ಸಚಿವ ಮಧು ಬಂಗಾರಪ್ಪ ಕಾರು ಅಪಘಾತ ಪ್ರಕರಣ: ರಾತ್ರಿ ಪ್ರಯಾಣಿಸುವಾಗ ಈ ಟಿಪ್ಸ್ ಪಾಲಿಸಿರಿ
ತುಮಕೂರು (Tumakuru) ಜಿಲ್ಲೆಯ ಕ್ಯಾತಸಂದ್ರ (Kyathasandra) ಸಮೀಪ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸುತ್ತಿದ್ದ ಕಾರು, ಬುಧವಾರ ರಾತ್ರಿ ಅಪಘಾತಕ್ಕೆ ತುತ್ತಾಗಿದೆ. ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿಯೊಡೆದಿದ್ದು, ಕಾರಿನ ಮುಂಭಾಗ (ಫ್ರಂಟ್) ಸಂಪೂರ್ಣವಾಗಿ ಜಖಂಗೊಂಡಿದೆ. ಕಾರು ಮತ್ತು ಲಾರಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಸಚಿವ ಮಧು ಬಂಗಾರಪ್ಪ ಅವರು ಬದಲಿ ಕಾರಿನ ವ್ಯವಸ್ಥೆ ಮಾಡಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ. ಕಾರಿನಲ್ಲಿ ಸಚಿವರು ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದು, ಎಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ನಿನ್ನೆಯಷ್ಟೇ (ಡಿ.27) ನೆಲಮಂಗಲದ ತೊಣಚಿನಗುಪ್ಪೆ ಬಳಿ ತುಮಕೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿತ್ತು. ನಿಂತಿದ್ದ ಲಾರಿಗೆ 3 ಖಾಸಗಿ ಬಸ್ ಡಿಕ್ಕಿಯಾಗಿ ಈ ಘಟನೆ ನಡೆದಿತ್ತು. 30 ಮಂದಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಸ್ತೆಯಲ್ಲಿ ಸಂಪೂರ್ಣವಾಗಿ ಮಂಜು ಅವರಿಸಿಕೊಂಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ವಾಸ್ತವದಲ್ಲಿ ರಾತ್ರಿ ವೇಳೆ ಚಾಲನೆ ಮಾಡುವುದು ತುಂಬಾ ಅಪಾಯಕಾರಿಯಾಗಿದೆ. ಈ ರೀತಿಯ ಚಾಲನೆಯು ಚಾಲಕ ಮಾತ್ರವಲ್ಲದೆ ವಾಹನದಲ್ಲಿರುವ ಇತರೆ ಪ್ರಯಾಣಿಕರಿಗೂ ಸಾಕಷ್ಟು ಸಮಸ್ಯೆಯನ್ನು ಉಂಟು ಮಾಡಬಹುದು. ಇಲ್ಲಿ ರಾತ್ರಿ ಸಂದರ್ಭದಲ್ಲಿ ಯಾವ ರೀತಿ ವಾಹನ ಚಾಲನೆ ಮಾಡಬೇಕು ಎಂಬುದರ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ.

ನೀವು ರಾತ್ರಿಯ ವೇಳೆ ವಾಹನವನ್ನು ಓಡಿಸಲು ಬಯಸಿದರೆ, ಹಗಲಿನಲ್ಲಿ ಮಲಗಬೇಕು. ಈ ರೀತಿಯಾಗಿ ನಿದ್ದೆ ಮಾಡುವುದರಿಂದ ರಾತ್ರಿ ವಾಹನ ಚಾಲನೆ ಮಾಡುವಾಗ ಎಚ್ಚರದಿಂದಿರಲು ಸಾಧ್ಯವಾಗುತ್ತದೆ. ಇದರೊಂದಿಗೆ ಮದ್ಯ ಸೇವಿಸಿ ವಾಹನವನ್ನು ಚಲಾಯಿಸಬೇಡಿ. ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ಹೆಚ್ಚಿನ ರಸ್ತೆ ಅಪಘಾತಗಳಿಗೆ 'ಡ್ರಂಕ್ ಅಂಡ್ ಡ್ರೈವ್' ಕೇಸ್ ಪ್ರಮುಖ ಕಾರಣವಾಗಿದೆ.
