ಗೂಗಲ್ ಮ್ಯಾಪ್ ನಂಬಿಕೊಂಡು ಸೀದ ಹೋಗಿ ಕಾಲುವೆಗೆ ಬಿದ್ದ ಡಾಕ್ಟರ್ ಫ್ಯಾಮಿಲಿ
ವೈದ್ಯರೊಬ್ಬರು ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಾ ಗೂಗಲ್ ಮ್ಯಾಪನ್ನು ಅನುಸರಿಸಿ ಸೀದ ಹೋಗಿ ಕಾಲುವಿಗೆ ಬಿದ್ದಿರುವ ಘಟನೆ ಕೇರಳ ರಾಜ್ಯದ ಕೊಟ್ಟಾಯಂ ಸಮೀಪದ ಪರಚಲ್ ಎಂಬಲ್ಲಿ ನಡೆದಿದೆ. ಕಾರು ಕಾಲುವೆಗೆ ಬಿದ್ದರೂ ವಾಹನದಲ್ಲಿದ್ದ ನಾಲ್ವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಕಳೆದ ಗುರುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರಿನಲ್ಲಿ ಡಾ.ಸೋನಿಯಾ ತನ್ನ ಮೂರು ತಿಂಗಳ ಮಗು, ತಾಯಿ ಸೋಸಮ್ಮ ಮತ್ತು ಸಂಬಂಧಕ ಅನೀಶ್ ಜೊತೆಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯರು ಮತ್ತು ಕುಟುಂಬ ಸದಸ್ಯರು ಎರ್ನಾಕುಲಂನಿಂದ ಕುಂಬನಾಡ್ಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗ ತಿಳಿಯದೆ ಗೂಗಲ್ ಮ್ಯಾಪ್ಸ್ ಅನುಸರಿಸಿದ್ದಾರೆ.

ತಿರುವಾತುಕ್ಕಲ್ ಮತ್ತು ನಟ್ಟಕೋಮ್ ಸಿಮೆಂಟ್ ಜಂಕ್ಷನ್ ಬೈಪಾಸ್ ನಡುವೆ ಇದ್ದಾಗ ದಾರಿ ತಪ್ಪಿದಾಗ ವಾಹನವು ಪರಚಲ್ನಲ್ಲಿ ಜಲಾವೃತ ಪ್ರದೇಶಕ್ಕೆ ನುಗ್ಗಿದೆ. ವಾಹನವು ಹೊಳೆಯ ಪ್ರವಾಹಕ್ಕೆ ಸಿಲುಕಿ ಕೆಳಕ್ಕೆ ಹರಿದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸ್ಥಳೀಯರ ಗಮನ ಸೆಳೆಯಲು ಕಿರುಚಿಕೊಂಡಿದ್ದಾರೆ.

ಕಾಲುವೆಯಲ್ಲಿ ಕಾರು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕಾರ್ಯಪ್ರವೃತ್ತರಾಗಿ 300 ಮೀಟರ್ ಹಗ್ಗದ ವ್ಯವಸ್ಥೆ ಮಾಡಿದರು. ಕಾರು ಮುಳುಗುವ ಮುನ್ನ ವಾಹನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಆದರೆ ಕಾರು ಹೊಳೆಯಲ್ಲಿ 300 ಮೀಟರ್ ದೂರ ಸಾಗಿ ವಾಹನದ ಮುಂಭಾಗ ಸಂಪೂರ್ಣ ನೀರಿನಲ್ಲಿ ಮುಳುಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದೇ ಮೊದಲೇನಲ್ಲ...
ಅಹಮದ್ ನಗರದ ಅಕೋಲೆ ಪಟ್ಟಣದಲ್ಲಿ ಕಳೆದ ವರ್ಷ 34 ವರ್ಷದ ಸತೀಶ್ ಘುಲೆ ಎಂಬಾತ ಗೂಗಲ್ ಮ್ಯಾಪ್ಸ್ ಅನುಸರಿಸಿ ತಡರಾತ್ರಿ 1.45ರ ಸುಮಾರಿಗೆ ಕಾಲುವೆಯೊಂದಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಚಾಲಕನಿಗೆ ಮಾರ್ಗ ತಿಳಿಯದ ಕಾರಣ ಆತ ಗೂಗಲ್ ಮ್ಯಾಪ್ ಆನ್ ಮಾಡಿದ್ದ, ಆದರೆ ದುರದೃಷ್ಟವಶಾತ್ ಜೀವ ಕಳೆದುಕೊಂಡ.

ಅಧಿಕಾರಿಗಳು ಪಿಂಪಲ್ಗಾಂವ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ ನಂತರ ಸುಮಾರು 4 ತಿಂಗಳ ಕಾಲ ನೀರಿನ ಅಡಿಯಲ್ಲೇ ಸೇತುವೆ ಉಳಿದಿತ್ತು. ಆದರೂ ಗೂಗಲ್ ಮ್ಯಾಪ್ಸ್ ಈ ಸಂಚಾರದ ಮಾರ್ಗವನ್ನು ಹಾಗೇ ತೋರಿಸಿದೆ. Google ಮ್ಯಾಪ್ಗಳಲ್ಲಿ ಮಾಹಿತಿಯನ್ನು ಅಪ್ಡೇಟ್ ಮಾಡದೇ ಮ್ಯಾಪ್ನಲ್ಲಿ ಯಾವುದೇ ಎಚ್ಚರಿಕೆ ತೋರದಿರುವುದೇ ಈ ಘಟನೆಗೆ ಕಾರಣವಾಗಿದೆ.

ಅಲ್ಲದೆ, ಸೇತುವೆಯ ಮುಂದೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಪಿಡಬ್ಲ್ಯುಡಿ ಇಲಾಖೆ ಯಾವುದೇ ಸೂಚನೆ ಅಥವಾ ಎಚ್ಚರಿಕೆಯನ್ನು ಸಹ ಹಾಕಿಲ್ಲ. ನಾಲ್ಕು ತಿಂಗಳಿನಿಂದ ಸೇತುವೆ ಮುಳುಗಡೆಯಾಗುತ್ತಿರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದರಿಂದ ಅವರು ಸೇತುವೆಯನ್ನು ಬಳಸುತ್ತಿರಲಿಲ್ಲ. ಆದರೆ ಹೊರಗಿನವರಿಗೆ ತಿಳಿಯುವಂತೆ ಯಾವುದೇ ಮಾಹಿತಿ ಇರಲಿಲ್ಲ.

ಮ್ಯಾಪ್ ನಂಬಿಕೊಂಡು ಕಾಡಿಗೆ ಹೋದ ಚಾಲಕ
ಟಾಟಾ ಹ್ಯಾರಿಯರ್ನಲ್ಲಿ ಇನ್ನೊಬ್ಬ ವ್ಯಕ್ತಿ ಗೂಗಲ್ ಮ್ಯಾಪ್ಸ್ ಅನ್ನು ಅನುಸರಿಸಿ ಕಾಡಿನಲ್ಲಿ ಭೀಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು. ನ್ಯಾವಿಗೇಷನ್ಗಾಗಿ ಗೂಗಲ್ ಮ್ಯಾಪ್ ಸಹಾಯ ಪಡೆದ ಅವರು ಬೆಳಿಗ್ಗೆ 9 ಗಂಟೆಗೆ ಪುಣೆಯಿಂದ ಪ್ರಾರಂಭಿಸಿ, ರಾತ್ರಿ ನಾಗ್ಪುರದಲ್ಲಿ ನಿಲ್ಲಲು ಯೋಜಿಸಿದ್ದರು. ಆದರೆ Google ಮ್ಯಾಪ್ಸ್ ಗಮ್ಯಸ್ಥಾನವನ್ನು 11 PM ಎಂದು ತೋರಿಸಿದೆ.

ಈ ನಡುವೆ ಅಮರಾವತಿ ಬಳಿಯ ಮುಖ್ಯ ರಸ್ತೆಯಿಂದ ತಿರುವು ಹೊಂದಿರುವ ಮಾರ್ಗವನ್ನು ಗೂಗಲ್ ಮ್ಯಾಪ್ ತೋರಿಸಿದೆ. ಅಷ್ಟೊತ್ತಿಗಾಗಲೇ 14 ಗಂಟೆ ವಾಹನ ಚಲಾಯಿಸಿದ್ದ ಅವರು ಹೆಚ್ಚು ಯೋಚಿಸದೆ ಪರ್ಯಾಯ ಮಾರ್ಗವನ್ನು ಅನುಸರಿಸಿದರು. ಆದರೂ, ಕತ್ತಲೆಯಾದ ಮತ್ತು ಕಿರಿದಾದ ಮಾರ್ಗವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಅವರಿಗೆ ತಿಳಿದಿತ್ತು.

ಆದರೂ ಅವರು ಗೂಗಲ್ ಮ್ಯಾಪ್ಸ್ ಇದೆಯೆಂಬ ನಂಬಿಕೆಯಿಂದ ಮುಂದೆ ಹೋದರು. ಒಂದು ಗಂಟೆಯಲ್ಲಿ ಸುಮಾರು 20 ಕಿ.ಮೀ ಕ್ರಮಿಸಿದ ನಂತರ ಅವರು ಮುರಿದ ಸೇತುವೆಯನ್ನು ಹೊಂದಿರುವ ಸಣ್ಣ ನದಿಯ ತೊರೆಯನ್ನು ತಲುಪಿದರು. ಸೇತುವೆಯು ಕೆಟ್ಟದಾಗಿ ಹಾನಿಗೊಳಗಾಗಿರುವುದು ಗೊತ್ತಾಗಿ ಮುಂದೆ ಸಾಗಿದರೆ ಆಪಾಯ ಖಚಿತ ಎಂಬುದನ್ನು ಅರತು ಹಿಂತಿರುಗಿದ್ದಾರೆ.

ಗೂಗಲ್ ಮ್ಯಾಪ್ಸ್ ತೀರಾ ಕೆಟ್ಟ ಸಾಧನವೇನಲ್ಲ, ತನ್ನ ಅಪ್ಡೇಟ್ಗಲಿಗೆ ತಕ್ಕಂತೆ ಮಾರ್ಗಗಳನ್ನು ತೋರುತ್ತದೆ. ಆದರೆ ಮಾರ್ಗಗಳಲ್ಲಿ ತೊಂದರೆಯಿದ್ದಾಗ ಅದನ್ನು ಅಪ್ಡೇಟ್ ಮಾಡದಿದ್ದಾಗ ಮಾತ್ರ ಸವಾರರಿಗೆ ಇಂತಹ ಅಪಾಯಗಳು ಖಚಿತವಾಗಿರುತ್ತವೆ. ನಿತ್ಯ ಕೋಟ್ಯಾಂತರ ಮಂದಿ ಬಳಸುವ ಗೂಗಲ್ ಮ್ಯಾಪ್ನಲ್ಲಿ ಕೇವಲ ಬೆರಳೆಣಿಕೆಯಷ್ಟು ಇಂತಹ ಪ್ರಕರಣಗಳು ದಾಖಲಾಗುತ್ತವೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಗೂಗಲ್ ಮ್ಯಾಪ್ಗಳು ಸಿಟಿಗಳಲ್ಲಿ ಹೆಚ್ಚು ಅಪ್ಡೇಟ್ಗಳನ್ನು ಹೊಂದಿರುತ್ತವೆ. ಕೆಲವೊಮ್ಮ ಸಿಟಿಯಲ್ಲೂ ಕೂಡ ತಪ್ಪು ಮಾರ್ಗಗಳನ್ನು ತೋರಿ ಗೊಂದಲಕ್ಕೀಡು ಮಾಡಿದ ಹಲವು ಅನುಭವಗಳು ಹಲವರಿಗಿರಬಹುದು. ಆದರೂ ನಗರಗಳಲ್ಲಿ ಅಪಾಯಕ್ಕೆ ಸಿಲುಕುವ ಘಟನೆಗಳು ತೀರಾ ಕಡಿಮೆ. ಆದರೆ ಹೊರಗಿನ ಪ್ರದೇಶಗಳಿಗೆ ಹೋದಾಗ ಗೂಗಲ್ ಮ್ಯಾಪ್ಸ್ ಬದಲಿಗೆ ಆದಷ್ಟು ಇತರರನ್ನು ಕೇಳಿ ಮಾರ್ಗವನ್ನು ಕಂಡುಕೊಳ್ಳುವುದು ಉತ್ತಮ.


Click it and Unblock the Notifications