ನಕಲಿ ವೈದ್ಯಕೀಯ ಸಂಶೋಧಕನ ವಂಚನೆಯಿಂದ ಪಾರಾದ ಸ್ವಯಂ ಸೇವಕ
ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೂ ಕರೋನಾ ವೈರಸ್ ಪೂರ್ತಿಯಾಗಿ ನಿರ್ಮೂಲನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಸ್ವಯಂಸೇವಕರು ಸೇವೆಗಳನ್ನು ಒದಗಿಸುತ್ತಲೇ ಇದ್ದಾರೆ.

ಉತ್ತರ ಚೆನ್ನೈನ ವಸಂತ್ ಕುಮಾರ್ ಸಹ ಈ ರೀತಿ ಸೇವೆ ಒದಗಿಸುತ್ತಿರುವ ಸ್ವಯಂ ಸೇವಕರಲ್ಲಿ ಒಬ್ಬರು. ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ಸೇರಿ ಕರೋನಾ ಸೋಂಕಿತರಿಗೆ ಸೇವೆ ನೀಡುತ್ತಿದ್ದಾರೆ. ವಸಂತ್ ಕುಮಾರ್ ಸಾರ್ವಜನಿಕರಿಗೆ ಉಚಿತ ಆಕ್ಸಿಜನ್ ವಾಹನಗಳನ್ನು ಒದಗಿಸುತ್ತಿದ್ದಾರೆ.

ಅವರನ್ನು ಜೂನ್ 6ರಂದು ಡಾ.ಚಂದ್ರಶೇಖರನ್ ಸುಬ್ರಮಣಿಯನ್ ಎಂಬ ವ್ಯಕ್ತಿ ಸಂಪರ್ಕಿಸಿದ್ದ. ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ನಲ್ಲಿ ಕರೋನಾಗೆ ಔಷಧ ಕಂಡು ಹಿಡಿಯುತ್ತಿರುವ ತಂಡದ ಸದಸ್ಯರೆಂದು ಹೇಳಿಕೊಂಡ ವ್ಯಕ್ತಿ ವಸಂತ್ ಕುಮಾರ್ರವರ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದ್ದಾನೆ.

ಆ ವ್ಯಕ್ತಿ ಸಾರ್ವಜನಿಕರಿಗೆ ಉಚಿತವಾಗಿ ಫೇಸ್ ಮಾಸ್ಕ್ ಹಾಗೂ ಸೋಂಕು ನಿವಾರಕಗಳನ್ನು ಕಳುಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಆತನ ಮಾತುಗಳನ್ನು ಕೇಳಿದ ವಸಂತ್ ಕುಮಾರ್ ಆತ ಐಸಿಎಂಆರ್'ನಲ್ಲಿ ಕೆಲಸ ಮಾಡುತ್ತಿರಬಹುದು ಎಂದು ನಂಬಿದ್ದಾರೆ.

ನಂತರ ಆ ನಕಲಿ ವೈದ್ಯಕೀಯ ಸಂಶೋಧಕ ತನ್ನ ಅಸಲಿ ಆಟ ಶುರು ಮಾಡಿದ್ದಾನೆ. ಆ ವ್ಯಕ್ತಿ ವಸಂತ್ ಕುಮಾರ್ರವರಿಗೆ ಮಹೀಂದ್ರಾ ಬೊಲೆರೋ ಕಾರ್ ಅನ್ನು ಉಚಿತವಾಗಿ ನೀಡುವುದಾಗಿ ತಿಳಿಸಿ ಎಮಾರಿಸಲು ಮುಂದಾಗಿದ್ದಾನೆ.

ಚಂದ್ರಶೇಖರ್ ಸುಬ್ರಮಣಿಯನ್ ಹೆಸರಿನಲ್ಲಿ ಕರೆ ಮಾಡಿದ್ದ ಆ ವ್ಯಕ್ತಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ವೈದ್ಯರಿಗೆ ರೂ.10 ಲಕ್ಷ ಮೌಲ್ಯದ ಬೊಲೆರೋ ಕಾರುಗಳನ್ನು ಉಚಿತವಾಗಿ ನೀಡುತ್ತಿರುವುದಾಗಿ ತಿಳಿಸಿದ್ದಾನೆ.

