ಸೂರತ್ ಆಯ್ತು, ಈಗ ಮಂಗಳೂರು ಉದ್ಯಮಿಯಿಂದ ಕಾರು ಮೆಗಾ ಗಿಫ್ಟ್
ಕಂಪನಿಯ ಏಳಿಗೆಯಲ್ಲಿ ಪಾತ್ರಧಾರಿಗಳಾಗಿರುವ ನಿಮಗೆ ವರ್ಷಾಂತ್ಯದಲ್ಲಿ ಏನು ಉಡುಗೊರೆ ದೊರೆಯುತ್ತದೆ? ಗರಿಷ್ಠ ಅಂದರೆ ನಗದು ಬೋನಸ್ ತಾನೇ? ಹೌದು, ನಾವಿಂದು ಹೇಳಲಿರುವ ವಿಚಾರ ನಿಮ್ಮಲ್ಲಿ ಅಚ್ಚರಿಗೆ ಕಾರಣವಾಗಲಿದೆ.
ಇವನ್ನೂ ಓದಿ: ವಜ್ರದ ವ್ಯಾಪಾರಿಯಿಂದ ನೌಕರರಿಗೆ 500 ಕಾರು ಉಡುಗೊರೆ
ಕಳೆದ ವರ್ಷವಷ್ಟೇ ಸೂರತ್ ಮೂಲದ ವಜ್ರದ ವ್ಯಾಪಾರಿಯೊಬ್ಬರು ತಮ್ಮ ಸಂಸ್ಥೆ ವಾರ್ಷಿಕ ಗುರಿ ಮುಟ್ಟಿರುವ ಹಿನ್ನಲೆಯಲ್ಲಿ 500ರಷ್ಟು ನೌಕರರಿಗೆ ಹೊಚ್ಚ ಹೊಸ ಫಿಯೆಟ್ ಪುಂಟೊ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈಗ ಇದಕ್ಕೆ ಸಮಾನವಾದ ರೀತಿಯಲ್ಲಿ ಮಂಗಳೂರು ಉದ್ಯಮಿ ಕೂಡಾ ಸುದ್ದಿಯಲ್ಲಿದ್ದಾರೆ.

ಪುಣೆ ತಳಹದಿಯ ಸಿಎನ್ಸಿ ಬಾಲ್ಸ್ ಸ್ಕ್ರೂ ಮತ್ತು ಬೇರಿಂಗ್ ಸಂಸ್ಥೆಯ ನಿರ್ದೇಶಕರಾಗಿರುವ ವರದರಾಜ್ ಕಮಲೇಶ್ ನಾಯಕ್ ತಮ್ಮ 12ರಷ್ಟು ನೌರಕರರಿಗೆ ನ್ಯಾನೋ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ರಸ್ತುತ ಸಂಸ್ಥೆಯು ವಾರ್ಷಿಕ ಎರಡು ಕೋಟಿ ರು.ಗಳ ವಹಿವಾಟು ನಡೆಸಿದೆ. ಇದು ಸೂರತ್ ಮೂಲದ ವಜ್ರದ ವ್ಯಾಪಾರಿಯ ಲಾಭದ ಮೊತ್ತದ ಸಮೀಪ ತಲುಪುವುದಿಲ್ಲವಾದರೂ ಇರ್ವರು ಒಂದೇ ರೀತಿಯ ಭಾವನೆ ಹಂಚಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನಾಯಕ್ 'ನನ್ನ ಸಂಪತ್ತು ವೃದ್ಧಿಗೆ ಸಹಕರಿಸಿದವರೊಂದಿಗೂ ನನ್ನ ಸಂಪತ್ತನ್ನು ಹಂಚಿಕೊಳ್ಳಬೇಕು' ಎಂದಿದ್ದಾರೆ.

ವರದರಾಜ್ ಅವರು 28 ವರ್ಷಗಳ ಹಿಂದೆ ತಮ್ಮ ಸಂಸ್ಥೆಯನ್ನು ಆರಂಭಿಸಿದ್ದರು. ಅಲ್ಲದೆ ಸಂಸ್ಥೆಯ ಯಶಸ್ಸಿನಲ್ಲಿ ಮಂಗಳೂರು ಘಟಕವು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದಿದ್ದಾರೆ.

ವರದರಾಜ್ ಅವರ ಸಂಸ್ಥೆಯು ಎನ್ಇಎಫ್ಎ ಜರ್ಮನಿ ಆಟೋಮೇಷನ್ ಅವಾರ್ಡ್ ಜೊತೆಗೆ ಹಲವಾರು ಪ್ರಶಸ್ತಿಗಳಿಗೂ ಭಾಜನವಾಗಿದೆ. ಸಂಸ್ಥೆಯ ಏಳಿಗೆಯಲ್ಲಿ ನೌಕರರ ಪಾತ್ರ ಮಹತ್ತರವಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications








