ಪ್ರಧಾನಿ ಮೋದಿ ಕನಸಿನ 'ವಂದೇ ಭಾರತ್ ಎಕ್ಸ್ಪ್ರೆಸ್'ಗೆ ಭರ್ಜರಿ ಚಾಲನೆ..!
ಭಾರತದಲ್ಲೇ ನಿರ್ಮಾಣವಾಗಿರುವ ದೇಶದ ಅತ್ಯಂತ ವೇಗದ ರೈಲು ವಂದೇ ಭಾರತ್ ಎಕ್ಸ್ಪ್ರೆಸ್(ಟ್ರೈನ್ 18) ಸೇವೆಗೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದ್ದು, ಬಹುದಿನಗಳ ಬೇಡಿಕೆಯಾಗಿದ್ದ ಹೊಸ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿದರು.

ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿಹೊಂದಿದ್ದು, ಇದರಲ್ಲಿ ಸದ್ಯಕ್ಕೆ ಹಳಿಗಿಳಿದಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹೊಸದೊಂದು ಬದಲಾವಣೆಗೆ ನಾಂದಿಹಾಡಿದೆ. ಬರೋಬ್ಬರಿ ರೂ.98 ಕೋಟಿ ವೆಚ್ಚದಲ್ಲಿ ಸಿದ್ದವಾಗಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅತ್ಯಾಧುನಿಕ ಎಂಜಿನ್ ಜೊತೆಗೆ ಹತ್ತು ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವುದು ರೈಲ್ವೆ ಪ್ರಯಾಣಿಕರ ಆಕರ್ಷಣೆಗೆ ಕಾರಣವಾಗಿವೆ.

ನವದೆಹಲಿಯಿಂದ ವಾರಣಾಸಿ ಮತ್ತು ವಾರಣಾಸಿಯಿಂದ ನವದೆಹಲಿ ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗಂಟೆಗೆ 160ಕಿ.ಮಿ ವೇಗದಲ್ಲಿ ಸಂಚಲಿಸಲಿದ್ದು, ಬರೋಬ್ಬರಿ 820 ದೂರವನ್ನು ಕೇವಲ 8 ಗಂಟೆಗಳಲ್ಲಿ ಕ್ರಮಿಸಲಿದೆ.
ನವದೆಹಲಿ ಟು ವಾರಣಾಸಿ ನಡುವಿನ ಮಾರ್ಗ ಮಧ್ಯದಲ್ಲಿ ಬರುವ ಕಾನ್ಪುರ್ ಮತ್ತು ಪ್ರಯಾಗ್ರಾಜ್ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಕೊಡಲಾಗಿದ್ದು, ಬೆಳಗ್ಗೆ 6 ಗಂಟೆಗೆ ನವದೆಹಲಿಯಿಂದ ಹೊರಟ ರೈಲು ಮಧ್ಯಾಹ್ನ 2ಕ್ಕೆ ವಾರಣಾಸಿಗೆ ತಲುಪಲಿದೆ.

ಅದೇ ದಿನ ಮಧ್ಯಾಹ್ನ 3ಗಂಟೆಗೆ ವಾರಣಾಸಿಯಿಂದ ಮತ್ತೆ ವಾಪಸ್ ಹೊರಡಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ರಾತ್ರಿ 11 ಗಂಟೆಗೆ ದೆಹಲಿ ತಲುಪಲಿದ್ದು, ವಾರದ ಐದು ದಿನಗಳಲ್ಲಿ(ಸೋಮವಾರ ಮತ್ತು ಗುರುವಾರ ಹೊರತುಪಡಿಸಿ) ಮಾತ್ರ ಸೇವೆಗೆ ಲಭ್ಯವಿರಲಿದೆ.
ರೈಲು ದರ ಪಟ್ಟಿ
ನವದೆಹಲಿ ಟು ವಾರಣಾಸಿ ನಡುವಿನ ವಂದೇ ಭಾರತ್ ರೈಲಿನ ದರಗಳು ಆಕರ್ಷಕವಾಗಿದ್ದು, ಚೇರ್ ಕ್ಲಾಸ್ ಪ್ರಯಾಣಕ್ಕೆ ರೂ. 1,700 ಹಾಗೂ ಎಕ್ಸಿಕ್ಯೂಟಿವ್ ಪ್ರಯಾಣಕ್ಕಾಗಿ ರೂ.3,310 ನಿಗದಿ ಮಾಡಿರುವ ರೈಲು ಇಲಾಖೆಯು ಗತಿಮಾನ್ ಎಕ್ಸ್ಪ್ರೆಸ್ ಮಾದರಿಯಲ್ಲೇ ಬೆಳಗ್ಗೆ ಚಹಾ, ಉಪಹಾರ ಮತ್ತು ಲಂಚ್ ಪ್ಯಾಕೇಜ್ ಘೋಷಣೆ ಮಾಡಿದೆ.

ಇನ್ನು ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಹೊಸ ಟ್ರೈನ್ 18 ರೈಲು ಎಂಜಿನ್ ರಹಿತವಾಗಿದ್ದು, ಬುಲೆಟ್ ರೈಲು ಮಾದರಿಯಲ್ಲೇ ಇದನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರತ್ಯೇಕ ಎಂಜಿನ್ ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಎಂಜಿನ್ ಜೋಡಣೆ ಮಾಡಲಾಗಿರುತ್ತೆ.

ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯೂಟಿವ್ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಚೇರ್ ಕ್ಲಾಸ್ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿದೆ.

ಹಾಗೆಯೇ ಪ್ರತಿ ಎರಡು ಬೋಗಿಗಳ ನಡುವೆ ಮೋಟಾರೈಸ್ಡ್ ಎಂಜಿನ್ ಅಳವಡಿಕೆ ಮಾಡಿರುವುದಿಂದ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗಿದೆ. ಜೊತೆಗೆ ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಕೂಡಾ ಹೊಂದಿದ್ದು, ಆಗಬಹುದಾದ ರೈಲು ದುರಂತಗಳಿಗೆ ಇದರಿಂದ ತಪ್ಪಿಸಬಹುದಾಗಿದೆ.

ಇದಲ್ಲದೇ ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಹೊಸ ರೈಲು ಪ್ರಸ್ತುತ ರೈಲುಗಳ ಓಡಾಟದ ಅವಧಿಗಿಂತಲೂ ಶೇ.45ರಷ್ಟು ಸಮಯ ಉಳಿಸಲ್ಲಿದ್ದು, ಮುಂಬರುವ 2021ರ ಹೊತ್ತಿಗೆ ದೇಶದ ವಿವಿಧ ನಗರಗಳನ್ನು ಸಂಪರ್ಕಿಸಲು ಒಟ್ಟು ಹತ್ತು ಕಡೆಗಳಲ್ಲಿ ವಂದೇ ಭಾರತ್ ರೈಲುಗಳನ್ನು ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರವು ಸುಳಿವು ನೀಡಿದೆ.


Click it and Unblock the Notifications








