ಲಾಕ್ ಡೌನ್ ಉಲ್ಲಂಘಿಸಿದ ಮುಖಂಡನ ಮೇಲೆ ಬಿತ್ತು ಎಫ್ಐಆರ್
ಮಾರಣಾಂತಿಕ ವೈರಸ್ ಕರೋನಾ ವೈರಸ್ ನಿಂದ ಜನರನ್ನು ರಕ್ಷಿಸಲು ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಲಾಕ್ ಡೌನ್ ಏಪ್ರಿಲ್ 14ರವರೆಗೆ ಜಾರಿಯಲ್ಲಿರಲಿದೆ. ಸೆಕ್ಷನ್ 144 ಅನ್ವಯ ಸಾರ್ವಜನಿಕರು ಹೊರಗೆ ಬರದಂತೆ ಆದೇಶಿಸಲಾಗಿದೆ.

ಅವಶ್ಯಕತೆಯಿಲ್ಲದೆ ಹೊರಬರುವ ಜನರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಪೊಲೀಸರು ಕರ್ತವ್ಯಕ್ಕೆ ತೆರಳುತ್ತಿದ್ದ ವೈದ್ಯರ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ, ಕರೋನಾ ವೈರಸ್ ನಿಂದ ಸಾಯುವುದಕ್ಕಿಂತ ಹೆಚ್ಚು ಭಯ ಪೊಲೀಸರ ಏಟಿನ ಭಯ ಜನರನ್ನು ಕಾಡುತ್ತಿದೆ.

ಕೆಲ ರಾಜಕಾರಣಿಗಳು ಈ ಲಾಕ್ ಡೌನ್ ಅನ್ನು ಕೇರ್ ಮಾಡುತ್ತಿಲ್ಲ. ಕರೋನಾ ವೈರಸ್ ನ ಭಯವಿಲ್ಲದೆ, ಮಾಸ್ಕ್ ಧರಿಸದೇ, ಹೆಲ್ಮೆಟ್ ಇಲ್ಲದೆ ರಾಜಕಾರಣಿಯೊಬ್ಬರು ಸ್ಕೂಟರ್ ಚಾಲನೆ ಮಾಡಿಕೊಂಡು ಓಡಾಡಿದ ಘಟನೆ ನಡೆದಿದೆ.

ಈ ಘಟನೆ ಕೇರಳದ ತಿರುವನಂತಪುರಂನ ವರ್ಕಲಾದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯ ವೀಡಿಯೋವನ್ನು ಜನಪ್ರಿಯ ಮಲಯಾಳಂ ಸುದ್ದಿ ಸಂಸ್ಥೆಯಾದ ಮಾತೃಭೂಮಿ ತನ್ನಯೂಟ್ಯೂಬ್ ಪೇಜ್ ನಲ್ಲಿ ಪೋಸ್ಟ್ ಮಾಡಿದೆ. ಈ ವೀಡಿಯೊದಲ್ಲಿ, ರಾಜಕೀಯ ಪಕ್ಷದ ನಾಯಕರೊಬ್ಬರು ಸೆಲ್ಫೋನ್ನಲ್ಲಿ ಮಾತನಾಡುತ್ತಾ ಸ್ಕೂಟರ್ನಲ್ಲಿ ಹೋಗುತ್ತಿದ್ದಾರೆ.ಈ ವೇಳೆ ಹೆಲ್ಮೆಟ್ ಆಗಲಿ ಅಥವಾ ಮಾಸ್ಕ್ ಆಗಲಿ ಧರಿಸಿಲ್ಲ.

ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಕರೋನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಈ ಕಾರಣಕ್ಕೆ ಜನರು ಹೊರಗೆ ಬರದಂತೆ ಅಲ್ಲಿನ ರಾಜ್ಯ ಸರ್ಕಾರವು ಸೂಚಿಸಿದೆ. ಆದರೆ ಹೆಚ್ಚಿನ ಜನರು ಹೊರಗೆ ಓಡಾಡುತ್ತಿದ್ದಾರೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ.

