Namo Bharat: ಕರ್ನಾಟಕದಲ್ಲಿ ಶೀಘ್ರ ನಮೋ ಭಾರತ್ ರೈಲು ಸಂಚಾರ.. ಎಸಿ ಕೋಚ್ನಲ್ಲಿ ಕೆಲಸಕ್ಕೆ ಹೋಗಬಹುದು!
ಎರಡು ಹತ್ತಿರದ ನಗರಗಳ ನಡುವೆ ದಿನನಿತ್ಯ ಕೆಲಸಕ್ಕೆ ಹೋಗುವವರು ಹಾಗೂ ಉನ್ನತ ಶಿಕ್ಷಣಕಾಗಿ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅತಿ ಶೀಘ್ರದಲ್ಲಿ ಕರ್ನಾಟಕವು ಸೇರಿದಂತೆ ದೇಶಾದ್ಯಂತ 50 ನಮೋ ಭಾರತ್ (Namo Bharat) ರೈಲುಗಳು ಕಾರ್ಯಾಚರಣೆ ನಡೆಸಲಿವೆ. ನೂತನ ರೈಲುಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ಪ್ರಯಾಣಿಕರು ಕಡಿಮೆ ದರದಲ್ಲಿ ಸುರಕ್ಷಿತವಾಗಿ ನಿರ್ದಿಷ್ಟ ಗಮ್ಯ ಸ್ಥಳವನ್ನು ಸುಲಭವಾಗಿ ತಲುಪಲು ಕೂಡ ಸಾದ್ಯವಾಗಲಿದೆ.
ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, 'ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ದೇಶದ ಪ್ರಮುಖ ನಗರಗಳ ನಡುವೆ 50 ನಮೋ ಭಾರತ್ ರೈಲುಗಳು ಸಂಚಾರ ಸೌಲಭ್ಯ ಕಲ್ಪಿಸಿದ್ದಾರೆ. ಇದರಲ್ಲಿ ನಮ್ಮ ಕರ್ನಾಟಕಕ್ಕೂ 2 ರೈಲುಗಳ ಕೊಡುಗೆ ನೀಡಿದ್ದಾರೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಹುಬ್ಬಳ್ಳಿ-ದಾವಣಗೆರೆ ಮತ್ತು ಬೆಂಗಳೂರು-ಮೈಸೂರು ನಡುವೆ 2 ನಮೋ ಭಾರತ್ ರೈಲುಗಳು ಪ್ರಸಕ್ತ ವರ್ಷದಿಂದಲೇ ಸಂಚಾರ ನಡೆಸಲಿವೆ. ಕರ್ನಾಟಕಕ್ಕೆ ಈ ರೈಲು ಸೌಲಭ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ನೂತನ ನಮೋ ಭಾರತ್ ರೈಲನ್ನು ಆರಂಭದಲ್ಲಿ ವಂದೇ ಭಾರತ್ ಮೆಟ್ರೋ (Vande Bharat Metro) ಎಂದು ಕರೆಯಲಾಗುತ್ತಿತ್ತು. ಆ ನಂತರ, ಈ ಹೆಸರನ್ನು ನಾಮಕರಣ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಮೊದಲ ನಮೋ ಭಾರತ್ ರೈಲು ಗುಜರಾತ್ನ ಭುಜ್ ಹಾಗೂ ಅಹಮದಾಬಾದ್ ಮಧ್ಯೆ ಓಡಾಟ ನಡೆಸುತ್ತಿದ್ದು, 360 ಕಿ.ಮೀ ದೂರವನ್ನು ಸರಿ ಸುಮಾರು 6 ಗಂಟೆಗಳಲ್ಲಿ ಕ್ರಮಿಸುತ್ತಿದೆ.

ನಮೋ ಭಾರತ್ ರೈಲಿನ ವಿಶೇಷತೆಗಳೇನು: ಈ ಹೊಸ ರೈಲು 12 - ಹವಾನಿಯಂತ್ರಿತ (ಎಸಿ) ಕೋಚ್ಗಳನ್ನು ಹೊಂದಿದೆ. ಇದರಲ್ಲಿ 1,150 ಜನರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ನಡೆಸಬಹುದು. ಜೊತೆಗೆ 2,058 ಜನರು ನಿಂತುಕೊಂಡು ಓಡಾಟ ಮಾಡಬಹುದು. ಸುರಕ್ಷತೆಯ ದೃಷ್ಟಿಯಿಂದ ಕವಾಚ್ (KAVACH) ವ್ಯವಸ್ಥೆಯನ್ನು ಪಡೆದಿದೆ.
ಈ ನಮೋ ಭಾರತ್ ರೈಲಿನಲ್ಲಿ ಶುಚಿತ್ವಕ್ಕೂ ಒಟ್ಟು ನೀಡಲಾಗಿದ್ದು, ಅತ್ಯುತ್ತಮವಾದ ಟಾಯ್ಲೆಟ್ಗಳನ್ನು ಒಳಗೊಂಡಿದೆ. ಇದರೊಟ್ಟಿಗೆ ಆಟೋಮೆಟಿಕ್ ಸ್ಲೈಡಿಂಗ್ ಡೋರ್ಗಳು, ಎಲ್ಇಡಿ ಲೈಟಿಂಗ್, ಸಿಸಿ ಟಿವಿ, ಫೋನ್ ಚಾರ್ಜಿಂಗ್ ಫ್ಯಾಸಿಲಿಟೀಸ್, ಆಟೋಮೆಟಿಕ್ ಸ್ಮೋಕ್/ ಫೈರ್ ಡಿಟೆಕ್ಷನ್ ಸಿಸ್ಟಮ್ ಮತ್ತು ಪನೊರೊಮಿಕ್ ವಿಂಡೋಗಳು ಸೇರಿದಂತೆ ವಿವಿಧ ಸೌಕರ್ಯಗಳನ್ನು ತನ್ನದಾಗಿಸಿಕೊಂಡಿದೆ.
ಇನ್ನು, ನಮೋ ಭಾರತ್ (Namo Bharat) ರೈಲು ಸಾಕಷ್ಟು ಅತ್ಯಾಧುನಿಕವಾಗಿದೆ. ಜೊತೆಗೆ ಇದರ ಟಿಕೆಟ್ ದರಗಳು ಕೂಡ ಕೈಗೆಟಕುವಂತಿರಲಿದ್ದು, ಪ್ರಯಾಣಿಕರು ಸುಲಭವಾಗಿ ಸಂಚಾರ ನಡೆಯಬಹುದು. ವಿಶೇಷವಾಗಿ ಕರ್ನಾಟಕದ ಬೆಂಗಳೂರು-ಮೈಸೂರು ಹಾಗೂ ಹುಬ್ಬಳ್ಳಿ-ದಾವಣಗೆರೆಗಳ ನಡುವೆ ಕೆಲಸಕ್ಕಾಗಿ ದಿನನಿತ್ಯ ಸಾವಿರಾರು ಜನರು ಓಡಾಟ ನಡೆಸುತ್ತಾರೆ. ಅವರಿಗೆ ಹೆಚ್ಚಿನ ವರದಾನವಾಗಲಿದೆ ಎಂದು ಹೇಳಬಹುದು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications