್ನು ನಿಲ್ಲಿಸಲು ಸೂಚಿಸಲಾಗಿದೆ. ಸದ್ಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಆಪ್ ಆಧಾರಿತ ಆಟೋರಿಕ್ಷಾ ಸೇವೆ ಬಂದ್ಗೆ ಆದೇಶವಿದೆ. ಓಲಾ, ಉಬರ್ ಕ್ಯಾಬ್ ಸೇವೆಗಳು ಮಾತ್ರ ಈ ಆ್ಯಪ್ನಲ್ಲಿ ಲಭ್ಯವಿರಲಿವೆ.

ಮಾಮೂಲಿ ಆಟೋಗಳಿಗೂ ಎಚ್ಚರಿಕೆ ನೀಡಬೇಕಿದೆ
ಭಾರತದಲ್ಲಿ ಆಟೋಗಳು ಸಾರ್ವಜನಿಕರ ನಿತ್ಯವಸರ ಸೇವೆಗೆ ಪ್ರಮುಖ ಸಾರಿಗೆಗಳಾಗಿವೆ. ದೇಶದ ಆಯಾ ರಾಜ್ಯಗಳಲ್ಲಿ ಆಟೋಗಳಿಗೆ ಇಂತಿಷ್ಟು ಕಿ.ಮೀಗಳಿಗೆ ಕನಿಷ್ಟ ದರವನ್ನು ರಾಜ್ಯ ಸರ್ಕಾರಗಳು ನಿಗದಿಪಡಿಸಿವೆ. ಹಾಗೇಯೇ ಕರ್ನಾಟಕದಲ್ಲೂ ರೂ. 30 ಕನಿಷ್ಟ ಪ್ರಯಾಣದ ದರವಾಗಿದೆ.

ಆದರೆ ಆಟೋ ಚಾಲಕರು ಮೀಟರ್ ಇದ್ದರೂ ಬಳಸುವುದಿಲ್ಲ, ಜೊತೆಗೆ ಮನಬಂದಂತೆ ಹಣಕ್ಕೆ ಬೇಡಿಕೆಯಿಟ್ಟು ಸುಳಿಗೆ ಮಾಡುತ್ತಾರೆ. ಈ ಬಗ್ಗೆ ನಗರ ವಾಸಿಗಳಿಗೆ ಹೇಳಬೇಕಿಲ್ಲ, ಪ್ರತಿಯೊಬ್ಬರಿಗೂ ಇಂತಹ ಅನುಭವವಾಗಿರುತ್ತದೆ. ಸ್ಥಳೀಯರಿಗೆ ಇಂತಹ ಸಂದರ್ಭಗಳು ಎದುರಾದಾಗ ನಗರಕ್ಕೆ ಭೇಟಿ ನೀಡುವ ಇತರ ರಾಜ್ಯದವರು ಹಾಗೂ ವಿದೇಶಿಗರ ಪರಿಸ್ಥಿತಿ ಹೇಳಬೇಕಿಲ್ಲ.


Click it and Unblock the Notifications