ಚಿತ್ರನಟಿ ಕಾರು ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ ಲಾರಿ ಡ್ರೈವರ್..!
ಭಾರತದಲ್ಲಿ ಪ್ರತಿದಿನ ಸಾವಿರಾರು ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ಹಾಗೂ ಕುಡಿದು ವಾಹನ ಚಾಲನೆ ಮಾಡುವುದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಾಹನ ಚಾಲಕರಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿವೆ. ಸರ್ಕಾರಗಳು ಎಷ್ಟೇ ಪ್ರಮಾಣದಲ್ಲಿ ಜಾಗೃತಿಯನ್ನು ಮೂಡಿಸಿದರೂ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಈ ರಸ್ತೆ ಅಪಘಾತಗಳಿಂದ ಸೆಲೆಬ್ರಿಟಿಗಳು ಹೊರತಾಗಿಲ್ಲ.

ಕೆಲವು ದಿನಗಳ ಹಿಂದಷ್ಟೆ ನಟಿ ಶಬಾನಾ ಆಜ್ಮಿ ಹಾಗೂ ಅವರ ಪತಿ ಜಾವೇದ್ ಅಖ್ತರ್ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಈ ಅಪಘಾತವು ಮುಂಬೈ - ಪುಣೆ ಎಕ್ಸ್ ಪ್ರೆಸ್ವೇನಲ್ಲಿ ಜನವರಿ 18ರಂದು ಸಂಭವಿಸಿತ್ತು. ಅಪಘಾತವಾದಾಗ ಶಬಾನಾ ಆಜ್ಮಿ ಹಾಗೂ ಜಾವೇದ್ ಅಖ್ತರ್ರವರು ಟಾಟಾ ಸಫಾರಿ ಸ್ಟ್ರಾಮ್ ಎಸ್ಯುವಿಯಲ್ಲಿ ಚಲಿಸುತ್ತಿದ್ದರು.

ಈ ಕಾರ್ ಅನ್ನು ಅವರ ಚಾಲಕ ಕಮಲೇಶ್ ಕಾಮತ್ ಡ್ರೈವ್ ಮಾಡುತ್ತಿದ್ದರು. ಕಾರು ಮುಂಬೈನಿಂದ 60 ಕಿ.ಮೀ ದೂರದಲ್ಲಿರುವ ಕಾಲಪುರ್ ಬಳಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿತ್ತು. ಈ ಅಪಘಾತದಲ್ಲಿ ಜಾವೇದ್ ಅಖ್ತರ್ರವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಆದರೆ ಶಬಾನಾ ಆಜ್ಮಿರವರು ತೀವ್ರವಾಗಿ ಗಾಯಗೊಂಡಿದ್ದರು.

ತಲೆ ಹಾಗೂ ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದ ಕಾರಣಕ್ಕೆ ಶಬಾನಾ ಆಜ್ಮಿರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಈ ಅಪಘಾತದ ಕಾರಣಕ್ಕೆ ಲಾರಿ ಚಾಲಕ ರಾಜೇಶ್ ಪಾಂಡುರಂಗ ಶಿಂಧೆರವರು ಕಾರು ಚಾಲಕನ ವಿರುದ್ಧ ರಾಯಗಢ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಸ್ಥಳೀಯ ಎಸ್ಪಿ ಪರಾಸ್ಕರ್ರವರು, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ ಕಾರಣಕ್ಕೆ ಶಬಾನಾ ಆಜ್ಮಿರವರ ಕಾರು ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 ಹಾಗೂ 337ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನು ಬಂಧಿಸಲಾಗಿಲ್ಲವೆಂದು ತಿಳಿಸಿದರು. ಕಾರು ಚಾಲಕ ಕಮಲೇಶ್ರವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕುಡಿದು ಕಾರು ಚಾಲನೆ ಮಾಡಿರಬಹುದೆಂಬ ಸಂದೇಹದ ಹಿನ್ನೆಲೆಯಲ್ಲಿ ಈ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಕುಡಿದಿರುವುದು ಕಂಡು ಬಂದಿಲ್ಲ. ಈ ಎಸ್ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸೀಟ್ ಬೆಲ್ಟ್ ಗಳನ್ನು ಧರಿಸಿದ್ದರೇ ಇಲ್ಲವೇ ಎಂಬುದು ತಿಳಿದು ಬಂದಿಲ್ಲ. ಈ ಘಟನೆ ನಡೆದಿರುವ ಮುಂಬೈ - ಪುಣೆ ಎಕ್ಸ್ ಪ್ರೆಸ್ವೇನಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಚಲಿಸುತ್ತವೆ.

ಈ ಎಕ್ಸ್ ಪ್ರೆಸ್ವೇನಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ಚಾಲಕರು ಅತಿವೇಗವಾಗಿ ವಾಹನ ಚಾಲನೆ ಮಾಡುತ್ತಿರುವುದೇ ಈ ಹೆದ್ದಾರಿಯಲ್ಲಿ ಅಪಘಾತಗಳಾಗುತ್ತಿರುವುದಕ್ಕೆ ಮುಖ್ಯ ಕಾರಣವಾಗಿದೆ. ಅದರಲ್ಲೂ ಮುಖ್ಯವಾಗಿ ಅತಿ ವೇಗವಾಗಿ ವಾಹನ ಚಲಾಯಿಸುವ ಕಾರು ಚಾಲಕರು ಹೆಚ್ಚಿನ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.

ಕೇಂದ್ರ ಸರ್ಕಾರವು ಸೆಪ್ಟೆಂಬರ್ 1ರಿಂದ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ವೇಗವಾಗಿ ವಾಹನ ಚಲಾಯಿಸುವ ವಾಹನ ಸವಾರರಿಗೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುತ್ತಿದೆ. ಇದರಿಂದಲಾದರೂ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯ.


Click it and Unblock the Notifications