ರ್ಯಾಶ್ ಡ್ರೈವಿಂಗ್ ಮಾಡಿದ ಡ್ರೈವರ್ಗಳಿಗೆ ಬಿತ್ತು ವಿಭಿನ್ನ ಶಿಕ್ಷೆ..!
ಭಾರತದ ಬಸ್ ಡ್ರೈವರ್ಗಳ ರ್ಯಾಶ್ ಡ್ರೈವಿಂಗ್ಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್ನಲ್ಲಿ ಹಲವಾರು ವೀಡಿಯೊಗಳಿವೆ. ರ್ಯಾಶ್ ಡ್ರೈವಿಂಗ್ ಮಾಡುವ ಡ್ರೈವರ್ಗಳ ಮೇಲೆ ಕೇಸ್ ದಾಖಲಿಸಲಾಗುತ್ತದೆ.

ಕೇಸ್ ದಾಖಲಾಗುತ್ತದೆಯೇ ಹೊರತು ಸಂಬಂಧಪಟ್ಟ ಅಧಿಕಾರಿಗಳು ಬೇರೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಡ್ರೈವರ್ಗಳ ರ್ಯಾಶ್ ಡ್ರೈವಿಂಗ್ನಿಂದ ರೋಸಿ ಹೋಗಿದ್ದ ಮಧ್ಯ ಪ್ರದೇಶದ ರಾವುನಲ್ಲಿರುವ ಜನ ಕಾನೂನನ್ನು ತಮ್ಮ ಕೈಗೆತ್ತಿಕೊಂಡಿದ್ದಾರೆ.

ಈ ಮೂಲಕ ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದ ಡ್ರೈವರ್ಗೆ ಸರಿಯಾದ ಪಾಠ ಕಲಿಸಿ, ಇನ್ನು ಮುಂದೆ ಬೇರೆಯವರು ಈ ರೀತಿ ಸಾರ್ವಜನಿಕ ರಸ್ತೆಗಳಲ್ಲಿ ಮಾಡದಂತೆ ಮಾಡಿದ್ದಾರೆ. ಈ ಘಟನೆಯು ರಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದೋರ್ ಹಾಗೂ ಮೌ ನಗರಗಳ ಮಧ್ಯೆ ಚಲಿಸುವ ಇಂಟರ್ಸಿಟಿ ಬಸ್ಸುಗಳು ರಾವು ನಗರದ ರಸ್ತೆಗಳ ಮೂಲಕ ಸಾಗುತ್ತವೆ. ಹೆಚ್ಚಿನ ಟ್ರಾಫಿಕ್ ಇದ್ದರೂ ಸಹ ಈ ಬಸ್ಸುಗಳ ಚಾಲಕರು ರ್ಯಾಶ್ ಡ್ರೈವಿಂಗ್ ಮಾಡುತ್ತಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಭಯದಲ್ಲಿಯೇ ಓಡಾಡುವಂತಾಗಿದೆ.

ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದ 6ಕ್ಕೂ ಹೆಚ್ಚಿನ ಡ್ರೈವರ್ಗಳು ಅಲ್ಲಿನ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದರು. ಹೀಗೆ ಸಿಕ್ಕಿಬಿದ್ದ ಡ್ರೈವರ್ಗಳಿಗೆ ಕಠಿಣ ಶಿಕ್ಷೆ ನೀಡುವ ಬದಲು, ಅಲ್ಲಿನ ಜನ ಆ ಡ್ರೈವರ್ಗಳು ಡ್ರೈವ್ ಮಾಡುತ್ತಿದ್ದ ಮೇಲೆಯೇ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.

ಡ್ರೈವರ್ಗಳು ಚಾಲನೆ ಮಾಡುತ್ತಿದ್ದ ಬಸ್ಸಿನ ಟಾಪ್ ಮೇಲೆ ಅವರನ್ನು ಹತ್ತಿಸಿರುವ ಸಾರ್ವಜನಿಕರು, ಕಿವಿ ಹಿಡಿದುಕೊಂಡು 15 ಬಸ್ಕಿ ಹೊಡೆಸಿದ್ದಾರೆ. ಅಲ್ಲಿನ ಸ್ಥಳೀಯರ ಪ್ರಕಾರ, ಡ್ರೈವರ್ಗಳು ಹೀಗೆ ರ್ಯಾಶ್ ಡ್ರೈವ್ ಮಾಡುವುದೇ ಆ ರಸ್ತೆಯಲ್ಲಿ ನಡೆಯುವ ಅಪಘಾತಗಳಿಗೆ ಕಾರಣವಾಗಿದೆ.

