ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯುಕೆಆರ್ಟಿಸಿ - NWKRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಯುಗಾದಿ ಜಾತ್ರೆ ಹಿನ್ನೆಲೆ, ಚಿಕ್ಕೋಡಿ ವಿಭಾಗದಿಂದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀಶೈಲಕ್ಕೆ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಈ ಕುರಿತು ಎನ್ಡಬ್ಲ್ಯುಕೆಆರ್ಟಿಸಿ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದೆ. 'ಚಂದ್ರಮಾನ ಯುಗಾದಿ ಹಬ್ಬದ ನಿಮಿತ್ತ ಏಪ್ರಿಲ್ 3 ರಿಂದ ಏಪ್ರಿಲ್ 10, 2024 ರವರೆಗೆ ನಡೆಯಲಿರುವ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಶೈಲಕ್ಕೆ ವಿಶೇಷ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ' ಎಂದು ತಿಳಿಸಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯುಕೆಆರ್ಟಿಸಿ - NWKRTC)ಗೆ ಸೇರಿರುವ ಚಿಕ್ಕೋಡಿ (Chikodi) ವಿಭಾಗವು ವಿವಿಧೆಡೆಯಿಂದ ಬಸ್ ಸೇವೆಯನ್ನು ಒದಗಿಸುತ್ತಿದೆ. ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಮತ್ತು ಗೋಕಾಕ್ ಬಸ್ ನಿಲ್ದಾಣಗಳಿಂದ ಶ್ರೀಶೈಲಕ್ಕೆ ಬಸ್ಗಳು ಹೊರಡಲಿವೆ. ಮಲ್ಲಿಕಾರ್ಜುನನ ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳುಬಹುದು.
ವಿಶೇಷವಾಗಿ ಒಂದು ಊರಿನಿಂದ 50 ಜನ ಪ್ರಯಾಣಿಕರು ಒಟ್ಟಾಗಿ ಬಂದರೆ, ಸಾಂದರ್ಭಿಕ ಒಪ್ಪಂದದ ಮೇರೆಗೆ ಶ್ರೀಶೈಲ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯಬಹುದು ಎಂದು ಎನ್ಡಬ್ಲ್ಯುಕೆಆರ್ಟಿಸಿ ತಿಳಿಸಿದೆ. ಪ್ರಮುಖವಾಗಿ ಕೊಡಲಸಂಗಮ, ಬಾದಾಮಿ, ಶಿವಯೋಗಿ ಮಂದಿರ, ಐಹೊಳೆ, ಪಟ್ಟದಕಲ್ಲು, ಮಂತ್ರಾಲಯ ಹಾಗೂ ಮಹಾನಂದಿಗೂ ಭೇಟಿ ನೀಡಬಹುದು.

ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಬರುವ ಭಕ್ತರು ತಮ್ಮ ಗ್ರಾಮಗಳಿಗೆ ಹಿಂದಿರುಗಿ ಹೋಗಲು ಇಲ್ಲಿಂದ ನೇರವಾಗಿ ಹೆಚ್ಚುವರಿ ಬಸ್ಗಳನ್ನು ಬಿಡಲಾಗುವುದು ಎಂದು ಎನ್ಡಬ್ಲ್ಯುಕೆಆರ್ಟಿಸಿ ಹೇಳಿದೆ. ಬೆಂಗಳೂರಿನಿಂದ ಶ್ರೀಶೈಲಕ್ಕೆ ಪ್ರತಿದಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ಕ್ಕೆ ಸೇರಿದ ನಾನ್ ಎಸಿ ಸ್ಲೀಪರ್ ಬಸ್ ಕೂಡ ಕಾರ್ಯಾಚರಣೆ ನಡೆಸುತ್ತದೆ.
ಈ ಬಸ್ ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು ಬೆಳಗ್ಗೆ 7:01ರ ಸುಮಾರಿಗೆ ಶ್ರೀಶೈಲವನ್ನು ತಲುಪುತ್ತದೆ. ಟಿಕೆಟ್ ವೊಂದಕ್ಕೆ ರೂ.1,168 ದರವಿದೆ. ಶ್ರೀಶೈಲದಿಂದ ಸಂಜೆ 4.01ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ಮರುದಿನ ಬೆಳಗ್ಗೆ 4:15ರ ಸುಮಾರಿಗೆ ಬೆಂಗಳೂರನ್ನು ತಲುಪುತ್ತದೆ.
ರಾಯಚೂರಿನಿಂದ ಕೂಡ ಶ್ರೀಶೈಲಕ್ಕೆ ಎರಡು ಸಾಮಾನ್ಯ ಸಾರಿಗೆ ಬಸ್ಗಳು ತೆರಳಲಿವೆ. ಇವುಗಳಿಗೆ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಬೆಳಗ್ಗೆ 11.15ಕ್ಕೆ ಹೊರಡುವ ಸಾಮಾನ್ಯ ಬಸ್ ಸಂಜೆ 5.30ಕ್ಕೆ ಶ್ರೀಶೈಲವನ್ನು ತಲುಪುತ್ತದೆ. ಮತ್ತೊಂದು ಬಸ್ ರಾತ್ರಿ 9.45ಕ್ಕೆ ಸಂಚಾರವನ್ನು ಶುರು ಮಾಡಲಿದ್ದು, ಮರುದಿನ ಬೆಳಗ್ಗೆ 4 ಸುಮಾರಿಗೆ ಶ್ರೀಶೈಲಕ್ಕೆ ಹೋಗುತ್ತದೆ. ಟಿಕೆಟ್ ವೊಂದಕ್ಕೆ ರೂ.488 ದರವಿದೆ.
ವಿಜಯಪುರದಿಂದಲೂ ಶ್ರೀಶೈಲಕ್ಕೆ ಮೂರು ಸಾಮಾನ್ಯ ಸಾರಿಗೆ ಬಸ್ಗಳು ಕಾರ್ಯಾಚರಣೆ ನಡೆಸುತ್ತವೆ. ಬೆಳಗ್ಗೆ 5.30, ಸಂಜೆ 4.01 ಮತ್ತು 6.26ಕ್ಕೆ ಈ ಬಸ್ಗಳು ಹೊರಡುತ್ತವೆ. ಟಿಕೆಟ್ ದರ ರೂ.741 ಇದೆ. ಕಲಬುರಗಿಯಿಂದ ಸಹ ಶ್ರೀಶೈಲಕ್ಕೆ ಎರಡು ಬಸ್ಗಳು ತೆರಳಲಿವೆ. ಬೆಳಗ್ಗೆ 8.30 ಮತ್ತು 09.30ಕ್ಕೆ ಬಸ್ಗಳು ಹೊರಡಲಿದ್ದು, ಟಿಕೆಟ್ ವೊಂದಕ್ಕೆ ರೂ.527 ದರವಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications