ಗಣನೀಯ ಪ್ರಮಾಣದಲ್ಲಿ ಕುಸಿದ ರಸ್ತೆ ಅಪಘಾತಗಳ ಪ್ರಮಾಣ
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು 2019 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಬಗ್ಗೆ ಲೋಕ ಸಭೆಗೆ ಮಾಹಿತಿ ನೀಡಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ 2019 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 1,51,113 ಜನರು ಸಾವನ್ನಪ್ಪಿದ್ದಾರೆ.

2018 ಕ್ಕೆ ಹೋಲಿಸಿದರೆ ಈ ಪ್ರಮಾಣವು 0.20% ನಷ್ಟು ಕಡಿಮೆಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ನಿತಿನ್ ಗಡ್ಕರಿ 2019 ರಲ್ಲಿ ಒಟ್ಟು 4,49,002 ರಸ್ತೆ ಅಪಘಾತಗಳು ಸಂಭವಿಸಿವೆ. ಈ ಪ್ರಮಾಣವು 2018 ಕ್ಕೆ ಹೋಲಿಸಿದರೆ 3.9% ನಷ್ಟು ಕಡಿಮೆಯಾಗಿದೆ. ಲೋಕಸಭೆಯಲ್ಲಿ ಮಾತನಾಡಿದ ನಿತಿನ್ ಗಡ್ಕರಿರವರು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳೇನು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಕುಡಿದು ವಾಹನ ಚಲಾಯಿಸುವುದು, ರಾಂಗ್ ಸೈಡ್'ನಲ್ಲಿ ವಾಹನ ಚಲಾಯಿಸುವುದು, ಸೀಟ್ ಬೆಲ್ಟ್ ಬಳಸದಿರುವುದು, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸುವುದು ರಸ್ತೆ ಅಪಘಾತಗಳಿಗೆ ಕೆಲವು ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದರು.

ಶಿಕ್ಷಣ, ಎಂಜಿನಿಯರಿಂಗ್, ಜಾರಿ ಹಾಗೂ ತುರ್ತು ಆರೈಕೆಯ ಆಧಾರದ ಮೇಲೆ ರಸ್ತೆ ಸುರಕ್ಷತೆ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸಾರಿಗೆ ಇಲಾಖೆಯು ಬಹುಮುಖಿ ಕಾರ್ಯತಂತ್ರವನ್ನು ಸಿದ್ಧಪಡಿಸಿದೆ ಎಂದು ಅವರು ಲೋಕಸಭೆಯಲ್ಲಿ ತಿಳಿಸಿದರು.

ಸಾರಿಗೆ ಇಲಾಖೆಯು ರಸ್ತೆಗಳಲ್ಲಿರುವ ಬ್ಲಾಕ್ ಸ್ಪಾಟ್'ಗಳನ್ನು ಗುರುತಿಸಿದ್ದು, ಅವುಗಳನ್ನು ಸರಿ ಪಡಿಸುತ್ತಿದೆ ಎಂದು ಅವರು ಹೇಳಿದರು. ಹೊಸ ಯೋಜನೆಗಳಲ್ಲಿ ರಸ್ತೆಗಳ ವಿನ್ಯಾಸಕ್ಕೆ ಸಂಬಂಧಿಸಿದಂತೆ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಅವರು ಮಾಹಿತಿ ನೀಡಿದರು.

ರಸ್ತೆಗಳಲ್ಲಿ ತಾಂತ್ರಿಕ ಸುಧಾರಣೆಗಾಗಿ ಬ್ಲಾಕ್ ಸ್ಪಾಟ್'ಗಳನ್ನು ಗುರುತಿಸುವ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳಿಗೆ ವಹಿಸಲಾಗಿದ್ದು, ಹೊಸ ಸುಧಾರಣೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಆದೇಶ ನೀಡಲಾಗಿದೆ.

ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿಯನ್ನು 20 ಕಿ.ಮೀಗಳಷ್ಟು ಹೆಚ್ಚಿಸುವುದಾಗಿ ಇತ್ತೀಚೆಗಷ್ಟೇ ನಿತಿನ್ ಗಡ್ಕರಿ ತಿಳಿಸಿದ್ದರು. ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ್ದ ನಿತಿನ್ ಗಡ್ಕರಿ ಹೆದ್ದಾರಿಗಳ ಸ್ಥಿತಿ ಈಗ ಸುಧಾರಿಸಿದೆ.

ಈ ಕಾರಣಕ್ಕೆ ವಾಹನಗಳ ವೇಗವನ್ನು ಹೆಚ್ಚಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು. ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು 100% ಶುದ್ಧ ಇಂಧನ ಮೂಲಗಳಿಗೆ ಬದಲಿಸಲು ನಿತಿನ್ ಗಡ್ಕರಿ ಚಿಂತನೆ ನಡೆಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಗ್ರೀನ್ ಎನರ್ಜಿ ಸುಧಾರಿಸುವಲ್ಲಿ ಭಾರತವು ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 2022 ರ ವೇಳೆಗೆ ಭಾರತವುನವೀಕರಿಸಬಹುದಾದ ಇಂಧನ ಮೂಲಗಳಿಂದ 175 ಗಿಗಾ ವ್ಯಾಟ್ ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿ ಪರ್ಯಾಯ ಸಾರಿಗೆ ಸಂಪನ್ಮೂಲಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ರೋಪ್ವೇ ಹಾಗೂ ಕೇಬಲ್ ಕಾರುಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಈ ಸಂಪನ್ಮೂಲಗಳನ್ನು ಜಲವಿದ್ಯುತ್ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್ನಿಂದ ನಡೆಸಲಾಗುತ್ತದೆ. ನವೀಕರಿಸಬಹುದಾದ ಇಂಧನ ಮೂಲಗಳು ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಅವರು ಹೇಳಿದರು.

2050 ರ ಹೊತ್ತಿಗೆ ನವೀಕರಿಸಬಹುದಾದ ಇಂಧನ ಯೋಜನೆಗಳು ಸುಮಾರು 3 ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡುತ್ತವೆ ಎಂದು ಹೇಳಲಾಗಿದೆ. ಲಾಜಿಸ್ಟಿಕ್ಸ್ನಲ್ಲಿ ಎಲ್ಎನ್ಜಿ ಹಾಗೂ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸಲು ಒತ್ತು ನೀಡಲಾಗುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದರು.


Click it and Unblock the Notifications