ಪ್ರತಿ ತಿಂಗಳ 17 ರಂದು ತನ್ನ ಪ್ರಯಾಣಿಕರಿಗೆ ಶೇ50 ರಿಯಾಯಿತಿ ನೀಡುತ್ತಿರುವ ಅಪ್ಪು ಅಭಿಮಾನಿ!
ದಿವಂಗತ ನಟ ಡಾ.ಪುನೀತ್ ರಾಜ್ಕುಮಾರ್ ಅವರನ್ನು ಕನ್ನಡ ಚಿತ್ರರಂಗದಲ್ಲಿನ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ಅಲ್ಲದೇ ಅವರು ಸಣ್ಣ ವಯಸ್ಸಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ನಟನೆಯಲ್ಲಿ ತಂದೆಗೆ ತಕ್ಕ ಮಗ ಎನಿಸಿಕೊಂಡಿದ್ದರು. ಆದರೆ ಅವರ ಗುರುತು ಕೇವಲ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ.

ಅವರು ಹಲವು ಅನಾಥಾಶ್ರಮ, ವೃದ್ಧಾಶ್ರಮ, ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ವಿವಿಧ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ಅವರ ನಿಧನದ ಬಳಿಕ ತಿಳಿದುಬಂದಿದೆ. ಪುನೀತ್ ಅವರ ಈ ಕಾರ್ಯಗಳಿಗೆ ಇಡೀ ರಾಜ್ಯವೇ ನಿಬ್ಬೆರಗಾಗಿತ್ತು. ಇಂತಹ ನಟನನ್ನು ಕಳೆದುಕೊಂಡಿರುವುದು ಅಭಿಮಾನಿಗಳಿಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.

ಈ ನಿಟ್ಟನಲ್ಲಿ ತಮ್ಮ ಅಚ್ಚುಮೆಚ್ಚಿನ ನಟನ ಸ್ಮರಣೆಯನ್ನು ಜೀವಂತವಾಗಿರಿಸಿಕೊಂಡು, ಬೆಂಗಳೂರಿನ ಆಟೋ-ರಿಕ್ಷಾ ಚಾಲಕರೊಬ್ಬರು ತಮ್ಮ ಪ್ರಯಾಣಿಕರಿಗೆ ಪ್ರತಿ ತಿಂಗಳು 17 ರಂದು ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದಾರೆ. ಆಟೋ-ರಿಕ್ಷಾ ಚಾಲಕ ದೇವಾದಿತ್ಯ ಅವರು ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ ಆಗಿದ್ದಾರೆ.

ಪುನೀತ್ ಅವರ ಸ್ಮರಣಾರ್ಥ ಹಾಗೂ ಅವರಿಗೆ ಗೌರವ ನೀಡುವ ಸಲುವಾಗಿ ತಮ್ಮ ಪ್ರಯಾಣಿಕರಿಗೆ ರಿಯಾಯಿತಿಯನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನವು ಮಾರ್ಚ್ 17 ರಂದು ಬರುತ್ತದೆ. ಅವರ ನೆಚ್ಚಿನ ನಟನ ನೆನಪಿಗಾಗಿ, ಆಟೋ-ರಿಕ್ಷಾ ಚಾಲಕನು ಪ್ರತಿ ತಿಂಗಳು 17 ರಂದು ತನ್ನ ಪ್ರಯಾಣಿಕರಿಗೆ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತಿದ್ದಾನೆ.

ಕಳೆದ ವರ್ಷ ಪುನೀತ್ ಅವರ ಹಠಾತ್ ನಿಧನದಿಂದ ನಾನು ಒಂದೇ ಸಮನೇ ಕುಸಿದಿದ್ದೇನೆ. ಅದರ ನಂತರ ನಮ್ಮ ನೆಚ್ಚಿನ ನಟನ ಹೆಜ್ಜೆ ಗುರುತನ್ನು ಅನುಸರಿಸಲು ನಿರ್ಧರಿಸಿದ್ದೆ. ತಮ್ಮ ಕೊನೆಯ ಉಸಿರು ಇರುವವರೆಗೂ ಪುನೀತ್ ಸೇವೆ ಸಲ್ಲಿಸಿದಂತೆ ಜನಸೇವೆ ಮಾಡಬೇಕೆಂಬ ಆಸೆ ನನಗಿದೆ ಎಂದು ಆಟೋ-ರಿಕ್ಷಾ ಚಾಲಕ ದೇವದಿತ್ಯ ಹೇಳಿದರು.

ದೇವಾದಿತ್ಯ ಅವರ ಆಟೋ ರಿಕ್ಷಾವು ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಫೋಟೋವನ್ನು ಒಳಗೊಂಡಿದ್ದು, ಕನ್ನಡದಲ್ಲಿ ಕೆಲವು ಸಾಲುವಗಳನ್ನು ಬರೆಯಲಾಗಿದೆ. ಆಟೋ ರಿಕ್ಷಾ ಚಾಲಕನು ತನ್ನ ವಾಹನದ ಕಂತನ್ನು ಪಾವತಿಸಿದ ನಂತರ, ಪ್ರತಿ ತಿಂಗಳು 17 ರಂದು ತನ್ನ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ನೀಡುವುದಾಗಿ ಹೇಳಿಕೊಂಡಿದ್ದಾನೆ.

ಪುನೀತ್ ರಾಜ್ಕುಮಾರ್ 2021 ರ ಅಕ್ಟೋಬರ್ 29 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಹಠಾತ್ ನಿಧನದಿಂದ ಅವರ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗ ಸಂಪೂರ್ಣ ಆಘಾತಕ್ಕೆ ಒಳಗಾಗಿತ್ತು. ಈಗಲು ಅವರ ನೆನಪಿನಲ್ಲಿ ಹಲವರು ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಪ್ರಕಾಶ್ ರೈ ಫೌಂಡೇಶನ್ನಿಂದ ಆಂಬುಲೆನ್ಸ್ ಕೊಡುಗೆ
ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ನಟ ಪ್ರಕಾಶ್ ರೈ ಅವರು ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದಾರೆ. ಮೈಸೂರಿನ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ಪ್ರಕಾಶ್ ರೈ ಫೌಂಡೇಶನ್ ಅಪ್ಪು ಸ್ಮರಣಾರ್ಥ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲನ್ಸ್ ನೀಡಲಾಗುತ್ತಿದೆ.

ಅಪ್ಪು ಹೆಸರಲ್ಲಿ ಪ್ರಕಾಶ್ ರಾಜ್ ಫೌಂಡೇಷನ್ ಶೀಘ್ರದಲ್ಲೇ ಮೈಸೂರಲ್ಲಿ ಬ್ಲಡ್ ಬ್ಯಾಂಕ್ ಕೂಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಆಂಬುಲೆನ್ಸ್ ನೀಡಲಾಗಿದೆ.

ಆ್ಯಂಬುಲೆನ್ಸ್ ಸಕಾಲಕ್ಕೆ ಸಿಕ್ಕಿದ್ದರೆ ಅಪ್ಪು ಬದುಕುತ್ತಿದ್ದರೇನೋ ಎಂಬ ಸ್ಥಿತಿ ಜನ ಸಾಮಾನ್ಯರಿಗೆ ಬರಬಾರದು ಎಂಬ ಉದ್ದೇಶದಿಂದ ಪುನೀತ್ ರಾಜ್ಕುಮಾರ ಹೆಸರಿನಲ್ಲಿ ಅಪ್ಪು ಎಕ್ಸ್ಪ್ರೆಸ್ ಎಂಬ ಆ್ಯಂಬುಲೆನ್ಸ್ ಅನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಕಾಶ್ ರಾಜ್ ಫೌಂಡೇಷನ್ ನೀಡಲಿದೆ" ಎಂದು ಪ್ರಕಾಶ್ ರೈ ತಿಳಿಸಿದರು.

ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ
ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಶಸ್ತಿ ಕೊಡಲು ಸಿದ್ಧತೆಗಳನ್ನು ಕೈಗೊಳ್ಳಲು ಸಮಿತಿಯನ್ನು ರಚಿಸಲಾಗುವುದು. ರಾಜ್ ಕುಮಾರ್ ಅವರ ಕುಟುಂಬದ ಸದಸ್ಯರು ಸಹ ಸಮಿತಿಯಲ್ಲಿ ಇರುತ್ತಾರೆ. ಎಲ್ಲರೂ ಸೇರಿ ಗೌರವಯುತವಾಗಿ ಪುನೀತ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಪುಷ್ಪಗಳಲ್ಲಿ ಅರಳಿದ ಅಪ್ಪು
ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಸಯೋಗದಲ್ಲಿ ಶುಕ್ರವಾರದಿಂದ (ಆ.5ರಿಂದ) ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವು ಪುನೀತ್ರಾಜ್ ಕುಮಾರ್ ಅವರ ಜೀವನವನ್ನು ಮೆಲಕು ಹಾಕುವ ಅನುಭವ ನೀಡುತ್ತಿದೆ.

ಪುನೀತ್ ರಾಜ್ಕುಮಾರ್ ಅವರು ಬಾಲ್ಯದಿಂದ ಸಿನಿಮಾಗಳಲ್ಲಿ ಗುರುತಿಸಿಕೊಂಡ ಪ್ರಮುಖ ಚಿತ್ರಗಳ ವಿವರಗಳನ್ನು ನೀಡಲಾಗಿದ್ದು, ಪುನೀತ್ ಅವರ ಜೊತೆಗೆ ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಜೀವನಧಾರಿತ ವಿನ್ಯಾಸಗಳು ಪುಷ್ಪಗಳಲ್ಲಿ ಮೂಡಿ ಬಂದಿವೆ.


Click it and Unblock the Notifications