ಈ ಹಿಂದೆ ಅಪಘಾತಗಳಿಂದಾಗಿ ಜನರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದವು. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಬಸ್ಸುಗಳನ್ನು ನಿಲ್ಲಿಸಿ ಜನರನ್ನು ಹತ್ತಿಸುವ, ಇಳಿಸುವ ಡ್ರೈವರ್ಗಳು ನಂತರ ಬೇರೆ ಬಸ್ಸುಗಳನ್ನು ಹಿಂದಿಕ್ಕಿ ತಾವು ತಲುಪಬೇಕಿರುವ ಸ್ಥಳವನ್ನು ತಲುಪಲು ಬಸ್ಸುಗಳನ್ನು ವೇಗವಾಗಿ ಚಲಾಯಿಸುತ್ತಾರೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಇದರಿಂದಾಗಿ ಜನರ ಜೀವಕ್ಕೂ ಕುತ್ತು ತರುತ್ತಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಸಾರಿಗೆ ಇಲಾಖೆ ಹಾಗೂ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದರು. ಎರಡೂ ಇಲಾಖೆಯವರು ಆಶ್ವಾಸನೆಗಳನ್ನು ನೀಡಿದರೆ ಹೊರತು ಬೇರೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.
MOST READ: ವಾಹನ ಡೀಲರ್ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಇದರಿಂದಾಗಿ ರೊಚ್ಚಿಗೆದ್ದ ಸಾರ್ವಜನಿಕರು ತಾವೇ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಡ್ರೈವರ್ಗಳನ್ನು ಹಿಡಿದ ಸಾರ್ವಜನಿಕರು ಹೇಳುವಂತೆ ಈ ರಸ್ತೆಯು ಚಿಕ್ಕದಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುತ್ತಾರೆ. ಬಸ್ ಡ್ರೈವರ್ಗಳ ಹುಚ್ಚಾಟದಿಂದಾಗಿ ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಪ್ರಾಣಕ್ಕೆ ಕಂಟಕವಾಗುತ್ತಿದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ
ಈ ಹಿಂದೆಯೂ ಸಾರ್ವಜನಿಕರು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ತಪ್ಪು ಮಾಡಿದ್ದವರನ್ನು ಶಿಕ್ಷಿಸಿದ್ದರು. ಆದರೆ ಈಗ ವಿಭಿನ್ನವಾಗಿ ಶಿಕ್ಷೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಇಂದೋರ್ನ ಆರ್ಟಿಒ ಅಧಿಕಾರಿ ಜಿತೆಂದ್ರ ಸಿಂಗ್ ರಘುವಂಶಿರವರು ಸ್ಥಳೀಯರು ತಮ್ಮ ಸಮಸ್ಯೆಯ ಬಗ್ಗೆ ದೂರು ನೀಡಿದ್ದು, ಈ ಬಗ್ಗೆ ಸಂಬಂಧ ಪಟ್ಟ ಬಸ್ ಮಾಲೀಕರೊಂದಿಗೆ ಮಾತನಾಡಲಾಗುವುದು ಎಂದು ಹೇಳಿದರು.

ರಾವು ಪೊಲೀಸ್ ಠಾಣೆಯ ಅಧಿಕಾರಿ ದಿನೇಶ್ ವರ್ಮಾರವರು ಮಾತನಾಡಿ, ಅತಿ ವೇಗವಾಗಿ ಹಾಗೂ ರ್ಯಾಶ್ ಡ್ರೈವಿಂಗ್ ಮಾಡುವ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ಮತ್ತೊಮ್ಮೆ ಇದೇ ಪರಿಸ್ಥಿತಿ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.


Click it and Unblock the Notifications