ಮಳೆ ನೀರಿನಲ್ಲಿ ದೋಣಿ ಚಲಾಯಿಸಿದವನ ಮೇಲೆ ಬಿತ್ತು ಕೇಸ್
ಈ ವರ್ಷ ಭಾರತದಲ್ಲಿ ಮುಂಗಾರು ಆರಂಭವಾಗಿ ಹಲವಾರು ದಿನಗಳು ಕಳೆದಿವೆ. ಭಾರೀ ಮಳೆಯಿಂದಾಗಿ ಭಾರತದ ಹಲವು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಜನರು ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಇದರ ಮಧ್ಯೆಯೇ ಪಂಜಾಬ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪಂಜಾಬ್ನ ಬಟಿಂಡಾ ನಗರದಲ್ಲಿ ವಿಜಯ್ ಕುಮಾರ್ ಶರ್ಮಾ ಎಂಬ ವ್ಯಕ್ತಿ ರಸ್ತೆಯಲ್ಲಿ ನಿಂತಿರುವ ನೀರಿನಲ್ಲಿಯೇ ದೋಣಿ ಸವಾರಿ ಮಾಡಿದ್ದಾನೆ. ವಿಶೇಷವೆಂದರೆ ಈ ವ್ಯಕ್ತಿ ತಾನು ಮಾತ್ರ ದೋಣಿಯಲ್ಲಿ ಸವಾರಿ ಮಾಡದೇ ಬೇರೆಯವರನ್ನು ಸಹ ಕರೆದೊಯ್ದಿದ್ದಾನೆ. ಇವರಲ್ಲಿ ಮಕ್ಕಳು ಸಹ ಸೇರಿದ್ದಾರೆ.

ಭಾರೀ ಮಳೆಯ ಕಾರಣಕ್ಕೆ ಬಟಿಂಡಾ ನಗರದ ಬೀದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ನಿಂತ ನೀರಿನಲ್ಲಿ ದೋಣಿ ವಿಹಾರ ಮಾಡಿದ ವಿಜಯ್ ಕುಮಾರ್ ಶರ್ಮಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336ರಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತ ತನ್ನೊಂದಿಗೆ ಬೇರೆಯವರ ಪ್ರಾಣವನ್ನು ಪಣಕ್ಕಿಟ್ಟಿರುವುದೇ ಇದಕ್ಕೆ ಕಾರಣ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೂಲಗಳ ಪ್ರಕಾರ, ವಿಜಯ್ ಶರ್ಮಾ ಸ್ಥಳೀಯ ಜನರನ್ನು ದೋಣಿಯಲ್ಲಿ ಕೂರಿಸಿ ಕೊಂಡು ಇಲ್ಲಿನ ಸಮಸ್ಯೆಯ ಬಗ್ಗೆ ಸ್ಥಳೀಯ ಆಡಳಿತದ ಗಮನ ಸೆಳೆಯಲು ಪ್ರಯತ್ನಿಸಿದ್ದಾನೆ. ಸಮಸ್ಯೆ ತುಂಬಾ ಗಂಭೀರವಾಗಿದ್ದು, ಆಡಳಿತವು ಈ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದೆ ಎಂಬುದು ಆತನ ಆರೋಪ.

ಸ್ಥಳೀಯರು ಪ್ರತಿ ಬಾರಿಯ ಮಳೆಗಾಲದಲ್ಲಿಯೂ ಮಳೆ ನೀರು ಹರಿಯುವ ಸಮಸ್ಯೆ ಇದೆ ಎಂದು ಹೇಳುತ್ತಾರೆ. ವಿಜಯ್ ಶರ್ಮಾ ಜೊತೆಗೆ ಸ್ಥಳೀಯರು ಹಾಗೂ ಕೆಲವು ಮಕ್ಕಳು ಸಹ ದೋಣಿ ವಿಹಾರ ಮಾಡಿದ್ದು ಅವರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಗಮನಿಸಬೇಕಾದ ಸಂಗತಿಯೆಂದರೆ ದೋಣಿಯಲ್ಲಿದ್ದ ಯಾರೊಬ್ಬರೂ ಸಹ ಸುರಕ್ಷತಾ ಸಾಧನಗಳನ್ನು ಧರಿಸಲಿಲ್ಲ. ಇದರಿಂದ ಅವರ ಜೀವಕ್ಕೆ ಸಂಚಕಾರ ಬರುವ ಸಾಧ್ಯತೆಗಳಿದ್ದವು. ವಿಜಯ್ ಕುಮಾರ್ ಶರ್ಮಾ ದೋಣಿ ವಿಹಾರ ಮಾಡುತ್ತಿರುವ ವಿಷಯ ಅಪರಿಚಿತ ಮೂಲದಿಂದ ಪೊಲೀಸರಿಗೆ ತಲುಪಿದೆ. ಈಗ ಪೊಲೀಸರು ವಿಜಯ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸದ್ಯಕ್ಕೆ ಯಾರನ್ನೂ ಬಂಧಿಸಿಲ್ಲ. ತಾನು ಯಾವುದೇ ಅಪರಾಧವೆಸಗಿಲ್ಲವೆಂದು ವಿಜಯ್ ಶರ್ಮಾ ಹೇಳಿದ್ದಾನೆ. ತಾನು ಮಕ್ಕಳನ್ನು ಜಲಾವೃತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿದ್ದೆ ಎಂದು ಆತ ಹೇಳಿದ್ದಾನೆ.


Click it and Unblock the Notifications