ರಾತ್ರಿ ವೇಳೆ ವಾಹನ ಚಾಲನೆ ಮಾಡುವಾಗ ರಸ್ತೆ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಹಾಗಾಗಿ, ತುಂಬಾ ಜಾಗರೂಕರಾಗಿರಬೇಕು. ಆ ಕಾರಣಕ್ಕೆ ನಿಮ್ಮ ಮೊಬೈಲ್ ಅನ್ನು ಪದೇ ಪದೇ ನೋಡಬೇಡಿ. ಏರು ಧ್ವನಿಯಲ್ಲಿ ಮ್ಯಾಸಿಕ್ (ಸಂಗೀತ) ಹಾಕಬೇಡಿ. ರಾತ್ರಿಯಲ್ಲಿ ರಸ್ತೆಗಳು ಖಾಲಿಯಾಗಿರುವುದರಿಂದ ಅತಿಯಾದ ವೇಗದಲ್ಲಿ ಚಾಲನೆ ಮಾಡಬೇಡಿ. ರಾತ್ರಿ ವೇಳೆ ರಸ್ತೆಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ರಾತ್ರಿ ಸಮಯದಲ್ಲಿ ಪ್ರಯಾಣಿಸುವ ಮುನ್ನ ವಾಹನದ ಎಲ್ಲಾ ದೀಪಗಳು (ಲೈಟ್) ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಇಲ್ಲವೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳಿ. ವಾಹನದದಲ್ಲಿರುವ ಪ್ರತಿಯೊಂದು ದೀಪಗಳು ಉತ್ತಮವಾಗಿವೆ ಎಂಬುದನ್ನು ಗೊತ್ತುಪಡಿಸಿಕೊಂಡ ನಂತರವಷ್ಟೇ ನಿಮ್ಮ ಪ್ರಯಾಣವನ್ನು ಮುಂದುವರೆರಿಸಿ. ಈ ಸಲಹೆಗಳನ್ನು ಪಾಲಿಸುವ ಮೂಲಕ ರಾತ್ರಿ ವೇಳೆ ಆರಾಮದಾಯಕವಾಗಿ ಪ್ರಯಾಣ ಮಾಡಬಹುದು.
ಇನ್ನು, ಮಂಜು ಬಿದ್ದಿರುವ ರಸ್ತೆಗಳು ಬಹುತೇಕ ಅಸಷ್ಟವಾಗಿ ಕಾಣುತ್ತವೆ. ನೀವು ಹೆಚ್ಚಿನ ಜಾಗೃತೆ ವಹಿಸಬೇಕು. ಇಂತಹ ಸಂದರ್ಭದಲ್ಲಿ ಅತಿ ವೇಗ ಅಥವಾ ಓವರ್ ಟೇಕ್ ಮಾಡುವಂತಹ ಕೆಲಸಗಳಿಗೆ ಎಂದಿಗೂ ಕೈ - ಹಾಕಬೇಡಿ. ಜೊತೆಗೆ ಇತರೆ ವಾಹನಗಳೊಂದಿಗೆ ಸಾಕಷ್ಟು ಅಂತರ ಕಾಯ್ದುಕೊಳ್ಳಿರಿ. ವಾಹನದ ಅಪಾಯದ ದೀಪಗಳನ್ನು (Hazard Lights) ಬೆಳಗಿಸಿ. ಇದರಿಂದ ರಸ್ತೆಯಲ್ಲಿ ಗೋಚರತೆ ಕಡಿಮೆ ಇದ್ದಾಗ, ಇತರೆ ವಾಹನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications