ದುರ್ಬಲ ಹೃದಯದವರು ಈ ವಿಡಿಯೋ ನೋಡಬೇಡಿ... ಪ್ರಕೃತಿ ಎದರು ಟಾಟಾ ಕಾರುಗಳಾದ್ರು ಏನು ಮಾಡಬಲ್ಲವು!
ನಾಗಾಲ್ಯಾಂಡ್ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ಎರಡು ಕಾರುಗಳ ಮೇಲೆ ದೈತ್ಯ ಬಂಡೆಗಳು ಬಿದ್ದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಚುಮೌಕೆಡಿಮಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 29 ರಲ್ಲಿ ದಿಮಾಪುರ್ ಮತ್ತು ಕೊಹಿಮಾ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಮಾದ್ಯಮಗಳಲ್ಲಿ ವರದಿಯಾಗಿದೆ.
ಮಂಗಳವಾರ ಸಂಜೆ ಚಾಥೆ ಸೇತುವೆ (ಪಟ್ಕೈ ಸೇತುವೆ) ಬಳಿಯ ಚುಮೌಕೆಡಿಮಾದಲ್ಲಿ ಬಂಡೆಗಳು ಚಲಿಸುವ ಕಾರುಗಳ ಮೇಲೆ ಬಿದ್ದು ಇಬ್ಬರು ಸಾವು ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಮಾರುತಿ ಸುಜುಕಿ ಆಲ್ಟೊ ಎಲ್ಎಕ್ಸ್, ಟಾಟಾ ಹ್ಯಾರಿಯರ್ ಮತ್ತು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.

ಮಾರುತಿ ಸುಜುಕಿ ಆಲ್ಟೊ ಎಲ್ಎಕ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರೆ, ಸಂಪೂರ್ಣ ನಜ್ಜುಗುಜ್ಜಾದ ಟಾಟಾ ಹ್ಯಾರಿಯರ್ನಲ್ಲಿನ ಪ್ರಯಾಣಿಕರು ಪವಾಡದ ರೀತಿಯಲ್ಲಿ ಪಾರಾಗಿದ್ದು, ತಮಿಳುನಾಡಿನ 52 ವರ್ಷದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ವ್ಯಾಗನ್ ಆರ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನಿಜಕ್ಕೆ ಈ ಭೀಕರ ಅಪಘಾತದ ವಿಡಿಯೋದಲ್ಲಿ ಬೃಹತ್ ಬಂಡೆ ಬಿದ್ದು ನಜ್ಜುಗುಜ್ಜಾಗಿದ್ದು ಟಾಟಾ ಹ್ಯಾರಿಯರ್, ವಿಡಿಯೋವನ್ನು ನೋಡಿದ ಪ್ರತಿಯೊಬ್ಬರು ಕೂಡ ಹ್ಯಾರಿಯರ್ ಒಳಗಿನ ಪ್ರಯಾಣಿಕರು ಸಾವನ್ನಪ್ಪಿರಬಹುದು ಎಂದು ಊಹಿಸಬಹುದು. ಆದ್ರೆ ಇಲ್ಲಿ ಟಾಟಾ ಹ್ಯಾರಿಯರ್ ಪ್ರಯಾಣಿಕರಿಗೆ ಕೇವಲ ಗಾಯಗಳಾಗಿರುವುದು ಎಂಥವರನ್ನು ಆಶ್ಚರ್ಯಗೊಳಿಸುತ್ತಿದೆ.

ನಾಗಾಲ್ಯಾಂಡ್ ಸರ್ಕಾರವು ಗಾಯಗೊಂಡವರಿಗೆ ತುರ್ತು ಸೇವೆಗಳು ಮತ್ತು ಅಗತ್ಯ ವೈದ್ಯಕೀಯ ಸಹಾಯವನ್ನು ಒದಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ಹಾಗೆಯೇ ಇಂತಹ ಅಪಘಾತಗಳನ್ನು ತಡೆಗಟ್ಟಲು ಕ್ರಮಕ್ಕೆ ಮುಂದಾಗಿರುವುದಾಗಿ ಮುಖ್ಯಮಂತ್ರಿ ನೆಫಿಯು ರಿಯೊ ತಿಳಿಸಿದ್ದಾರೆ.
ಸದ್ಯ ದೊಡ್ಡ ಬಂಡೆ ಕಾರುಗಳನ್ನು ಛಿದ್ರಗೊಳಿಸುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಂದೆ ಕಾಯುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ. ಅಪಘಾತ ಸ್ಥಳವನ್ನು ಪಕಲಾ ಪಹಾರ್ ಎಂದು ಕರೆಯಲಾಗುತ್ತದೆ. ಈ ಸ್ಥಳವು ಭೂಕುಸಿತ ಮತ್ತು ಬಂಡೆಗಳ ಕುಸಿತಕ್ಕೆ ಹೆಸರುವಾಸಿಯಾಗಿದೆ ಎಂದು ಮುಖ್ಯಮಂತ್ರಿ ನೆಫಿಯು ರಿಯೊ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಹೆದ್ದಾರಿಯುದ್ದಕ್ಕೂ ಅಪಾಯಕಾರಿ ಸ್ಥಳಗಳಲ್ಲಿ ಸುರಕ್ಷತಾ ಮೂಲಸೌಕರ್ಯಕ್ಕಾಗಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು GoI ಮತ್ತು @nhidcl ನೊಂದಿಗೆ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ. ಇದು ನಮ್ಮ ನಾಗರಿಕರ ಜೀವನ ಮತ್ತು ಸುರಕ್ಷತೆಗೆ ಸಂಬಂಧಿಸಿದೆ. ಸಂಬಂಧಿಸಿದ ಸಂಸ್ಥೆ ಅಗತ್ಯ ಸುರಕ್ಷತೆಯನ್ನು ತೆಗೆದುಕೊಳ್ಳಬೇಕು ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ: ಭೂಕುಸಿತ ಜಾಗಗಳ ಬಗ್ಗೆ ಅರಿವಿದ್ದವರು ಮಳೆಗಾಲದಲ್ಲಿ ಆ ಮಾರ್ಗಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಸಾಧ್ಯವಾದ್ರೆ ದೂರ ಹೆಚ್ಚಾದರೂ ಚಿಂತಿಸದೆ ಪರ್ಯಾಯ ಮಾರ್ಗದಲ್ಲಿ ಪ್ರಯಾಣಿಸುವುದು ಉತ್ತಮ. ಇಲ್ಲದಿದ್ದರೇ ವಿಮಾನ ಪ್ರಯಾಣ ಮಾಡಬಹುದು. ಹಾಗೆಯೇ ಕೊನೆಯದಾಗಿ ಪ್ರಕೃತಿ ಎದರು ನಾವೆಲ್ಲರು ಅಲ್ಪರು ಎಂಬುದನ್ನು ಮರೆಯದಿರಿ.


Click it and Unblock the Notifications