ಐಷಾರಾಮಿ ಮರ್ಸಿಡಿಸ್ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡು ತುಂಡಾದ ಟ್ರಾಕ್ಟರ್
ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಎರಡು ತುಂಡಾದ ಘಟನೆ ಆಂಧ್ರಪ್ರದೇಶದ ತಿರುಪತಿ ಸಮೀಪ ನಡೆದಿದೆ. ಈ ಭೀಕರ ಅಪಘಾತದ ಚಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಮರ್ಸಿಡಿಸ್ ಕಾರಿಗೆ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಎರಡು ತುಂಡಾದ ಘಟನೆಯು ಆಂಧ್ರಪ್ರದೇಶದ ತಿರುಪತಿ ಸಮೀಪದ ಚಂದ್ರಗಿರಿ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮರ್ಸಿಡಿಸ್ ಬೆಂಝ್ ಕಾರಿಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಟ್ರ್ಯಾಕ್ಟರ್ ಚಾಲಕನಿಗೆ ಸಣ್ಣಪ್ರಮಾಣದ ಗಾಯಗಳುಂಟಾಗಿವೆಯಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ . ಟ್ರ್ಯಾಕ್ಟರ್ ಚಾಲಕ ರಾಂಗ್ ಸೈಡ್ನ ಬಂದಿರುವುದು ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಜಖಂಗೊಂಡ ಕಾರು ಒಂದು ಪಕ್ಕ ನಿಂತಿದ್ದು, ಮತ್ತೊಂದು ಭಾಗದಲ್ಲಿ ಎರಡು ಭಾಗಗಳಾಗಿ ಟ್ರಾಕ್ಟರ್ ಬಿದ್ದಿರುವುದು ಕಾಣಿಸುತ್ತಿದೆ. ಇನ್ನು ಕಾರಿನ ಒಂದು ಭಾಗ ಜಖಂ ಆಗಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.

ಈ ಭೀಕರ ಅಪಘಾತದಿಂದಾಗಿ ಸ್ವಲ್ಪ ಹೊತ್ತು ರಸ್ತೆಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಪ್ರಯಾಣಿಕರು ಅಪಘಾತದ ಭಯಾನಕ ದೃಶ್ಯವನ್ನು ನೋಡುತ್ತ ಕಳವಳಕ್ಕೆ ಒಳಗಾಗಿದ್ದರು. ನಾವು ಸರಿಯಾಗಿ ವಾಹನ ಚಲಾಯಿಸಿದರೂ ಎದುರಿನವರು ಮಾಡುವ ತಪ್ಪಿನ ಪರಿಣಾಮದಿಂದ ಕೂಡ ಅಪಘಾತ ಉಂಟಾಗುತ್ತವೆ. ಡ್ರೈವ್ ಮಾಡುವಾಗ ಎಷ್ಟು ಎಚ್ಚರವಹಿಸಿದರೂ ಸಾಲದು,

ಇನ್ನು ಇತ್ತೀಚೆಗೆ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (54) ಅವರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಭಾನುವಾರ ತಮ್ಮ ಮರ್ಸಿಡಿಸ್ ಜಿಎಲ್ಜಿ ಕಾರಿನಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮುಂಬೈಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸೈರಸ್ ಮಿಸ್ತ್ರಿ ಅವರೊಂದಿಗೆ ಅವರ ಸ್ನೇಹಿತರಾದ ಜಾಂಗೀರ್ ಪಂಡೋಲ್, ಅನಾಹಿತಾ ಪಂಡೋಲ್ ಮತ್ತು ಡೇರಿಯಸ್ ಪಂಡೋಲ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಈ ಅಪಘಾತದ ಬಗ್ಗೆ ಹಲವರಿಗೆ ಅನುಮಾನಗಳಿವೆ. ಕಾರಿನ ಮುಂಭಾಗ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಹೀಗಾದಲ್ಲಿ ಅಪಘಾತದ ಪರಿಣಾಮ ಮುಂದಿನ ಸೀಟಿನಲ್ಲಿದ್ದವರಿಗೆ ಹೆಚ್ಚಾಗಿರುತ್ತದೆ. ಆದರೆ ಈ ಅಪಘಾತದಲ್ಲಿ ಹಿಂದಿನ ಸೀಟಿನಲ್ಲಿ ಕುಳಿತವರು ಸಾವನ್ನಪ್ಪಿದ್ದು, ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಬದುಕುಳಿದಿದ್ದು ಹೇಗೆ? ಇದಕ್ಕೆ ಮುಖ್ಯ ಕಾರಣ ಸೀಟ್ ಬೆಲ್ಟ್ ಧರಿಸದಿರುವುದು.

ಈ ಪ್ರಯಾಣದ ವೇಳೆ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿರುವ ಸಾಧ್ಯತೆ ಇದೆ. ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿರುವ ಸಾಧ್ಯತೆ ಕಡಿಮೆ. ಸೀಟ್ ಬೆಲ್ಟ್ ಧರಿಸದ ಕಾರಣ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಾಗ ಇಬ್ಬರೂ ಪಲ್ಟಿಯಾಗಿ ತಲೆಗೆ ಗಂಭೀರ ಹೊಡೆತ ಬಿದ್ದಿರಬಹುದು.

ಈ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಮತ್ತು ಜಾಂಗೀರ್ ಸೀಟ್ ಬೆಲ್ಟ್ ಧರಿಸಿದ್ದರೆ, ಅವರು ಕೂಡ ಗಾಯಗಳೊಂದಿಗೆ ಬದುಕುಳಿಯುವ ಸಾಧ್ಯತೆ ಇರುತಿತ್ತು. ಈ ಅಪಘಾತದಿಂದ ನಾವು ಇನ್ನೊಂದು ಪಾಠ ಕಲಿಯಬೇಕು. ರಸ್ತೆಯಲ್ಲಿ ವಾಹನವನ್ನು ಓವರ್ ಟೇಕ್ ಮಾಡಬೇಕಾದರೆ ಬಲ ಬದಿಯಲ್ಲಿಯೇ ಓವರ್ ಟೇಕ್ ಮಾಡಬೇಕು. ಏಕೆಂದರೆ ಭಾರತದಲ್ಲಿ ವಾಹನಗಳನ್ನು ರೈಟ್ ಹ್ಯಾಂಡ್ ಡ್ರೈವ್ ವ್ಯವಸ್ಥೆಯಿಂದ ತಯಾರಿಸಲಾಗುತ್ತದೆ. ಹಾಗಾಗಿ ಬಲಭಾಗದಲ್ಲಿ ಹಾದುಹೋಗಲು ಪ್ರಯತ್ನಿಸಿದಾಗ, ಮುಂಭಾಗದಲ್ಲಿ ಅಡಚಣೆಯಿದ್ದರೆ ಚಾಲಕನಿಗೆ ತಿಳಿಯುತ್ತದೆ. ಆದ್ದರಿಂದ ಚಾಲಕ ತಕ್ಷಣ ಎಚ್ಚೆತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬಹುದು.

ಆದರೆ ಎಡಭಾಗದಲ್ಲಿ ಓವರ್ಟೇಕ್ ಮಾಡಲು ಪ್ರಯತ್ನಿಸಿದರೆ, ಕಾರು ಸಂಪೂರ್ಣವಾಗಿ ಎಡಕ್ಕೆ ಚಲಿಸಿದ ನಂತರವೇ ಚಾಲಕನಿಗೆ ಮುಂದೆ ಏನಿದೆ ಎಂದು ತಿಳಿಯುತ್ತದೆ. ಆಗ ಚಾಲಕನಿಗೆ ತಕ್ಷಣವೇ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ. ಹಾಗಾಗಿ ಚಾಲನೆ ಮಾಡುವಾಗ ವಾಹನವನ್ನು ಓವರ್ ಟೇಕ್ ಮಾಡಬೇಕಾದರೆ ಬಲಭಾಗದಲ್ಲಿ ಮಾತ್ರ ಓವರ್ ಟೇಕ್ ಮಾಡಿ. ಇನ್ನು ರಸ್ತೆಯಲ್ಲಿ ನಿಯಂತ್ರಿತ ವೇಗದಲ್ಲಿ ಪ್ರಯಾಣಿಸಬೇಕು, ಕಾರು ಸುರಕ್ಷಿತ ವೇಗವನ್ನು ಮೀರಿ ಚಲಿಸುತ್ತಿದೆ ಎಂದು ನೀವು ಭಾವಿಸಿದರೆ, ತಕ್ಷಣವೇ ವೇಗವನ್ನು ಕಡಿಮೆ ಮಾಡಿ. ಅತಿ ವೇಗವು ಅಪಾಯಕಾರಿ ಎಂಬ ಅರಿವಿನೊಂದಿಗೆ ಚಾಲನೆ ಮಾಡಿ.


Click it and Unblock the Notifications








