ಪ್ರವಾಹ ಪೀಡಿತ ಕೇರಳಕ್ಕೆ ಸಹಾಯ ಹಸ್ತ ಚಾಚಿದ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳು
ಪ್ರಕೃತಿಯ ವಿಕೋಪಕ್ಕೆ ಸಿಕ್ಕ ನರಳಿದ ಕೇರಳ ಇದೀಗ ಅಕ್ಷರಶಃ ಕಂಗಾಲಾಗಿದೆ. ಭೀಕರ ಮಳೆ, ಪ್ರವಾಹಕ್ಕೆ ದೇವರನಾಡು ಕೇರಳ ನಲುಗಿ ಹೋಗಿದ್ದು, ಎಷ್ಟೋ ಜನರು ಪ್ರಾಣ, ಎಷ್ಟೋ ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಹೀಗಿರುವಾಗ ದೇಶದ ಜನಪ್ರಿಯ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಕೇರಳ ಜನತೆಯ ನೆರವಿಗೆ ಬಂದಿದ್ದು, ಪುನರ್ ವಸತಿಗಾಗಿ ಹಣಕಾಸಿನ ನೆರವು ನೀಡುತ್ತಿವೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕೋರಿಕೆ ಹಿನ್ನೆಲೆಯಲ್ಲಿ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಸಂಘ ಸಂಸ್ಥೆಗಳು ಸೇರಿದಂತೆ ಜನಸಾಮಾನ್ಯರು ಸಹ ತಮ್ಮ ಕಷ್ಟದ ಪರಿಸ್ಥಿತಿಯಲ್ಲೂ ತಮಗಾದಷ್ಟು ನೆರವು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದರ ಮಧ್ಯೆ ಆಟೋ ಉತ್ಪಾದನಾ ಸಂಸ್ಥೆಗಳು ಸಹ ದೊಡ್ಡ ಮೊತ್ತದ ಪರಿಹಾರವನ್ನು ನೀಡಲು ನಿರ್ಧರಿಸಿದ್ದು, ಈಗಾಗಲೇ ಕೆಲವು ಸಂಸ್ಥೆಗಳು ಪರಿಹಾರದ ಮೊತ್ತ ಚೆಕ್ ಅನ್ನು ಸಂತ್ರಸ್ತರ ನಿಧಿಗೆ ದೇಣಿಗೆ ನೀಡಿವೆ.

ಇವುಗಳಲ್ಲಿ ಮುಖ್ಯವಾಗಿ ಹ್ಯುಂಡೈ, ಮರ್ಸಿಡಿಸ್ ಬೆಂಝ್, ಟಿವಿಎಸ್, ಬಜಾಜ್ ಆಟೋ, ಟಾಟಾ ಮೋಟಾರ್ಸ್, ಫೋಕ್ಸ್ವ್ಯಾಗನ್, ಬಿಎಂಡಬ್ಲ್ಯು ಸಂಸ್ಥೆಗಳು ಕೇರಳ ಜನತೆಯ ನೆರವಿನ ಹಸ್ತ ಚಾಚಿದ್ದು, ತಮ್ಮ ಕೈಲಾದಷ್ಟು ಹಣಕಾಸಿನ ನೆರವು ನೀಡಿದ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧನ್ಯವಾದ ತಿಳಿಸಿದ್ದಾರೆ.

ಮಾರುತಿ ಸುಜುಕಿ ಸಂಸ್ಥೆಯು ಆಟೋ ಉತ್ಪಾದನಾ ಸಂಸ್ಥೆಗಳ ಪೈಕಿ ಅತಿ ಹೆಚ್ಚು ನೆರವು ನೀಡಿದ್ದು, ನಿರಾಶ್ರಿತರಿಗೆ ಪುನರ್ ವಸತಿ ಕಲ್ಪಿಸಲು ಬರೋಬ್ಬರಿ ರೂ. 3.5 ಕೋಟಿ ನೆರವು ನೀಡಿರುವುದಕ್ಕೆ ಕೇರಳದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾರುತಿ ಸುಜುಕಿ ಸಂಸ್ಥೆಯ ಪರವಾಗಿ ರೂ. 2 ಕೋಟಿ ಮತ್ತು ಮಾರುತಿ ಸುಜುಕಿ ಉದ್ಯೋಗಿಗಳ ಪರವಾಗಿ ರೂ. 1.50 ಕೋಟಿ ನೆರವು ನೀಡಿದ್ದು, ಪ್ರಧಾನ ಮಂತ್ರಿಯವರ ಪ್ರಕೃತಿ ವಿಕೋಪ ನಿರ್ವಹಣಾ ನಿಧಿಗೆ ಹಣ ವರ್ಗಾವಣೆ ಮಾಡಲಾಗಿದೆ.

ಇದಾಗ ಬಳಿಕ ಬಜಾಜ್ ಆಟೋ ಸಂಸ್ಥೆಯಿಂದ ರೂ. 2 ಕೋಟಿ, ಹ್ಯುಂಡೈ ಇಂಡಿಯಾ ಸಂಸ್ಥೆಯಿಂದ ರೂ. 1 ಕೋಟಿ ಮತ್ತು ಟಿವಿಎಸ್ ಸಂಸ್ಥೆಯ ಕಡೆಯಿಂದ ರೂ. 1 ಕೋಟಿ ಪರಿಹಾರ ಹರಿದು ಬಂದಿದ್ದು, ಇನ್ನುಳಿದಂತೆ ಮರ್ಸಿಡಿಸ್ ಬೆಂಝ್ ಸಂಸ್ಥೆಯು ರೂ. 30 ಲಕ್ಷ ನೆರವು ನೀಡಿರುವುದು ನಿರಾಶ್ರಿತರ ಕಣ್ಣೀರು ಒರೆಸುವುದಕ್ಕೆ ಸಹಕಾರಿಯಾಗಲಿದೆ.

ಇನ್ನು ಕೆಲವು ಆಟೋ ಉತ್ಪಾದನಾ ಸಂಸ್ಥೆಗಳು ಹಣಕಾಸಿನ ನೆರವಿನ ಬದಲಾಗಿ ಕೇರಳದಲ್ಲಿ ತಮ್ಮ ಸಂಸ್ಥೆಯ ಕಾರುಗಳಿಗೆ ಉಚಿತವಾಗಿ ತಾಂತ್ರಿಕ ಸೇವೆ ನೀಡಲು ನಿರ್ಧರಿಸಿದ್ದು, ಭೀಕರ ಪ್ರವಾಹಕ್ಕೆ ಸಿಲುಕಿ ಸಾವಿರಾರು ವಾಹನಗಳು ನಿಷ್ಕೀಯಗೊಂಡಿವೆ.

ಹೀಗಾಗಿ ತುರ್ತಾಗಿ ವಾಹನ ರಿಫೇರಿ ಕಾರ್ಯುವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಉಚಿತವಾಗಿ ತಾಂತ್ರಿಕ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿವೆ.

ಒಟ್ಟಿನಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿರುವ ಆಟೋ ಉತ್ಪಾದನಾ ಸಂಸ್ಥೆಗಳು ಪ್ರವಾಹದಲ್ಲಿ ಬಳಲಿದವರ ಕಣ್ಣೀರು ಒರೆಸಲು ನೆರವಾಗಿದ್ದು, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಆಟೋ ಉತ್ಪಾದನಾ ಸಂಸ್ಥೆಗಳು ಸಹ ನೆರವಿನ ವಿಚಾರದಲ್ಲಿ ತಮ್ಮ ಜವಾಬ್ದಾರಿ ತಿಳಿಯಬೇಕಾದ ಅವಶ್ಯಕತೆಯಿದೆ.


Click it and Unblock the Notifications