ಈ ಕಾರಣಕ್ಕೆ ಆಯಾ ರಾಜ್ಯಗಳ ಪೊಲೀಸರು ವಾಹನದ ಮೇಲೆ ಕಾಣುವ ಎಲ್ಲಾ ವಯಸ್ಸಿನವರಿಗೆ ಲಾಠಿ ರುಚಿಯನ್ನು ತೋರಿಸುತ್ತಿದ್ದಾರೆ. ರಸ್ತೆಗಳಲ್ಲಿ ನಡೆದಾಡುವವರ ಮೇಲೆಯೂ ಲಾಠಿ ಬೀಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ, ಜನಸಾಮಾನ್ಯರಿಗೆ ಮಾದರಿಯಾಗಬೇಕಾದ ರಾಜಕೀಯ ಪಕ್ಷದ ಮುಖಂಡರು ಯಾವುದೇ ಸುರಕ್ಷಾ ಕ್ರಮಗಳಲಿಲ್ಲದೇ ಸೆಲ್ಫೋನ್ನಲ್ಲಿ ಮಾತನಾಡುತ್ತಾ ಸ್ಕೂಟರ್ ನಲ್ಲಿ ಓಡಾಡಿದ್ದು ಕೇರಳದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ.

ಈತನನ್ನು ತಡೆದ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಹೊರಗೆ ಬಂದಿರುವ ಕಾರಣವನ್ನು ಪೊಲೀಸರು ಕೇಳಿದಾಗ, ಅವರು ಸೂಕ್ತ ಕಾರಣವನ್ನು ನೀಡಿಲ್ಲ ಎಂದು ಮಾತೃಭೂಮಿ ವರದಿ ಮಾಡಿದೆ. ಈ ಕಾರಣಕ್ಕೆ ಈ ಮುಖಂಡನ ಮೇಲೆ ಸೆಕ್ಷನ್ 144 ಉಲ್ಲಂಘನೆ ಸೇರಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ರೀತಿಯ ಘಟನೆಯೊಂದು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿತ್ತು. ಈ ಘಟನೆಯಲ್ಲಿ ಗುಬ್ಬಿ ಕ್ಷೇತ್ರದ ಶಾಸಕರಾದ ಎಸ್.ಆರ್. ಶ್ರೀನಿವಾಸ್ ರವರು ಲಾಕ್ ಡೌನ್ ವೇಳೆಯಲ್ಲಿ ತಮ್ಮ ಮೊಮ್ಮಗನೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಆಟವಾಡುತ್ತಿದ್ದರು. ದೇಶದ ಜನರೆಲ್ಲಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವಾಗ ಜನರಿಗೆ ತಿಳುವಳಿಕೆ ನೀಡಬೇಕಾದ ಜನಪ್ರತಿನಿಧಿಯೇ
ಬೇಜವಾಬ್ದಾರಿಯಿಂದ ವರ್ತಿಸಿದ್ದರು.
ಈ ಘಟನೆ ಮಾಸುವ ಮುನ್ನವೇ ಕೇರಳದಲ್ಲಿ ಈ ಘಟನೆ ನಡೆದಿದೆ. ಭಾರತದಲ್ಲಿ ರಾಜಕಾರಣಿಗಳು ಬೇಜವಾಬ್ದಾರಿಯಿಂದ ವರ್ತಿಸುವುದು ಸಾಮಾನ್ಯವಾಗುತ್ತಿದೆ. ಆದರೆ ಇಂತಹ ಮಹತ್ವದ ಸಮಯದಲ್ಲಿ ಜನರಿಗೆ ತಿಳುವಳಿಕೆ ನೀಡಬೇಕಾದವರೇ ಈ ರೀತಿ ವರ್ತಿಸುತ್ತಿರುವುದು ನಿಜಕ್ಕೂ ದುಃಖಕರವಾಗಿದೆ.

ಕರೋನಾ ವೈರಸ್ ವೃದ್ಧರು ಹಾಗೂ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಈ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನೆಯಿಂದ ಹೊರ ಬರದಂತೆ ಜನರಿಗೆ ಮನವಿ ಮಾಡುತ್ತಿವೆ. ಇದನ್ನು ಅರ್ಥಮಾಡಿಕೊಳ್ಳಬೇಕಾದ ರಾಜಕಾರಣಿಗಳು ಈ ರೀತಿ ವರ್ತಿಸುವುದು ಸರಿಯಲ್ಲ.


Click it and Unblock the Notifications