ಭಾರತದ ಅತಿ ಉದ್ದದ ಸುರಂಗ ಮಾರ್ಗ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ
ಭಾರತದ ಅತಿ ಉದ್ದದ ‘ಚೆನಾನಿ – ನಶ್ರೀ ಸುರಂಗ’ವನ್ನು ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸರಿ ಸುಮಾರು 9 ಕಿಲೋ ಮೀಟರ್ ಉದ್ದ ಇರುವ ಚೆನಾನಿ - ನಶ್ರೀ ಸುರಂಗ ಸುರಂಗ ಮಾರ್ಗವನ್ನು ಲೋಪಾರ್ಪಣೆಗೊಳಿಸಿದರು.

ಈ ಸುರಂಗ ಮಾರ್ಗವು ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸಲಿದ್ದು, ಚೆನಾನಿ ಮತ್ತು ನಶ್ರೀ ಎಂಬ ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯನ್ನು 2 ಗಂಟೆಗಳವರೆಗೆ ಉಳಿಸಲಿದೆ.

ಚೆನಾನಿ ಮತ್ತು ನಶ್ರೀ ಮಾರ್ಗದ ನಡುವೆ ನಿರ್ಮಾಣವಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಸುರಂಗ ಮಾರ್ಗವು ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.

ಕಳೆದ ಸೋಮವಾರ ಉದ್ಘಾಟನೆಗೊಂಡ ರಾಷ್ಟ್ರೀಯ ಹೆದ್ದಾರಿ -44ರಲ್ಲಿರುವ ಈ ಸುರಂಗ ಮಾರ್ಗವು, ಜಮ್ಮು ಕಾಶ್ಮೀರ ರಾಜ್ಯದ ಆರ್ಥಿಕ ಚಟುವಟಿಕೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

ಚೀನಾ ದೇಶದಲ್ಲಿ ಇರುವ 20 ಕಿ.ಮೀ. ಉದ್ದದ 'ವೂಷಾವೋಲಿಂಗ್' ನಂತರದ ಸ್ಥಾನದಲ್ಲಿ ಇರುವ ಈ ಚೆನಾನಿ-ನಶ್ರೀ ಸುರಂಗವು ಏಷ್ಯಾದ ಎರಡನೇ ಉದ್ದದ ರಸ್ತೆ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಸ್ಟ್ರೀಯಾದ ಸುರಂಗ ನಿರ್ಮಾಣದ ಪದ್ಧತಿ ಮತ್ತು ದೇಶದಲ್ಲಿಯೇ ಪ್ರಥಮ ಬಾರಿಗೆ ದೆಹಲಿ ಮೆಟ್ರೊ ನಿರ್ಮಾಣದಲ್ಲಿ ಬಳಸಲಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಸುರಂಗ ಮಾರ್ಗ ಪಡೆದುಕೊಂಡಿದೆ.

ಎತ್ತರ ಶ್ರೇಣಿಯಲ್ಲಿ ಸಾಗಬೇಕಿದ್ದ ಮಾರ್ಗದ ದೂರವನ್ನು 31 ಕಿಲೋ ಮೀಟರ್ ಕಡಿಮೆ ಮಾಡುವ ಮೂಲಕ ಪ್ರತಿ ವರ್ಷ ಸರಿ ಸುಮಾರು ರೂ.100 ಕೋಟಿ ಮೊಲ್ಯದ ಇಂಧನದ ಉಳಿತಾಯ ಮಾಡಬಹುದು ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಈ ಬಹು ಕೋಟಿ ವೆಚ್ಚದ ಅತ್ಯಾಧುನಿಕ ಸುರಂಗ ಮಾರ್ಗ, ವಾಣಿಜ್ಯ ಉದ್ದೇಶದ ಜೊತೆ ಟ್ರಾಫಿಕ್ ಸಮಸ್ಯೆ ತಗ್ಗಿಸುವ ಉದ್ದೇಶ ಹೊಂದಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ಕೆಲವು ದಿನಗಳವರೆಗೂ ಯಾವುದೇ ರೀತಿಯ ಸಂಚಾರಿ ಶುಲ್ಕ ವಿಧಿಸದಿರಲು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.

ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ನಾಶ ಮತ್ತು ಮರಗಳಿಗೆ ಕೊಡಲಿ ಇಡುವುದನ್ನು ತಪ್ಪಿಸಿರುವ ಈ ಸುರಂಗವು, ಪರಿಸರಸ್ನೇಹಿ ಎಂಬ ಬಿರುದನ್ನು ಪಡೆದುಕೊಂಡಿದೆ.

ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸುರಂಗ ಮಾರ್ಗದ ಒಳಗಿನ ಕೆಲವು ಸ್ಥಳಗಳಲ್ಲಿ ಸುರಕ್ಷಾ ವಿಧಾನಗಳನ್ನು ಅಳವಡಿಸಲಾಗಿದ್ದು, ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಜಮ್ಮು ಮತ್ತು ಉಧಾಮಂಪುರ್ನಿಂದ ರಾಮ್ಬನ್, ಬನಿಹಾಲ್ ಮತ್ತು ಶ್ರೀನಗರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಸುರಕ್ಷಿತಯನ್ನು ಈ ಸುರಂಗಮಾರ್ಗ ಒದಗಿಸಿದೆ.

ಸಂತಸದ ವಿಚಾರವೇನೆಂದರೆ, ಎಲ್ಲ ಋತುಮಾನಗಳಲ್ಲೂ ಸಂಚಾರಕ್ಕೆ ಲಭ್ಯವಾಗಲಿರುವ ಈ ಸುರಂಗ ಮಾರ್ಗದಿಂದಾಗಿ ಸ್ಥಳೀಯರು ಯಾವುದೇ ತೊಂದರೆಗಳಿಲ್ಲದೆ ಸೇಬು ಹಣ್ಣಿನ ಸಾಗಾಟ ಮತ್ತು ಖರೀದಿ ನೆಡೆಸಬಹುದು.

ಭಾರತದ ಹೆಮ್ಮೆಯ ಪ್ರತೀಕವಾದ ಈ ಸುರಂಗಮಾರ್ಗವನ್ನು ಇಂದು ನಮ್ಮ ದೇಶದ ಪ್ರಧಾನಿ ಉದ್ಘಾಟನೆ ಮಾಡಿರುವುದು ನಮ್ಮೆಲರಿಗೂ ಖುಷಿ ನೀಡಿದ್ದು, ಸರ್ಕಾರ ಮತ್ತಷ್ಟು ಒಳ್ಳೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ.


Click it and Unblock the Notifications