ನಿಮ್ಮ ಸೇವೆಯಲ್ಲಿ ಈ ಕಾರನ್ನು ನೋಡಲು ಬಯಸುತ್ತೇನೆ. ಈ ಕಾರಣಕ್ಕೆ ಈ ಕಾರ್ ಅನ್ನು ನಿಮಗೆ ಉಡುಗೊರೆಯಾಗಿ ನೀಡುತ್ತೇನೆ ಎಂದು ತಿಳಿಸಿ ಬೊಲೆರೋಕಾರಿನ ಚಿತ್ರ ಹಾಗೂ ವಿವರಗಳನ್ನು ಇ-ಮೇಲ್ ಮಾಡಿದ್ದಾನೆ.

ರೂ.10 ಲಕ್ಷ ರೂಪಾಯಿ ಮೌಲ್ಯದ ಕಾರ್ ಅನ್ನು ಕಳುಹಿಸಲು ತೆರಿಗೆ ಸೇರಿದಂತೆ ವಿವಿಧ ಶುಲ್ಕಗಳಾಗಿ ರೂ.1 ಲಕ್ಷ ಪಾವತಿಸಬೇಕಾಗುತ್ತದೆ ಎಂದು ಹೇಳಿ ವಸಂತ್ ಕುಮಾರ್ರವರಿಗೆ ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಿದ್ದಾನೆ.

ಆ ಬ್ಯಾಂಕ್ ಖಾತೆ ಸಂಖ್ಯೆ ಮಹೀಂದ್ರಾ ಮೆಡಿಕಲ್ ಟ್ರಸ್ಟ್ ಹೆಸರಿನಲ್ಲಿದೆ. ಆತನ ಮಾತನ್ನು ನಂಬಿದ ವಸಂತ ಕುಮಾರ್ ಮೊದಲು ರೂ.1000 ಪಾವತಿಸಿದ್ದಾರೆ. ಪರಿಶೀಲಿಸಿದಾಗ ಆ ಬ್ಯಾಂಕ್ ಖಾತೆ ಆಂಧ್ರಪ್ರದೇಶದ ರಾಜಮಂಡ್ರಿಯ ಕರೂರ್ ವೈಶ್ಯ ಬ್ಯಾಂಕ್ ಶಾಖೆಗೆ ಸೇರಿದ್ದು ಎಂದು ತಿಳಿದುಬಂದಿದೆ.

ಇದು ವಸಂತ್ ಕುಮಾರ್ರವರಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದೆ. ಅವರು ಕೂಲಂಕುಷವಾಗಿ ಪರಿಶೀಲಿಸಿದಾಗ ಮಹೀಂದ್ರಾ ಗ್ರೂಪ್ನ ಮೆಡಿಕಲ್ ಟ್ರಸ್ಟ್ ಅಂತಹ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲವೆಂದು ತಿಳಿದು ಬಂದಿದೆ.

ಈ ವೇಳೆ ನಕಲಿ ವೈದ್ಯಕೀಯ ಸಂಶೋಧಕ ವಸಂತ್ ಕುಮಾರ್ರವರನ್ನು ಮತ್ತೆ ಸಂಪರ್ಕಿಸಿ, ಅವರು ಪಾವತಿಸಿರುವ ಸಾವಿರ ರೂಪಾಯಿಗಳು ಖಾತೆಗೆ ಜಮೆಯಾಗಿದೆ. ಹಾಗೂ ಕಾರು ದೆಹಲಿಯಿಂದ ಬೆಂಗಳೂರಿಗೆ ತಲುಪಿದೆ ಎಂದು ಹೇಳಿದ್ದಾನೆ.

ಬ್ಯಾಂಕ್ ಖಾತೆಗೆ ರೂ.27,000 ಪಾವತಿಸಿದರೆ, ಬೊಲೆರೋ ಕಾರು ನೀವಿರುವ ಸ್ಥಳಕ್ಕೆ ಬರುತ್ತದೆ ಎಂದು ಹೇಳಿದ್ದಾನೆ. ವಸಂತ್ ಕುಮಾರ್ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಚಂದ್ರಶೇಖರ ಸುಬ್ರಮಣಿಯನ್ ಎಂಬ ಹೆಸರಿನ ಸಂಶೋಧಕರು ಇರಲಿಲ್ಲ.

ಈ ಹಿನ್ನೆಲೆಯಲ್ಲಿ ತನಗೆ ಕರೆ ಮಾಡುತ್ತಿರುವುದು ನಕಲಿ ಸಂಶೋಧಕ ಎಂಬುದು ವಸಂತ್ ಕುಮಾರ್ರವರಿಗೆ ಖಚಿತವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಈ ಬಗ್ಗೆ ಬಿಹೈಂಡ್ ವುಡ್ಸ್ ವರದಿ ಮಾಡಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications