ಹೊಸ ಎಕ್ಸ್ಪ್ರೆಸ್ವೇ: ಈ ನಗರದಿಂದ ಗೋವಾಕ್ಕೆ 6 ಗಂಟೆ, ಪ್ರಯಾಣದ ಅವಧಿ ಭಾರೀ ಇಳಿಕೆ!
ದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ, ಪ್ರಮುಖ ನಗರಗಳನ್ನು ಸಂಪರ್ಕಿಸಲು ಹೊಸ ಎಕ್ಸ್ಪ್ರೆಸ್ವೇಗಳನ್ನು (Expressway) ನಿರ್ಮಾಣ ಮಾಡುತ್ತಿದೆ. ಈಗಾಗಲೇ ಹಲವು ಹೆದ್ದಾರಿಗಳು ಲೋಕಾರ್ಪಣೆಯಾಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿವೆ.
ಸದ್ಯ, ಮುಂಬೈ - ಗೋವಾ ಎಕ್ಸ್ಪ್ರೆಸ್ವೇ (Mumbai Goa Expressway) ಕಾಮಗಾರಿ ಭರದಿಂದ ಸಾಗುತ್ತಿದ್ದು, ನಾಲ್ಕು ಪಥದ (four lanes) ಈ ಹೆದ್ದಾರಿ ಮುಂಬೈನ ಪನ್ವೆಲ್ ನಿಂದ ಗೋವಾದ ಪೊಲೆಮ್ಗೆ ಸಂಪರ್ಕ ಕಲ್ಪಿಸಲಿದೆ. ನೂತನ ಎಕ್ಸ್ಪ್ರೆಸ್ವೇಯಿಂದ ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಾಗಲಿದೆ. ಶೇಕಡ 67% ಹೆದ್ದಾರಿ ನಿರ್ಮಾಣದ ಕೆಲಸಗಳು ಮುಕ್ತಾಯಗೊಂಡಿವೆ.

ಹೆದ್ದಾರಿ ನಿರ್ಮಾಣದಿಂದಾಗುವ ದೊಡ್ಡ ಅನುಕೂಲವೆಂದರೆ, ಈಗಿರುವ ಪ್ರಯಾಣದ ಅವಧಿಯು ಅರ್ಧದಷ್ಟು ಕಡಿಮೆಯಾಗಲಿದೆ. ಪ್ರಸ್ತುತ ಮುಂಬೈನಿಂದ ಗೋವಾ ತಲುಪಲು 13 ಗಂಟೆ ಹಿಡಿಯಲಿದ್ದು, ಹೊಸ ಎಕ್ಸ್ಪ್ರೆಸ್ವೇ ನಿರ್ಮಾಣಗೊಂಡಾಗ ಅದು 6 ಗಂಟೆಗೆ ಕಡಿಮೆಯಾಗಲಿದೆ. ಮುಂಬೈ - ಗೋವಾ ಎಕ್ಸ್ಪ್ರೆಸ್ವೇ ಮಂಗಾಂವ್, ಮಹಾಡ್, ಪೊಲಾದ್ಪುರ್, ಖೇಡ್, ಚಿಪ್ಲುನ್, ರತ್ನಗಿರಿ, ಲಾಂಜಾ, ರಾಜಾಪುರ, ಕಂಕಾವ್ಲಿ, ಕುಡಾಲ್, ಸಾವಂತವಾಡಿ, ಪಣಜಿ, ಕೆನಕೋನಾ, ಮಾರ್ಗೋವ್ಗೆ ಮಾರ್ಗದಲ್ಲಿ ಹಾದುಹೋಗಲಿದೆ.
