karnataka Expressway: ಕರ್ನಾಟಕದ ಎರಡನೇ ಎಕ್ಸ್ಪ್ರೆಸ್ವೇ ರೆಡಿನಾ?
ಬೆಂಗಳೂರು - ಮೈಸೂರು ನಡುವೆ ಎಕ್ಸ್ಪ್ರೆಸ್ವೇ (Expressway) ಲೋಕಾರ್ಪಣೆಗೊಂಡು ಹಲವು ತಿಂಗಳು ಕಳೆದಿದೆ. ನೆಲಮಂಗಲ - ತುಮಕೂರು ನಡುವೆ ರಾಜ್ಯದ ಎರಡನೇ ದಶಪಥ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಆದರೆ, ಕುಂಟುತ್ತಾ ಸಾಗುತ್ತಿದೆ. ಹೀಗೆ, ಮುಂದುವರಿದರೆ ಕೇಂದ್ರ ಸರ್ಕಾರ ಹೇಳಿರುವ ಸಮಯಕ್ಕೆ ಈ ರಸ್ತೆ ಉದ್ಘಾಟನೆಗೊಳ್ಳುವುದು ಅನುಮಾನವಾಗಿದೆ.
ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಹೊರ ಜಿಲ್ಲೆಗಳ ಜನರು ಬೆಂಗಳೂರು ನಗರವನ್ನು ಅವಲಂಬನೆಯಾಗದೇ, ನೇರವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಈ ದಶಪಥ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ನೆಲಮಂಗಲ - ತುಮಕೂರು ಮಧ್ಯೆ 44.04 ಕಿಲೋಮೀಟರ್ ಉದ್ದದ ರಸ್ತೆ ಇದಾಗಿದ್ದು, ಒಟ್ಟು ರೂ.844 ಕೋಟಿ ವೆಚ್ಚದಲ್ಲಿ ಭಾರತಮಾಲಾ ಯೋಜನೆಯಡಿ ಕಾಮಗಾರಿಯನ್ನು ನಡೆಸಲಾಗುತ್ತಿದೆ.

ಮೊದಲಿಗೆ ಸರ್ವಿಸ್ ರೋಡ್ ಕಾಮಗಾರಿ ಮುಗಿಸಿ, ವಾಹನಗಳನ್ನು ಈ ರಸ್ತೆಗೆ ಮಾರ್ಗ ಬದಲಾವಣೆ ಮಾಡಿ, ಆ ನಂತರ ಆರು ಲೈನ್ ಗಳ ಕಾಮಗಾರಿಯನ್ನು ಮಾಡಲು ಯೋಜನೆ ರೂಪಿಸಲಾಗಿದ್ದು, 2025ರ ಆಗಸ್ಟ್ ತಿಂಗಳ ಕೊನೆಯಲ್ಲಿ ನೆಲಮಂಗಲ - ತುಮಕೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಲು ಕೇಂದ್ರ ಸಾರಿಗೆ ಸಚಿವಾಲಯ ತೀರ್ಮಾನ ಮಾಡಿದೆ. ಈ ಹೆದ್ದಾರಿಯು ರೈಲ್ವೆ ಸೇರಿದಂತೆ 17 ಮೇಲ್ಸೇತುವೆಗಳನ್ನು ಒಳಗೊಂಡಿರುತ್ತದೆ.
ಆದರೆ, ಕಾಮಗಾರಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದ್ದು, ನೆಲಮಂಗಲ-ದಾಬಸ್ಪೇಟೆ ನಡುವೆ ಸರ್ವೀಸ್ ರಸ್ತೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು, ದಾಬಸ್ಪೇಟೆ-ತುಮಕೂರು ನಡುವೆ ಸರ್ವೀಸ್ ರೋಡ್ ಕೆಲಸಗಳು ಆರಂಭವಾಗಿಯೇ ಇಲ್ಲ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿಲ್ಲ. ಕೆಲವೆಡೆ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಇದರಿಂದ ಹೆದ್ದಾರಿ ನಿರ್ಮಾಣ ಮತ್ತಷ್ಟು ತಡವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ದಾಬಸ್ಪೇಟೆ - ಹೊಸಕೋಟೆ ರಸ್ತೆ, ನೆಲಮಂಗಲದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಬೈಪಾಸ್ ರಸ್ತೆ ಕಾಮಗಾರಿ ಸಹ ಭರದಿಂದ ನಡೆಯುತ್ತಿದ್ದು, ಈ ದಶಪಥ ಹೆದ್ದಾರಿ ಇವುಗಳೊಂದಿಗೆ ಸಂಪರ್ಕಿಸುವುದರಿಂದ ತುಮಕೂರು ಸೇರಿದಂತೆ ಸುತ್ತಲಿನ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜೊತೆಗೆ ಸೋಂಪುರ, ದಾಬಸ್ಪೇಟೆ ಹಾಗೂ ಹಿರೇಹಳ್ಳಿ ಕೈಗಾರಿಕಾ ಪದೇಶಗಳು ಮತ್ತಷ್ಟು ಅಭಿವೃದ್ಧಿಗೊಂಡು ಹೆಚ್ಚಿನ ಜನರಿಗೆ ಉದ್ಯೋಗ ದೊರೆಯಲಿದೆ.
ಈ ಕಾರಣಕ್ಕೆ ನೆಲಮಂಗಲ - ತುಮಕೂರು ನಡುವೆ ದಶಪಥ ಹೆದ್ದಾರಿ ಕಾಮಗಾರಿಯನ್ನು ಏನೇ ಅಡೆ - ತಡೆ ಇದ್ದರೂ ಅದನ್ನು ಬಗೆಹರಿಸಿ, ನಿಗದಿಪಡಿಸಿರುವ ಸಮಯದಲ್ಲಿ ಮಾಡಿ ಮುಗಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ರಾಜ್ಯದ ಮೊದಲ ಎಕ್ಸ್ಪ್ರೆಸ್ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು - ಮೈಸೂರು ದಶಪಥದ ಹೆದ್ದಾರಿ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಯುವುದಾದರೆ, ಈ ರಸ್ತೆಯನ್ನು ವಿವಿಧ ಕ್ಷೇತ್ರದ ಅಭಿವೃದ್ಧಿಗೆ ರೂ.8172 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಬೆಂಗಳೂರು - ಮೈಸೂರು ಹೆದ್ದಾರಿ 118 ಕಿಲೋಮೀಟರ್ ಉದ್ದವಿದ್ದು, ಎರಡು ಕಡೆ ತಲಾ ಮೂರು ಪಥವನ್ನು ಒಳಗೊಂಡಿರುವ 6 ಪಥದ ಎಕ್ಸ್ಪ್ರೆಸ್ ವೇ, ಉಳಿದೆರೆಡು ಬದಿಯಲ್ಲಿ ತಲಾ ಪಥದ ಸರ್ವಿಸ್ ರಸ್ತೆ ಇದೆ. 9 ಬೃಹತ್ ಸೇತುವೆ, 44 ಕಿರು ಸೇತುವೆ ಒಳಗೊಂಡಿದ್ದು, ಅಪಘಾತ, ಟೋಲ್ ಶುಲ್ಕ ಹೆಚ್ಚಳ ಸೇರಿದಂತೆ ಒಂದಿಲ್ಲೊಂದು ಕಾರಣಗಳಿಗೆ ಈ ಎಕ್ಸ್ಪ್ರೆಸ್ವೇ ಸದಾ ಸುದ್ದಿಯಲ್ಲಿರುತ್ತದೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆದ್ದಾರಿ ನಿರ್ಮಾಣದಲ್ಲಿ ದೊಡ್ಡ ಸಾಧನೆಯನ್ನು ಮಾಡಿದೆ. ಪ್ರಸ್ತುತ, ದೇಶದಲ್ಲಿ 1.45 ಲಕ್ಷ ಕಿಲೋಮೀಟರ್ ಉದ್ದದ ರಸ್ತೆಯಿದ್ದು, ವಿಶ್ವದಲ್ಲಿ ಅಮೆರಿಕ ನಂತರ ಎರಡನೇ ಸ್ಥಾನಕ್ಕೆ ಭಾರತ ತಲುಪಿದೆ. ದೆಹಲಿ - ಮುಂಬೈ ನಡುವಿನ ಎಕ್ಸ್ಪ್ರೆಸ್ವೇ ದೇಶದಲ್ಲಿಯೇ ಅತ್ಯಂತ ಉದ್ದದ ಹೆದ್ದಾರಿಯಾಗಿದೆ.


Click it and Unblock the Notifications