ಸಾವಿನಲ್ಲೂ ಸಾರ್ಥಕತೆ ಮೆರೆದು ಸಮಾಜಕ್ಕೆ ಸ್ಫೂರ್ತಿಯಾದ ನಟ ಸಂಚಾರಿ ವಿಜಯ್
ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್(38) ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

ಅಪಘಾತದ ನಂತರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಶನಿವಾರ ರಾತ್ರಿಯಿಂದಲೇ ಚಿಕಿತ್ಸೆ ಪಡೆಯುತ್ತಿದ್ದ ಸಂಚಾರಿ ವಿಜಯ್ ಅವರಿಗೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿತ್ತು. ತೀವ್ರ ಪೆಟ್ಟು ಬಿದ್ದ ಪರಿಣಾಮ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಬಹುಮುಖ ಪ್ರತಿಭೆಯಾಗಿದ್ದ ನಟ ಸಂಚಾರಿ ವಿಜಯ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬಿನಿಮಿಡಿಯುತ್ತಿದ್ದಾರೆ.

ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡು ನಂತರ ಚಿತ್ರರಂಗ ಪ್ರವೇಶಿಸಿದ್ದ ಸಂಚಾರಿ ವಿಜಯ್ ಅವರು 'ನಾನು ಅವನಲ್ಲ, ಅವಳಲ್ಲ' ಸಿನಿಮಾದಲ್ಲಿ ಅದ್ಭುತ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.

ಕೇವಲ ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದ ಸಂಚಾರಿ ವಿಜಯ್ ಅವರು ಉಸಿರು' ಎನ್ನುವ ತಂಡವನ್ನು ಕಟ್ಟಿಕೊಂಡು ಲಾಕ್ಡೌನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಿದ್ದರು.

ಚಿತ್ರರಂಗ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕೆಂಬ ಮಹಾದಾಸೆ ಹೊಂದಿದ್ದ ಸಂಚಾರಿ ವಿಜಯ್ ಅವರು ಹೊಸಬರ ಕಥೆಗಳಲ್ಲಿ ವಿಭಿನ್ನವಾಗಿ ನಟನೆ ಮಾಡುವ ಮೂಲಕ ಪ್ರಯೋಗಾತ್ಮಕ ಸಿನಿಮಾಗಳಿಗೆ ಪ್ರೊತ್ಸಾಹಿಸುತ್ತಿದ್ದರು. ಇತ್ತೀಚೆಗೆ ಕೋವಿಡ್ ಪರಿಣಾಮ ಹಸಿದವರಿಗೆ ಸಹಾಯ ಮಾಡುವ ಉದ್ದೇಶದಿಂದ ತಮ್ಮ ಉಸಿರು ತಂಡದೊಂದಿಗೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಂಚಾರಿ ವಿಜಯ್ ಅವರು ಸ್ನೇಹಿತನ ಮನೆಯಿಂದ ಹಿಂದಿರುಗುವಾಗ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

ಜೆಪಿ ನಗರದ 7ನೇ ಹಂತದಲ್ಲಿ ನಡೆದ ಅಪಘಾತದಲ್ಲಿ ತಕ್ಷಣವೇ ಅವರನ್ನು ಬನ್ನೇರು ಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿಸಿದ್ದರೂ ಮೆದುಳಿಗೆ ತೀವ್ರವಾದ ಪೆಟ್ಟು ಬಿದ್ದಿದ್ದರ ಪರಿಣಾಮ ಚಿಕಿತ್ಸೆ ಫಲಿಸಲಿಲ್ಲ.

ನಟ ವಿಜಯ್ ಅವರು ಹಿಂಬದಿಯಲ್ಲಿ ಕುಳಿತಿದ್ದರೆ ಅವರ ಸ್ನೇಹಿತ ನವೀನ್ ಬೈಕ್ ಚಾಲನೆ ಮಾಡುತ್ತಿದ್ದರು. ಬೈಕ್ ವೇಗವಾಗಿದ್ದರಿಂದ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಹೆಲ್ಮೆಟ್ ಧರಿಸಿದ್ದ ನವೀನ್ಗೆ ಕೆಲವು ಗಾಯಗಳಾಗಿದ್ದರೂ ಪ್ರಾಣಪಾಯದಿಂದ ಪಾರಾಗಿದ್ದು, ನಟ ಸಂಚಾರಿ ವಿಜಯ್ ಅವರು ಹೆಲ್ಮೆಟ್ ಧರಿಸಿರಲಿಲ್ಲ.

ಹೆಲ್ಮೆಟ್ ಇಲ್ಲದ ಬೈಕ್ ಸವಾರಿಯು ಜೀವಕ್ಕೆ ಕುತ್ತು ತರುತ್ತದೆ ಎನ್ನುವುದು ಈಗಾಗಲೇ ಹಲವಾರು ಅಪಘಾತ ಪ್ರಕರಣಗಳಲ್ಲಿ ಸಾಬೀತಾಗಿದ್ದು, ದಯವಿಟ್ಟು ಸುರಕ್ಷಿತ ಪ್ರಯಾಣಕ್ಕಾಗಿ ದ್ವಿಚಕ್ರ ವಾಹನ ಸವಾರು ಹೆಲ್ಮೆಟ್ ಅನ್ನು ಮತ್ತು ಕಾರು ಚಾಲನೆ ಮಾಡುವವರು ಸೀಟ್ ಬೆಲ್ಟ್ ಅನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು.

ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಬಳಕೆಯು ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರವಲ್ಲ ಅಪಘಾತ ಸಂದರ್ಭಗಳಲ್ಲಿ ನಮಗೆ ಗರಿಷ್ಠ ಸುರಕ್ಷತೆ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಟ ಸಂಚಾರಿ ವಿಜಯ್ ಜೊತೆ ಬೈಕ್ ರೈಡ್ ಮಾಡುತ್ತಿದ್ದ ನವೀನ್ ಗಾಯಗೊಂಡಿದ್ದರೂ ಕೂಡಾ ಹೆಲ್ಮೆಟ್ನಿಂದಾಗಿಯೇ ತಲೆ ರಕ್ಷಣೆಯಾಗಿದ್ದು ಮಾತ್ರ ಸುಳ್ಳಲ್ಲ.

ಸದ್ಯಕ್ಕೆ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ವಿಜಯ್ ಅವರ ಸಾವಿನಲ್ಲೂ ಸಾರ್ಥಕತೆ ಮೆರೆದು, ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ.


Click it and Unblock the Notifications








