ಸ್ವಚ್ಚ ಭಾರತ; ದೇಶದ ಚೊಚ್ಚಲ ಹಸಿರು ರೈಲು ಮಾರ್ಗಕ್ಕೆ ಚಾಲನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ತರ 'ಸ್ವಚ್ಚ ಭಾರತ' ಅಭಿಯಾನದೊಂದಿಗೆ ಕೈಜೋಡಿಸಿಕೊಂಡಿರುವ ಭಾರತೀಯ ರೈಲ್ವೆ, ದೇಶದ ಚೊಚ್ಚಲ 'ಹಸಿರು ರೈಲು ಮಾರ್ಗ'ಕ್ಕೆ ಚಾಲನೆ ನೀಡಿದೆ.
ತಮಿಳುನಾಡಿನ ದಕ್ಷಿಣದ ತುತ್ತ ತುದಿಯಲ್ಲಿ ಸ್ಥಿತಗೊಂಡಿರುವ ಇತಿಹಾಸ ಪ್ರಸಿದ್ಧ ರಾಮೇಶ್ವರಂದಿಂದ ಮನಮಧುರೈ ವರೆಗಿನ 114 ಕೀ.ಮೀ. ದೂರದ ಹಳಿಯನ್ನು ಹಸಿರು ಮಾರ್ಗವಾಗಿ ಘೋಷಿಸಲಾಗಿದೆ.

ರೈಲ್ವೆ ಸಚಿವ ಸುರೇಶ್ ಪ್ರಭು ಅವರು ದೇಶದ ಮೊತ್ತ ಮೊದಲ ಹಸಿರು ರೈಲು ಮಾರ್ಗಕ್ಕೆ ಚಾಲನೆ ನೀಡಿದ್ದಾರೆ. ತದಾ ಮೂಲಕ ಸ್ವಚ್ಚ ಭಾರತಕ್ಕೆ ಆವೇಗ ತುಂಬಿದ್ದಾರೆ.

ಪ್ರಮುಖವಾಗಿಯೂ ಹಸಿರು ರೈಲು ಮಾರ್ಗದಲ್ಲಿ ಜೈವಿಕ ಶೌಚಾಲಯಗಳನ್ನು ಆಳವಡಿಸಲಾಗುವುದು. ತನ್ಮೂಲಕ ಮಲ, ಮೂತ್ರಗಳು ಹಳಿಗೆ ಬೀಳುವುದನ್ನು ತಡೆಯಲಾಗುವುದು.

ಈ ವಿಭಾಗದಲ್ಲಿ ಓಡುವ ಎಲ್ಲ ಎಕ್ಸ್ ಪ್ರೆಸ್ ಹಾಗೂ ಪ್ರಯಾಣಿಕ ರೈಲುಗಳಲ್ಲಿ ಜೈವಿಕ ಶೌಚಾಲಯಗಳನ್ನು ಆಳವಡಿಸಲಾಗುವುದು ಎಂದು ದಕ್ಷಿಣ ರೈಲ್ವೆ (ಎಸ್ಆರ್) ಖಾತ್ರಿಪಡಿಸಿದೆ.

ರಾಮೇಶ್ವರಂ ಮತ್ತು ಮನಮಧುರೈ ನಡುವೆ 14 ನಿಲ್ದಾಣಗಳಿದ್ದು, ದೈನಂದಿನ 16 ಪ್ರಯಾಣಿಕ ರೈಲುಗಳು ಓಡಾಡುತ್ತಿದೆ. ಅಲ್ಲದೆ ರೈಲ್ವೆ ಸಚಿವಾಲಯವು ಈಗಾಗಲೇ 40,750ರಷ್ಟು ಜೈವಿಕ ಶೌಚಾಲಯಗಳನ್ನು ಹಸ್ತಾಂತರಿಸಿದೆ.

ಜೈವಿಕ ಶೌಚಾಲಯದ ಫಲದಾಯಕತೆಯನ್ನು ಪರೀಕ್ಷಿಸಲು ರಾಮೇಶ್ವರಂ ರೈಲ್ವೆ ನಿಲ್ದಾಣದಲ್ಲಿ ವಿಶೇಷ ಪ್ರಯೋಗಾಲಯವನ್ನು ರೂಪಿಸಲಾಗಿದೆ.

ಪರಿಸರ ಮಾಲಿನ್ಯವನ್ನು ತಡೆಯಲು ಜೈವಿಕ ಶೌಚಾಲಯವನ್ನು ರೈಲ್ವೆ ಬೋಗಿಗಳಿಗೆ ಜೋಡಿಸಲಾಗಿದ್ದು, ಮಲ, ಮೂತ್ರಗಳನ್ನು ಸಂಸ್ಕರಣೆ ಮಾಡಲಾಗುವುದು. ಇದಕ್ಕಾಗಿ ಭಾರತೀಯ ರೈಲ್ವೆಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಜೊತೆ ಕೈಜೋಡಿಸಿಕೊಂಡಿದೆ.

ರೈಲ್ವೆ ಶೌಚಾಲಯದ ಅಡಿಯಲ್ಲಿ ಜೋಡಣೆ ಮಾಡಲಿರುವ ಬಯೋ ಟಾಯ್ಲೆಟ್ ಟ್ಯಾಂಕ್ ಗಳು ಆರು ವಿಭಾಗಗಳನ್ನು ಒಳಗೊಂಡಿರಲಿದೆ. ವಿವಿಧ ಹಂತದ ಸಂಸ್ಕರಣೆಯ ಬಳಿಕ ಕೊನೆಗೆ ಜಲ ಹಾಗೂ ಅನಿಲವಾಗಿ ಪರಿವರ್ತನೆಯಾಗಲಿದೆ.

ದೇಶದ ಇತರೆಡೆಗಳಿಗೂ ಬಯೋ ಟಾಯ್ಲೆಟ್ ಯೋಜನೆಯನ್ನು ವಿಸ್ತರಿಸಲಾಗುವುದು. ಮುಂದಿನ ಹಂತವಾಗಿ ಓಕಾ-ಕನಲಸ್ ಜಂಕ್ಷನ್ (141 ಕೀ.ಮೀ.), ಪೋರ್ ಬಂದರ್-ವಾನ್ಸ್ ಜಲಿಯಾ (34 ಕೀ.ಮೀ.) ಹಾಗೂ ಜಮ್ಮು-ಕತ್ರಾ (78 ಕೀ.ಮೀ.) ರೈಲು ಮಾರ್ಗದಲ್ಲೂ ಜೈವಿಕ ಶೌಚಾಲವನ್ನು ಆಳವಡಿಸಲಾಗುವುದು.

ಈ ಎಲ್ಲ ಯೋಜನೆ ಯಶಸ್ವಿಗೊಳ್ಳಲು ಪ್ರಯಾಣಿಕರ ಬೆಂಬಲ ಅತ್ಯಗತ್ಯ. ಅಲ್ಲದೆ ಶೌಚಾಲಯ ಬಳಕೆ ಮಾಡುವಾಗ ಬಾಟಲಿ, ತಿಂಡಿ, ತಿನಿಸು, ನ್ಯಾಪ್ ಕಿನ್, ಗುಟ್ಕಾ ಪಾಕೆಟ್, ಪ್ಲಾಸ್ಟಿಕ್ ಗಳನ್ನು ಶೌಚಾಲಯಕ್ಕೆ ಎಸೆಯದಂತೆ ಕೋರಲಾಗಿದೆ.


Click it and Unblock the Notifications