ನೂತನ ಎಕ್ಸ್ಪ್ರೆಸ್ವೇ ಈ ವರ್ಷದ (2023) ಕೊನೆಯೊಳಗೆ ಉದ್ಘಾಟನೆಗೊಳ್ಳಲಿದೆ. ಜೊತೆಗೆ ಮುಂಬೈನ ಪನ್ವೆಲ್ ಅನ್ನು ತಮಿಳುನಾಡಿನ ಕನ್ಯಾಕುಮಾರಿಯ ಕೇಪ್ ಕೊಮೊರಿನ್ಗೆ ಸಂಪರ್ಕಿಸಲು ನೇರವಾಗಲಿದೆ. ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಹಾದು ಹೋಗಲಿದ್ದು, ಸರಕು - ಸಾಕಾಣಿಕೆಗೂ ಭಾರೀ ಪ್ರಮಾಣದಲ್ಲಿ ಸಹಾಯಕವಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರಸ್ತುತ, ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ (Bengaluru Chennai Expressway) ನಿರ್ಮಾಣ ಕಾಮಗಾರಿಯೂ ವೇಗವಾಗಿ ನಡೆಯುತ್ತಿದೆ. ಮಾರ್ಚ್ 2024ರೊಳಗೆ ಪೂರ್ಣಗೊಳ್ಳುವ ನೀರಿಕ್ಷೆಯಿದೆ. ಈ ಹೆದ್ದಾರಿ ನಿರ್ಮಾಣದಿಂದ ಇವೆರೆಡು ನಗರಗಳ ಮಧ್ಯೆ ಪ್ರಯಾಣದ ಅವಧಿಯೂ ತುಂಬಾ ಮಟ್ಟಿಗೆ ಕಡಿಮೆಯಾಗಲಿದ್ದು, ಈಗಿರುವ 5 - 6 ಗಂಟೆ, ಜರ್ನಿ ಸಮಯ ಕೇವಲ 3 ಗಂಟೆಗೆ ಇಳಿಕೆಯಾಗಲಿದೆ.
ಈ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸುಮಾರು 17,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಇದು 4 ಪಥದ ಹೆದ್ದಾರಿಯಾಗಿದೆ. ಆದರೆ, ಸಂಚಾರ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಣೆ ಮಾಡಬಹುದು. ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ಕರ್ನಾಟಕದ ಹೊಸಕೋಟೆಯಿಂದ ಆರಂಭವಾಗಿ ಚೆನ್ನೈ ಸಮೀಪವಿರುವ ಶ್ರೀಪೆರಂಬದೂರಿನಲ್ಲಿ ಮುಕ್ತಾಯಗೊಳ್ಳಲಿದೆ.

262 ಕಿಮೀ ಉದ್ದದ ಈ ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗಲಿದೆ. 17 ಫ್ಲೈಓವರ್ಗಳು, 41 ವೆಹಿಕಲ್ ಅಂಡರ್ಪಾಸ್, 52 ಪಾದಚಾರಿ ಅಂಡರ್ಪಾಸ್, 162 ಸೇತುವೆ ಮತ್ತು 4 ರೈಲ್ವೆ ಕ್ರಾಸಿಂಗ್ಗಳನ್ನು ಹೊಂದಿರಲಿದೆ. ಇಲ್ಲಿ, ವಾಹನಗಳ ವೇಗಮಿತಿಯನ್ನು ಗಂಟೆಗೆ 120 ಕಿಮೀ.ಗೆ ಸೀಮಿತಗೊಳಿಸಬಹುದು ಎಂದು ಹೇಳಲಾಗಿದೆ.
ಇದಿಷ್ಟೇ ಅಲ್ಲದೆ, ಬೆಂಗಳೂರು - ಪುಣೆ ನಡುವೆ ಎಕ್ಸ್ಪ್ರೆಸ್ವೇ ಕಾಮಗಾರಿ ಶುರು ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿಯಲ್ಲಿದೆ. 719 ಕಿಮೀ ಉದ್ದದ ಹೆದ್ದಾರಿ ಇದಾಗಿರಲಿದ್ದು, ದಾಬಸ್ ಪೇಟೆ - ದೊಡ್ಡಬಳ್ಳಾಪುರ ನಡುವೆಯಿರುವ ಹುಲಿಕುಂಟೆ ಬಳಿ ಪ್ರಾರಂಭವಾಗಿ, ಮಹಾರಾಷ್ಟ್ರದ ಶಿವರೆ ಸಮೀಪ ಮುಕ್ತಾಯಗೊಳ್ಳಲಿದೆ. ಹೀಗಿರುವ 15 ಗಂಟೆ ಪ್ರಯಾಣ ಅವಧಿಯೂ 7 ಗಂಟೆಗೆ ಇಳಿಕೆಯಾಗಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications