ನಗರದೊಳಗೆ ಹೆಲ್ಮೆಟ್ ಕಡ್ಡಾಯವಲ್ಲವೆಂದ ಸಚಿವ
ದ್ವಿಚಕ್ರ ವಾಹನಗಳ ಅಪಘಾತವಾದಾಗ ತಲೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ತಲೆಗೆ ಪೆಟ್ಟು ಬಿದ್ದು ಪ್ರಾಣ ಹೋಗುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಅನ್ನು ಕಡ್ಡಾಯಗೊಳಿಸಿವೆ.

ಮೊದಲು ಹೆಲ್ಮೆಟ್ ಅನ್ನು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಕಡ್ಡಾಯಗೊಳಿಸಲಾಗಿತ್ತು. ನಂತರ ಹಿಂಬದಿ ಸವಾರರಿಗೂ ಕಡ್ಡಾಯಗೊಳಿಸಲಾಯಿತು. ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ದಂಡವನ್ನು ಕೂಡ ವಿಧಿಸಲಾಗುತ್ತದೆ.

ಮೊದಲು ರೂ.100 ದಂಡ ವಿಧಿಸಲಾಗುತ್ತಿತ್ತು. ಸೆಪ್ಟೆಂಬರ್ನಲ್ಲಿ ಜಾರಿಗೆ ಬಂದ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಈ ಮೊತ್ತವನ್ನು ರೂ.1000ಕ್ಕೆ ಏರಿಸಲಾಗಿದೆ. ಇದರ ಜೊತೆಗೆ ಪದೇ ಪದೇ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿ ಸಿಕ್ಕಿ ಬಿದ್ದಲ್ಲಿ 3 ತಿಂಗಳ ಕಾಲ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗುವುದು.

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಈಗ ಗುಜರಾತ್ ರಾಜ್ಯದ ಸಾರಿಗೆ ಸಚಿವರಾದ ಆರ್ ಸಿ ಫಾಲ್ದುರವರು ಇನ್ನು ಮುಂದೆ ಗುಜರಾತ್ನ ನಗರಗಳಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ಹೆಲ್ಮೆಟ್ ಕಡ್ಡಾಯವಲ್ಲ ಎಂದು ಹೇಳಿದ್ದಾರೆ.

ಆದರೆ ಹೈವೇ ಹಾಗೂ ಹಳ್ಳಿಯ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿರಬೇಕೆಂದು ತಿಳಿಸಿದ್ದಾರೆ. ಹೆಲ್ಮೆಟ್ ಧರಿಸುವ ರಿಯಾಯಿತಿಯು ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಮುನ್ಸಿಪಾಲಿಟಿ ಮಿತಿಯೊಳಗೆ ಮಾತ್ರ ಅನ್ವಯಿಸಲಿದೆ.

ಈ ಬಗ್ಗೆ ಮಾತನಾಡಿದ ಆರ್ ಸಿ ಫಾಲ್ದುರವರು ನಗರದಲ್ಲಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಅನೇಕ ದೂರುಗಳು ಬಂದಿದ್ದವು. ಈ ಕಾರಣಕ್ಕಾಗಿ ಇಷ್ಟವಿರುವವರು ಮಾತ್ರ ನಗರದೊಳಗೆ ಹೆಲ್ಮೆಟ್ ಧರಿಸಬಹುದೆಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿದರು.

ನಗರಗಳಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವವರು ಹೆಚ್ಚು ದೂರ ಪ್ರಯಾಣಿಸುವುದಿಲ್ಲ ಎಂಬುದು ಸಾರಿಗೆ ಸಚಿವರ ಅಭಿಪ್ರಾಯ. ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡವನ್ನು ವಿರೋಧಿಸಿ ಜನರು ಪ್ರತಿಭಟಿನೆ ನಡೆಸಿದ ಕಾರಣಕ್ಕೆ ಗುಜರಾತ್ನಲ್ಲಿ ದಂಡದ ಪ್ರಮಾಣವನ್ನು ಕಡಿಮೆ ಮಾಡಲಾಯಿತು.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಗುಜರಾತ್ನಲ್ಲಿ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವ ಹಿಂಬದಿ ಸವಾರರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಗುಜರಾತ್ ಈ ರಿಯಾಯಿತಿಯನ್ನು ನೀಡಿದ ಮೊದಲ ರಾಜ್ಯವಾಗಿದೆ. ಆದರೆ ಮೋಟಾರು ವಾಹನ ಕಾಯ್ದೆಯನ್ವಯ ಸವಾರ ಹಾಗೂ ಹಿಂಬದಿಯ ಸವಾರರಿಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯ.
MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಅಪಘಾತವಾದಾಗ ಸವಾರ ಹಾಗೂ ಹಿಂಬದಿ ಸವಾರರ ತಲೆಗೆ ಪೆಟ್ಟು ಬೀಳದಂತೆ ಮಾಡಲು ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಅಪಘಾತದಲ್ಲಿ ತಲೆಗೆ ಹೆಚ್ಚು ಪೆಟ್ಟು ಬೀಳುವ ಕಾರಣಕ್ಕೆ ದ್ವಿ ಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಸಾರಿಗೆ ಇಲಾಖೆಯು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಅಂದರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೆರಡೂ ಕಾನೂನನ್ನು ಜಾರಿಗೊಳಿಸಬಹುದು. ಇದರಿಂದಾಗಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆಯನ್ನು ರಾಜ್ಯ ಸರ್ಕಾರವು ತಿದ್ದುಪಡಿ ಮಾಡಬಹುದಾಗಿದೆ.

ಇದರಿಂದಾಗಿ ಗುಜರಾತ್ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಕಾನೂನನ್ನು ಬದಿಗೊತ್ತಿ ತನಗೆ ಇಷ್ಟ ಬಂದ ರೀತಿಯಲ್ಲಿ ಕಾನೂನನ್ನು ತಿದ್ದುಪಡಿ ಮಾಡುತ್ತಿದೆ. ಬೈಕ್/ಸ್ಕೂಟರ್ ಸವಾರನ ತಲೆ ರಸ್ತೆಗೆ ಬಡಿದಾಗ ಹೆಚ್ಚಿನ ಪರಿಣಾಮವನ್ನು ಹೀರಿಕೊಳ್ಳುವಂತೆ ಕ್ರ್ಯಾಶ್ ಹೆಲ್ಮೆಟ್ಗಳನ್ನು ವಿನ್ಯಾಸಗೊಳಿಸಲಾಗಿದೆ.

ಹೆಲ್ಮೆಟ್ಗಳು ಸವಾರನ ತಲೆಗೆ ಗಂಭೀರವಾದ ಗಾಯಗಳಾಗದಂತೆ ತಡೆಯುತ್ತವೆ. ಬಹುತೇಕ ಸಂದರ್ಭಗಳಲ್ಲಿ ಹೆಲ್ಮೆಟ್ಗಳು ಸವಾರನ ಜೀವವನ್ನು ಉಳಿಸುತ್ತವೆ. ಹೆಲ್ಮೆಟ್ ಧರಿಸದಿದ್ದಾಗ ಅಪಘಾತವಾದರೆ ಗಂಭೀರ ಪರಿಣಾಮಗಳಾಗುವ ಸಾಧ್ಯತೆಗಳಿರುತ್ತವೆ.

ಆದ್ದರಿಂದ, ಸರ್ಕಾರವು ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಿದ್ದರೂ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವುದು ಒಳ್ಳೆಯದು. 40 ಕಿ.ಮೀ ವೇಗದಲ್ಲಿ ಚಲಿಸಿದರೂ ಕೆಳಗೆ ಬಿದ್ದರೆ ತಲೆಗೆ ಗಾಯಗಳಾಗುವ ಸಾಧ್ಯತೆಗಳಿರುತ್ತವೆ.

ಹೆಲ್ಮೆಟ್ ಧರಿಸಿದ್ದರೆ ತಲೆಗೆ ಪೆಟ್ಟು ಬೀಳುವುದನ್ನು ತಪ್ಪಿಸಬಹುದು. ಗಮನಿಸಬೇಕಾದ ಸಂಗತಿಯೆಂದರೆ, ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರಿಗೆ ತಲೆಗೆ ಗಾಯಗಳಾಗುವಂತಹ ಅಪಘಾತಗಳು ಸಂಭವಿಸುವುದು ನಗರದೊಳಗೆ.

ಹೆಲ್ಮೆಟ್ ಇಲ್ಲದ ಬೈಕ್ ಸವಾರರ ವಿರುದ್ಧ ಮತ್ತಷ್ಟು ಕಠಿಣ ಕ್ರಮ
ದುಬಾರಿ ದಂಡಗಳನ್ನು ಒಳಗೊಂಡ ಹೊಸ ಸಂಚಾರಿ ನಿಯಮ ಜಾರಿ ನಂತರ ಕಡಿಮೆಯಾಗಬೇಕಿದ್ದ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯು ಮತ್ತಷ್ಟು ಹೆಚ್ಚಳವಾಗುತ್ತಿದ್ದು, ಕಡ್ಡಾಯ ಹೆಲ್ಮೆಟ್ ಬಳಕೆಗಾಗಿ ಮತ್ತಷ್ಟು ಹೊಸ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಬಂದ ನಂತರ ವಾಹನ ಸವಾರರನ್ನು ತೀವ್ರ ತಪಾಸಣೆ ಮಾಡುತ್ತಿರುವ ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಭರ್ಜರಿ ದಂಡ ವಸೂಲಿ ಮಾಡುತ್ತಿದ್ದಾರೆ.

ಹೀಗಿರುವಾಗ ಕೆಲವು ವಾಹನ ಸವಾರರು ಮಾತ್ರ ಹೊಸ ರೂಲ್ಸ್ಗೂ ಡೋಂಟ್ ಕೇರ್ ಎನ್ನುವಂತೆ ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದ್ದು, ಹೆಲ್ಮೆಟ್ ಕಡ್ಡಾಯ ಬಳಕೆಗೆ ಬೆಂಗಳೂರು ಪೊಲೀಸರು ಹೊಸ ನಿಯಮವೊಂದನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದಾರೆ.

ಬೈಕ್ ಸವಾರರಿಗೆ ಹೆಲ್ಮೆಟ್ ಬಳಕೆಯು ಜೀವ ರಕ್ಷಕವಾಗಿದ್ದರೂ ಕೆಲವು ಬೈಕ್ ಸವಾರರು ಮಾತ್ರ ಹೆಲ್ಮೆಟ್ ಬಳಕೆ ಅವಶ್ಯಕತೆಯೇ ಇಲ್ಲ ಎನ್ನುವಂತಹ ಮನಸ್ಥಿತಿ ಹೊಂದಿದ್ದು, ಅಪಘಾತಗಳ ವೇಳೆ ಅದೆಷ್ಟೋ ಸವಾರರು ಜೀವ ಕಳೆದುಕೊಂಡಿದ್ದಾರೆ.

ಹೀಗಾಗಿ ಬೈಕ್ ಸವಾರರು ಕಡ್ಡಾಯ ಹೆಲ್ಮೆಟ್ ಬಳಕೆಗೆ ಹೊಸ ಸಂಚಾರಿ ನಿಯಮದಲ್ಲಿ ಭರ್ಜರಿ ದಂಡಗಳ ಹೊರತಾಗಿಯೂ ಹೆಲ್ಮೆಟ್ ಬಳಕೆಯನ್ನು ಕಟ್ಟುನಿಟ್ಟಾಗಿ ಕಡ್ಡಾಯಗೊಳಿಸುತ್ತಿರುವ ಬೆಂಗಳೂರು ಪೊಲೀಸರು ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಪೆಟ್ರೋಲ್ ಬಂಕ್ ಮಾಲೀಕರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಪೆಟ್ರೋಲ್ ಬಂಕ್ಗಳಿಗೆ ಬರುವ ದ್ವಿಚಕ್ರ ಸವಾರರು ಹೆಲ್ಮೆಟ್ ಬಳಕೆ ಮಾಡಿದ್ದರೆ ಮಾತ್ರವೇ ಇಂಧನ ಹಾಕುವಂತೆ ಪೊಲೀಸ್ ಪ್ರಕಟಣೆ ಹೊರಡಿಸಲಾಗಿದ್ದು, ಪೆಟ್ರೋಲ್ ಬಂಕ್ ಮಾಲೀಕರು ಕೂಡಾ ಬೈಕ್ ಸವಾರರಿಗೆ ಕಡ್ಡಾಯ ಹೆಲ್ಮೆಟ್ ಬಳಕೆ ಮಾಡಿದಲ್ಲಿ ಮಾತ್ರ ಪೆಟ್ರೋಲ್ ಎನ್ನುವಂತಹ ಫಲಕಗಳನ್ನು ಹಾಕುತ್ತಿದ್ದಾರೆ. ಇದರಿಂದ ಬೈಕ್ ಸವಾರರು ಒಂದು ವೇಳೆ ಹೆಲ್ಮೆಟ್ ಹಾಕದೆ ಪೊಲೀಸರಿಂದ ತಪ್ಪಿಸಿಕೊಂಡರೂ ಸಹ ಪೆಟ್ರೋಲ್ ಇಲ್ಲದೇ ಪರದಾಡುವಂತಹ ಪರಿಸ್ಥಿತಿ ಎದುರಿಸಬೇಕಾಗುತ್ತೆ.


Click it and Unblock the Notifications