ಲೋಕಾರ್ಪಣೆಗೊಂಡು 6 ದಿನಕ್ಕೆ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಜಲಾವೃತ: ಕೆಟ್ಟುನಿಂತ ವಾಹನಗಳು.. ಅಪಘಾತ
ಪ್ರಧಾನಿ ನರೇಂದ್ರ ಮೋದಿ ಅವರು, ಆರು ದಿನಗಳ ಹಿಂದೆ ಉದ್ಘಾಟಿಸಿದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ರಾಮನಗರ ಭಾಗದಲ್ಲಿ ಜಲಾವೃತಗೊಂಡಿದೆ. ರಸ್ತೆಯ ಮೇಲೆ ನೀರು ನಿಂತ ಹಿನ್ನೆಲೆ, ಸರಣಿ ಅಪಘಾತವಾಗಿದೆ. ವಾಹನ ಸವಾರರು ಪರದಾಡಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹುನೀರಿಕ್ಷಿತ ಬೆಂಗಳೂರು ಹಾಗೂ ಮೈಸೂರು ನಡುವಿನ ಈ ದಶಪಥ ಹೆದ್ದಾರಿ ಕಾಮಗಾರಿಯನ್ನು ರೂ.8,480 ಕೋಟಿ ವೆಚ್ಛದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ಮಾಡಿದೆ. ಇದೀಗ, ರಾಮನಗರ ತಾಲ್ಲೂಕಿನ ಸಂಗಬಸವನದೊಡ್ಡಿ ಸಮೀಪ ಕೆಳಸೇತುವೆಯಲ್ಲಿ ನೀರು ನಿಂತಿದ್ದು, ಸರಣಿ ಅಪಘಾತ ಸಂಭವಿಸಿದ್ದು, ವಾಹನಗಳು ನಿಧಾನವಾಗಿ ಸಂಚರಿಸಿದ್ದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಕಳೆದ ವರ್ಷವು ಮಳೆಗಾಲದಲ್ಲಿ ಇದೇ ಕೆಳಸೇತುವೆ ಜಲಾವೃತಗೊಂಡಿತ್ತು.

ಮತ್ತೆ ಇಲ್ಲಿಯೇ ನೀರು ನಿಂತಿದ್ದು, ತೊಂದರೆಗೆ ಸಿಲುಕಿರುವ ಪ್ರಯಾಣಿಕರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೆದ್ದಾರಿ ಉದ್ಘಾಟನೆಗೆ ಸಿದ್ಧವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. 'ನನ್ನ ಮಾರುತಿ ಸ್ವಿಫ್ಟ್ ಕಾರು ಜಲಾವೃತಗೊಂಡ ಕೆಳಸೇತುವೆಯಲ್ಲಿ ಅರ್ಧ ಮುಳುಗಿ ಸ್ವಿಚ್ ಆಫ್ ಆಗಿತ್ತು. ಹಿಂದಿನಿಂದ ಲಾರಿ ಬಂದು ಡಿಕ್ಕಿ ಹೊಡೆದಿದ್ದು, ಕಾರು ಜಖಂಗೊಂಡಿದೆ. ಇದಕ್ಕೆ ಯಾರು ಹೊಣೆ?' ಎಂದು ವಿಕಾಸ್ ಎಂಬುವವರು ಕೇಳಿದ್ದಾರೆ.
ಮತ್ತೊಬ್ಬ ಪ್ರಯಾಣಿಕ ಸಹ ಈ ಸರಣಿ ಅಪಘಾತಕ್ಕೆ ಹೊಣೆ ಯಾರೆಂದು ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಗೆ ಬಂದರೆ ಕೇವಲ 10 ನಿಮಿಷಗಳಲ್ಲಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿದ್ದರು ಎಂದು ಹೇಳಿದ್ದಾರೆ. ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇಯಲ್ಲಿ ಸರಿ ಸುಮಾರು 100 ಕಿಲೋಮೀಟರ್ ವೇಗದಲ್ಲಿ ಚಲಿಸುವ ವಾಹನಗಳು ಈ ಕೆಳಸೇತುವೆ ಸಮೀಪ ಬಂದ ಕೊಡಲೇ ಕೆಲವು ಮೀಟರ್ ಗಳಷ್ಟು ದೂರ ನಿಂತ ನೀರಿನಲ್ಲಿ ಸಂಚರಿಸಬೇಕಿರುವುದರಿಂದ ಕೆಟ್ಟು ನಿಲ್ಲುತ್ತಿವೆ.

ಈ ಮೈಸೂರು-ಬೆಂಗಳೂರು ದಶಪಥದ ಹೆದ್ದಾರಿಯಲ್ಲಿ ಮಳೆಯ ಅವಾಂತರಕ್ಕಿಂತ ಟೋಲ್ ಮೊತ್ತ ಸಂಗ್ರಹ ವಿಚಾರದಲ್ಲಿಯೇ ಹೆಚ್ಚಿನ ಸುದ್ದಿಯಾಗಿದೆ. ಹೆಚ್ಚಿನ ಹಣ ವಸೂಲಿ ಮಾಡುತ್ತಿರುವದರಿಂದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಹನ ಮಾದರಿ ಆಧರಿಸಿ ರೂ.135 ರಿಂದ ರೂ.720 ಶುಲ್ಕ ಪಾವತಿಸಬೇಕಾಗಿದೆ. ಪ್ರತಿದಿನ ಒಂದಿಲ್ಲೊಂದು ಸಂಘಟನೆಗಳು 'ಟೋಲ್' ಬಳಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಸದ್ಯಕ್ಕೊಂದು ಈ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಈ ಎಕ್ಸ್ಪ್ರೆಸ್ ವೇಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ನಿಂದ ವಾಹನಗಳ ಸಂಚಾರ ಆರಂಭವಾಗಿತ್ತು. ಈವರೆಗೆ 335ಕ್ಕೂ ಅಪಘಾತ ಪ್ರಕರಣಗಳು ವರದಿಯಾಗಿದ್ದು, 80ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಸಂಬಂಧಪಟ್ಟು ಅಧಿಕಾರಿಗಳು ಗಮನಗರಿಸಬೇಕಾಗಿದೆ. ಇನ್ನು, ಈ ಎಕ್ಸ್ಪ್ರೆಸ್ ವೇಯಿಂದ ಪ್ರಯಾಣಿಕರಿಗೆ ಆಗುತ್ತಿರುವ ದೊಡ್ಡ ಮಟ್ಟದ ಪ್ರಯೋಜನವೆಂದರೆ, ಬೆಂಗಳೂರು - ಮೈಸೂರು ನಡುವೆ 150 ನಿಮಿಷಗಳ ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಕೆಯಾಗಿದೆ.

ಇದೊಂದು ದಶಪಥದ ಹೆದ್ದಾರಿಯಾಗಿದ್ದು, ಎರಡು ಕಡೆ ತಲಾ ಮೂರು ಪಥಗಳನ್ನು ಒಳಗೊಂಡಿರುವ 6 ಪಥದ ಎಕ್ಸ್ಪ್ರೆಸ್ ವೇ ಇದೆ. ಉಳಿದಂತೆ ಎರಡು ಬದಿಯಲ್ಲಿ ತಲಾ 2 ಪಥದ ಸರ್ವಿಸ್ ರಸ್ತೆ ಹೊಂದಿದೆ. ಇನ್ನು, ರಾಮನಗರದ ಸಂಗಬಸವನದೊಡ್ಡಿ ಕೆಳಸೇತುವೆ ಸಮೀಪ ಕಳೆದ ವರ್ಷದಂತೆ ಈ ವರ್ಷವು ಜಲಾವೃತಗೊಂಡಿದ್ದು, ಈ ಕೂಡಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಬಗೆಹರಿಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications