ಮೋದಿ ಭೇಟಿ ಎಫೆಕ್ಟ್: ಲಕ್ಷದ್ವೀಪದ ವಿಮಾನದಲ್ಲಿ ನೂಕು ನುಗ್ಗಲು! ಮಾರ್ಚ್ವರೆಗೆ ಟಿಕೆಟ್ ಸೋಲ್ಡ್ಔಟ್
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಫೋಟೊ ಹಂಚಿಕೊಂಡಾಗಿನಿಂದ ಎಲ್ಲಿ ಕೇಳಿದ್ರೂ ಲಕ್ಷದ್ವೀಪದ್ದೇ ಸುದ್ದಿ. ನಿಜ ಹೇಳಬೇಕಾದರೆ ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿಯಿಂದ ಒಂದು ಕಳೆ ಬಂದರೆ ಅಲ್ಲಿನ ಪ್ರವಾಸೋದ್ಯಮಕ್ಕೇ ಹೊಸ ಚೈತನ್ಯವೇ ಸಿಕ್ಕಿದೆ ಎನ್ನುವುದು ನಮ್ಮ ನಡುವೆ ಇರುವ ಹಲವರ ಅಭಿಪ್ರಾಯ.
ಈ ನಡುವೆ ಲಕ್ಷದ್ವೀಪವನ್ನು ಅಭಿವೃದ್ಧಿ ಪಡಿಸಬೇಕು, ಪ್ರವಾಸೋದ್ಯಮಕ್ಕೆ ಮುಕ್ತ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದು ಮಾತ್ರವಲ್ಲ, ಇಲ್ಲಿನ ಫೋಟೊಗಳನ್ನು ಹಂಚಿಕೊಂಡು ದ್ವೀಪದ ಸೊಬಗನ್ನು ವಿವರಿಸಿದ್ದರು. ಇದರಿಂದ ಹಲವರು ಲಕ್ಷದ್ವೀಪದ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಲಕ್ಷದ್ವೀಪಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಿದವರು ಫೋಟೊಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ, ಮಾತ್ರವಲ್ಲ ಲಕ್ಷದ್ವೀಪಕ್ಕೆ ತೆರಳುವಂತೆ ಮನವಿ ಮಾಡುತ್ತಿದ್ದಾರೆ.

ಇನ್ನು ಇಲ್ಲಿಗೆ ಪ್ರಯಾಣಿಸಲು ಎರಡು ಮಾರ್ಗಗಳಿವೆ. ಒಂದು ಜಲಮಾರ್ಗ ಇನ್ನೊಂದು ವಾಯು ಮಾರ್ಗ. ಪ್ರಧಾನಿ ಭೇಟಿಯ ನಂತರ ಲಕ್ಷದ್ವೀಪದ ಡಿಮಾಂಡ್ ಎಷ್ಟು ಜೋರಾಗಿದೆ ಎಂದರೆ, ಮುಂದಿನ ಮೂರು ತಿಂಗಳವರೆಗೆ ಲಕ್ಷದ್ವೀಪಕ್ಕೆ ಇರುವ ವಿಮಾನಗಳು ಸಂಪೂರ್ಣವಾಗಿ ಬುಕ್ ಆಗಿದೆ. ಹೌದು, ಮಾರ್ಚ್ ೨೦೨೪ ರವರೆಗೆ ಇರುವ ವಿಮಾನಗಳ ಟಿಕೆಟ್ ಫುಲ್ ಆಗಿದ್ದು, ವಾಯು ಮಾರ್ಗವಾಗಿ ಲಕ್ಷದ್ವೀಪಕ್ಕೆ ಭೇಟಿ ನೀಡಬೇಕು ಎಂದುಕೊಳ್ಳುವವರು ಮಾರ್ಚ್ ಮುಗಿಯುವ ವರೆಗೆ ಕಾಯಲೇ ಬೇಕು.
ಲಕ್ಷದ್ವೀಪ ಎನ್ನುವುದು ಸುಂದರ ಪ್ರಾಚೀನ ಕಡಲತೀರಗಳು, ಹವಳದ ಬಂಡೆಗಳು, ಅದ್ಭುತ ಪ್ರಾಕೃತಿಕ ಸೌಂದರ್ಯ ಹೊಂದಿರುವ ಜನನಿಬಿಡ ಪ್ರದೇಶ. ಮೊನ್ನೆ ಮೊನ್ನೆಯವರೆಗೂ ಇದು ಹೊರ ಜಗತ್ತಿಗೆ ಅಷ್ಟಾಗಿ ಪರಿಚಯವಿರಲಿಲ್ಲ. ಇನ್ನು ಇಲ್ಲಿ ಪ್ರವಾಸೋದ್ಯಮ ಚಾಲ್ತಿಯಲ್ಲಿದ್ದರೂ ಕೆಲವು ವಿಚಾರಗಳಿಂದ ನಿರ್ಬಂಧ ಹೇರಲಾಗಿದೆ. ಸುಪ್ರಿಂಕೋರ್ಟ್ ಲಕ್ಷದ್ವೀಪಕ್ಕೆ ಸಂಬಂಧಿಸಿ ಒಂದಿಷ್ಟು ನಿರ್ಬಂಧಗಳನ್ನು ವಿಧಿಸಿದೆ.

ಲಕ್ಷದ್ವೀಪದ ಪ್ರಾಕೃತಿಕ ಸೌಂದರ್ಯದ ಬಗ್ಗೆ ಹೇಳುವುದಾದರೆ ಇದು ಮಾಲ್ಡೀವ್ಸ್ನಷ್ಟೇ ಸುಂದರವಾಗಿದ್ದು, ಅದ್ಭುತ ತಿಳಿ ನೀಲಿ ಸಮುದ್ರದಿಂದ ಸುತ್ತುವರಿದಿದ್ದರೂ ಇಲ್ಲಿ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿ ಹೊಂದಿಲ್ಲ ಎಂಬುದು ಸತ್ಯ. ಸುಂದರ ಮಾಲ್ಡೀವ್ಸ್ನಂತಹ ಅಭಿವೃದ್ಧಿ ಹೊಂದಿದ ತಾಣದೆದುರು ಲಕ್ಷದ್ವೀಪ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಲಕ್ಷದ್ವೀಪ ಹೋರಾಡುತ್ತಿರುವುದು ನಿಜ.
ಲಕ್ಷದ್ವೀಪ ಮಂಗಳೂರಿನಿಂದ 356 ಕಿಮೀ ದೂರದಲ್ಲಿದೆ. ಕೊಚ್ಚಿಯಿಂದ 391 ಕಿಮೀ ದೂರದಲ್ಲಿದೆ. ಲಕ್ಷದ್ವೀಪಕ್ಕೆ ತರಕಾರಿ ಆಹಾರ ಸಾಮಾಗ್ರಿಯಿಂದ ಹಿಡಿದು ಕಟ್ಟಡ ಸಾಮಾಗ್ರಿವರೆಗೂ ಮಂಗಳೂರಿನಿಂದಲೇ ಸಾಗಾಟವಾಗುತ್ತದೆ. ಮಂಗಳೂರಿನಿಂದ ಪ್ರತಿದಿನ ಲಕ್ಷದ್ವೀಪಕ್ಕೆ ಐವತ್ತಕ್ಕೂ ಹೆಚ್ಚು ವೆಸೆಲ್ಗಳು ತೆರಳುತ್ತವೆ. ಲಕ್ಷದ್ವೀಪದಲ್ಲಿರುವ 36 ಐಲ್ಯಾಂಡ್ಗಳಲ್ಲಿ ಕೇವಲ ಆರು ದ್ವೀಪಗಳಲ್ಲಿ ಮಾತ್ರ ಜನವಸತಿ ಇದ್ದು, ಇನ್ನೂ ಮೂರು ದ್ವೀಪಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿದು ಬಂದಿದೆ.
ಲಕ್ಷದ್ವೀಪ ಅಭಿವೃದ್ಧಿ ಯಾದರೆ ಮಂಗಳೂರಿನ ಪ್ರವಾಸೋದ್ಯಮಕ್ಕೂ ಆನೆಬಲ ಬರಲಿದೆ. ಮಂಗಳೂರಿನ ಬಂದರು ಪ್ರದೇಶದಲ್ಲಿ ಲಕ್ಷದ್ವೀಪವನ್ನು ಸಂಪರ್ಕಿಸುವ ಜೆಟ್ಟಿಗಳು ನಿಲುಗಡೆಯಾಗುತ್ತವೆ. ಕೋವಿಡ್ ಬರುವ ಮುಂಚೆ ಲಕ್ಷದ್ವೀಪಕ್ಕೆ ಪ್ರವಾಸಿ ಹಡಗಿದ್ದು, ಆರು ಸಾವಿರಕ್ಕೆ ಊಟ ವಸತಿ ಸೇರಿದಂತೆ ಮೂರು ದಿನದ ಪ್ಯಾಕೇಜ್ ಇತ್ತು. ಆದರೆ ಕೋವಿಡ್ ಬಳಿಕ ಲಕ್ಷದ್ವೀಪದ ಪ್ರವಾಸಿ ಹಡಗು ಸಂಚಾರ ನಿಲುಗಡೆಯಾಗಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications