ಕುಡಿದ ಸೊಕ್ಕಿನಲ್ಲಿ ಯದ್ದಾತದ್ವಾ ಕಾರು ಚಾಲನೆ; 12 ರಿಕ್ಷಾಗಳಿಗೆ ಢಿಕ್ಕಿ, ಓರ್ವ ಬಲಿ
ನೆರೆಯ ಚೆನ್ನೈನಲ್ಲಿ ಮದ್ಯ ಸೇವಿಸಿ ಅಮಲೇರಿದ ಕಾನೂನು ವಿದ್ಯಾರ್ಥಿಯೊಬ್ಬ ಯದ್ದಾತದ್ವಾ ಕಾರು ಓಡಿಸಿರುವ ಪರಿಣಾಮ ಸಂಭವಿಸಿರುವ ಭೀಕರ ಅಪಘಾತದಲ್ಲಿ ಓರ್ವ ಆಟೋ ಚಾಲಕ ಮೃತಪಟ್ಟಿದ್ದಾರೆ. ಘಟನೆಯಲ್ಲಿ 12 ಆಟೋ ರಿಕ್ಷಾಗಳು ಜಖಂಗೊಂಡಿದೆ.
ಕುಡಿದ ಅಮಲಿನಲ್ಲಿದ್ದ ವಿದ್ಯಾರ್ಥಿ ಪೋರ್ಷೆ ಕಾರು ಚಾಲನೆ ಮಾಡುತ್ತಿದ್ದರು. ಕಾರಿನ ನಿಯಂತ್ರಣ ತಪ್ಪಿದ್ದರ ಪರಿಣಾಮ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಲಾಗಿದ್ದ ಆಟೋ ರಿಕ್ಷಾಗಳಿಗೆ ಢಿಕ್ಕಿ ಹೊಡೆದಿತ್ತು.

ಸೋಮವಾರ ಬೆಳಗ್ಗಿನ ಜಾವ 3.30ರ ಹೊತ್ತಿಗೆ ಪಾರ್ಟಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಟಿ.ನಗರ ನಿವಾಸಿ ಹಾಗೂ ಕಾನೂನು ವಿದ್ಯಾರ್ಥಿಯಾಗಿರುವ ವಿಕಾಸ್ ವಿಜಯಾನಂದ ಅನಿಯಮಿತ ವೇಗದಲ್ಲಿ ವಾಹನ ಚಾಲನೆ ಮಾಡಿದ್ದರು.

ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಿದ್ದ 12 ಆಟೋ ರಿಕ್ಷಾಗಳಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಓರ್ವ ಆಟೋ ಚಾಲಕ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ಚೆನ್ನೈನ ಕೆಥೆಡ್ರಾಲ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ವಿಜಯಾನಂದ ಚಾಲನೆ ಮಾಡುತ್ತಿದ್ದ ನೀಲಿ ಬಣ್ಣದ ಪೋರ್ಷೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಮೃತಪಟ್ಟವರು 29 ಹರೆಯದ ಜಿ ಅರ್ಮುಗಮ್ ಎಂದು ಗುರುತಿಸಲಾಗಿದೆ. ಶ್ರೀಮಂತ ಮನೆಯ ಇಂತಹ ಕೆಟ್ಟ ಚಟಗಳಿಗೆ ಜನ ಸಾಮಾನ್ಯರು ಬಲಿಯಾಗುತ್ತಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಜಾವಿನ ಹೊತ್ತು ಆಗಿರುವುದರಿಂದ ಚಾಲಕರು ಆಟೋದಲ್ಲಿಯೇ ನಿದ್ರಿಸುತ್ತಿದ್ದರು. ಅಂಬುಲೆನ್ಸ್ 20 ನಿಮಿಷಗಳಷ್ಟು ತಡವಾಗಿಯಷ್ಟೇ ಸ್ಥಳಾಕ್ಕಾಗಮಿಸಿತ್ತು.

ಈ ಸಂಬಂಧ ಓದುಗರ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications