ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡುತ್ತಿರುವ ವೃದ್ಧ ದಂಪತಿ
ಅಪಘಾತಗಳಿಂದ ಜನರ ಜೀವ ಉಳಿಸಲು ಹೈದರಾಬಾದ್ ಮೂಲದ ದಂಪತಿಗಳು ಕಳೆದ 11 ವರ್ಷಗಳಿಂದ ರಸ್ತೆಗಳನ್ನು ದುರಸ್ತಿ ಮಾಡುತ್ತಿದ್ದಾರೆ. ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿ, ಅಪಘಾತಗಳಾಗದಂತೆ ತಡೆಯುವುದು ಅವರ ಉದ್ದೇಶ.

ಈ ಕಾರ್ಯಕ್ಕೆ ಅವರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಿರುವುದು ಗಮನಾರ್ಹ. ರಸ್ತೆ ಅಪಘಾತಗಳಿಗೆ ಕೆಟ್ಟ ರಸ್ತೆಗಳು ಸಹ ಕಾರಣವಾಗುತ್ತವೆ. ಈ ದಂಪತಿಗಳು ತಮ್ಮ ಪರೋಪಕಾರಿ ಕೆಲಸದ ಮೂಲಕ ಹಲವು ಜನರ ಪ್ರಾಣ ಉಳಿಸಿದ್ದಾರೆ.

73 ವರ್ಷದ ಗಂಗಾಧರ್ ತಿಲಕ್ ಕಟ್ನಮ್ ಹಾಗೂ ಅವರ ಪತ್ನಿ 64 ವರ್ಷದ ವೆಂಕಟೇಶ್ವರಿ ಕಟ್ನಮ್ ಎಂಬುವವರೇ ರಸ್ತೆ ದುರಸ್ತಿಯಲ್ಲಿ ತೊಡಗಿರುವ ದಂಪತಿ. ಗಂಗಾಧರ ತಿಲಕ್ ಕಟ್ನಮ್ ಅವರನ್ನು ಜನರು ಪ್ರೀತಿಯಿಂದ ರೋಡ್ ಡಾಕ್ಟರ್ ಎಂದು ಕರೆಯುತ್ತಾರೆ.

ಅವರು ಯಾವುದೇ ರಸ್ತೆಯಲ್ಲಿ ಗುಂಡಿಗಳು ಕಂಡು ಬಂದರೆ ಅಲ್ಲಿಗೆ ತಮ್ಮ ಕಾರಿನಲ್ಲಿ ತೆರಳಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಾರೆ. ಈ ಕಾರನ್ನು ರಸ್ತೆ ದುರಸ್ತಿ ಆಂಬ್ಯುಲೆನ್ಸ್ ಎಂದೇ ಕರೆಯಲಾಗುತ್ತದೆ.

ಹದಗೆಟ್ಟ ರಸ್ತೆಗಳಿಂದ ಉಂಟಾಗುತ್ತಿದ್ದ ಅಪಘಾತಗಳನ್ನು ನೋಡಿದ ನಂತರ, ಈ ಸಮಸ್ಯೆಯನ್ನು ಪರಿಹರಿಸಿ, ಪರಿಹಾರವನ್ನು ನೀಡಲು ಏನಾದರೂ ಮಾಡಬಹುದೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.

ನಾನು ಮೊದಲಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ನಾನೇ ರಸ್ತೆಗಳನ್ನು ರಿಪೇರಿ ಮಾಡಲು ನಿರ್ಧರಿಸಿದೆ ಗಂಗಾಧರ ತಿಲಕ್ ಕಟ್ನಮ್ ಹೇಳಿದ್ದಾರೆ.

ಗಂಗಾಧರ್ ತಿಲಕ್ ಕಟ್ನಮ್ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ನಿವೃತ್ತಿಯ ನಂತರ ಅವರು ಹೈದರಾಬಾದ್ನ ಸಾಫ್ಟ್ವೇರ್ ಕಂಪನಿಯಲ್ಲಿ ಸಾಫ್ಟ್ವೇರ್ ಡಿಸೈನ್ ಎಂಜಿನಿಯರ್ ಆಗಿ ಕೆಲಸ ಮಾಡಿದರು.

ಹದಗೆಟ್ಟ ರಸ್ತೆಗಳನ್ನು ಸರಿಪಡಿಸಬೇಕು ಎಂಬ ಕಾರಣಕ್ಕೆ ಅವರು ಒಂದು ವರ್ಷದೊಳಗೆ ಅವರು ಸಾಫ್ಟ್ವೇರ್ ಡಿಸೈನ್ ಎಂಜಿನಿಯರ್ ಹುದ್ದೆಯನ್ನು ತೊರೆದರು. ಅಂದಿನಿಂದ ಅವರು ಈ ಕೆಲಸಕ್ಕೆ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದಾರೆ. ಗಂಗಾಧರ್ ತಿಲಕ್ ಕಟ್ನಮ್ ತಮಗೆ ಬರುವ ಪಿಂಚಣಿ ಹಣದಿಂದ ಈ ಕೆಲಸ ಮಾಡುತ್ತಿದ್ದಾರೆ.

ಈ ಕೆಲಸಕ್ಕೆ ಬಳಸಲಾಗುವ ವಸ್ತುಗಳನ್ನು ನನ್ನ ಪಿಂಚಣಿ ಹಣದಿಂದ ಖರೀದಿಸಲಾಗಿದೆ. ಕಳೆದ 11 ವರ್ಷಗಳಲ್ಲಿ ನಾನು ಸುಮಾರು 2,030 ರಸ್ತೆ ಗುಂಡಿಗಳನ್ನು ಮುಚ್ಚಿದ್ದೇನೆ. ಇದಕ್ಕಾಗಿ ನಾನು 40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ ಎಂದು ಗಂಗಾಧರ್ ತಿಲಕ್ ಕಟ್ನಮ್ ಹೇಳಿದ್ದಾರೆ.

ಈಗ ಸರ್ಕಾರಿ ಅಧಿಕಾರಿಗಳೂ ಸಹ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದು, ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ನೆರವು ನೀಡಿದ್ದಾರೆ. ಗಂಗಾಧರ್ ತಿಲಕ್ ಕಟ್ನಮ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತದಲ್ಲಿ ರಸ್ತೆ ಅಪಘಾತಗಳಿಂದ ಪ್ರತಿವರ್ಷ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

ಇದರ ಜೊತೆಗೆ ಹದಗೆಟ್ಟ ರಸ್ತೆಗಳು ಸಹ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿವೆ. ಈ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಸ್ತೆಗಳ ಗುಣಮಟ್ಟವನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಸಂಚಾರಿ ನಿಯಮಗಳ ಉಲ್ಲಂಘನೆಗಳನ್ನು ತಡೆಯಲು ಭಾರೀ ಪ್ರಮಾಣದ ದಂಡ ವಿಧಿಸುವುದು, ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಮೇಲ್ವಿಚಾರಣೆ ಮಾಡಲು ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇವುಗಳ ಜೊತೆಗೆ ಗುಣಮಟ್ಟದ ರಸ್ತೆಗಳ ನಿರ್ಮಾಣ ಕಾರ್ಯವು ಸಹ ಸೇರಿದೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಗಂಗಾಧರ್ ತಿಲಕ್ ಕಟ್ನಮ್ ಅವರಂತಹ ವ್ಯಕ್ತಿಗಳು ನೀಡುತ್ತಿರುವ ಕೊಡುಗೆ ನಿಜಕ್ಕೂ ಶ್ಲಾಘನೀಯ.


Click it and Unblock the Notifications