ಪಾರ್ಕ್ ಮಾಡಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ: ಜನಪ್ರಿಯ ಕಂಪನಿ ವಿರುದ್ಧ ಮಾಲೀಕನ ಆರೋಪ
ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇವೆ. ಆದರೆ ಇದೀಗ ಎಲೆಕ್ಟ್ರಿಕ್ ಅಲ್ಲದ ಜನಪ್ರಿಯ ಕಂಪನಿಯ ಕಾರೊಂದಕ್ಕೆ ಬೆಂಕಿ ಬಿದ್ದು ಸುಟ್ಟು ಕರಕಲಾಗಿದೆ.
ಹೌದು, ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಭಾರತದ ಪ್ರತಿಷ್ಟಿತ ಕಾರು ಕಂಪನಿ ಟಾಟಾದ ಹ್ಯಾರಿಯರ್ ಡಾರ್ಕ್ ಎಡಿಷನ್ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದ್ದು, ಇದಕ್ಕೆ ಕಂಪೆನಿಯೇ ಹೊಣೆ ಎಂದು ಮಾಲೀಕರು ಆರೋಪಿಸಿದ್ದಾರೆ.

ಭಾರತದಲ್ಲಿ ಟಾಟಾ ಮೋಟೋರ್ಸ್ ಭಾರತದ ಅತ್ಯಂತ ಸುರಕ್ಷಿತ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ. ಟಾಟಾ ಕಂಪನಿಯ ಟಾಟಾ ಪಂಚ್, ಸಫಾರಿ, ನೆಕ್ಸಾನ್, ಹ್ಯಾರಿಯರ್, ಆಲ್ಟ್ರೋಸ್ ಹೀಗೆ ಬಹುತೇಕ ಎಲ್ಲಾ ಕಾರುಗಳು ಕೂಡ ಪ್ರಯಾಣಿಸಲು ಅತ್ಯಂತ ಸುರಕ್ಷಿತ ಕಾರುಗಳು ಎಂದು ಹೆಸರುವಾಸಿಯಾಗಿವೆ. ಇದೇ ಕಾರಣದಿಂದಾಗಿಯೇ ಕಾರು ಪ್ರೇಮಿಗಳು ಟಾಟಾ ಕಾರುಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಆದರೆ ಗುಜರತ್ನ ಸೂರತ್ನಲ್ಲಿ ನಡೆದ ಈ ಘಟನೆಯಿಂದಾಗಿ ಇದೀಗ ಜನರು ಕೊಂಚ ಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದಾರೆ.
ವರದಿಯ ಪ್ರಕಾರ ಸೂರತ್ ಮೂಲದ ಕುನಾಲ್ ಬೊಘಾರ ಎಂಬ ವ್ಯಕ್ತಿಯ ಕಾರಾಗಿದ್ದು, 15 ಕಿ.ಮೀ ದೂರ ಪ್ರಯಾಣಿಸಿದ ನಂತರ ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದರು. ಪಾರ್ಕ್ ಮಾಡಿ 15 ನಿಮಿಷಗಳ ನಂತರ ರಾತ್ರಿ ಸುಮಾರು 1.30 ರ ಸುಮಾರಿಗೆ ಕಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸೆಕ್ಯುರಿಟಿ ಸಿಬ್ಬಂದಿ ಬಕೆಟ್ನಲ್ಲಿ ನೀರು ಹಾಕಿ ಬಂಕಿ ನಂದಿಸಲು ಪ್ರಯತ್ನಿಸಿ ವಿಫಲವಾದಾಗ ಕೂಡಲೇ ಮಾಲೀಕನನ್ನು ಕರೆದಿದ್ದಾರೆ.
ಕೂಡಲೇ ಮಾಲೀಕ ಕುನಾಲ್ ಬೊಘಾರ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, 20 ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಅಷ್ಟರಲ್ಲಾಗಲೇ ಕಾರು ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿದೆ. ಮಾಲೀಕನ ಹೇಳಿಕೆಯ ಪ್ರಕಾರ ಜುಲೈ 27, 2021 ರಂದು ಹೊಸ ಕಾರನ್ನು ಖರೀದಿ ಮಾಡಲಾಗಿದೆ. ನವೆಂಬರ್ 3, 2022 ರಂದು ಟಾಟಾ ಸರ್ವೀಸ್ ಸೆಂಟರ್ನಲ್ಲಿ ಕಾರನ್ನು ಸರ್ವೀಸ್ ಸಹ ಮಾಡಲಾಗಿತ್ತು ಎಂದು ಮಾಲೀಕ ತಿಳಿಸಿದ್ದಾರೆ.
ಕಾರು ಶೋ ರೂಮ್ನಿಂದ ತಂದಾಗ ಹೇಗಿದೆಯೋ, ಅದೇ ರೀತಿಯೇ ಇದೆ. ಅಷ್ಟು ಮಾತ್ರವಲ್ಲದೆ ಕಾರಿಗೆ ಯಾವುದೇ ರೀತಿಯ ಮಾರ್ಪಾಡು ಅಥವಾ ಮಾಡಿಫಿಕೇಷನ್ಗಳನ್ನು ಮಾಡಿರಲಿಲ್ಲ, ಆದರೂ ಬೆಂಕಿಗೆ ಆಹುತಿಯಾಗಿರುವುದರಿಂದ ಇದಕ್ಕೆ ಕಂಪೆನಿಯೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೇ ತಾನು ಈ ಕಾರಿನಲ್ಲಿ ಬ್ಯಾಟರಿ ಸಂಬಂಧಿತ ದೋಷಗಳನ್ನು ಆಗಾಗ್ಗೆ ಎದುರಿಸುತ್ತಿದ್ದೆ, ಕೆಲವು ವಾರಗಳ ಹಿಂದೆ ಹ್ಯಾರಿಯರ್ನ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗಿತ್ತು. ಇದನ್ನು ಸ್ವತಃ ಕೆಲವೊಮ್ಮೆ ಪರಿಶೀಲಿಸಿ ಸಮಸ್ಯೆಯಿದ್ದ ಕಾರಣ ಸರ್ವಿಸ್ ಸೆಂಟರ್ಗೆ ಭೇಟಿ ನೀಡಿದ್ದೆ.
ಬಳಿಕ ಸರ್ವೀಸ್ ಸೆಂಟರ್ನಲ್ಲಿ ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಲಾಗಿತ್ತು. ಆದರೆ 3 ದಿನಗಳ ಹಿಂದೆ ಮತ್ತೊಮ್ಮೆ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗಿತ್ತು. ಈ ಕುರಿತು ಟಾಟಾ ಸರ್ವಿಸ್ ಸೆಂಟರ್ನಲ್ಲಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಏನು ಮಾಡಲಾಗದೇ ಸರ್ವಿಸ್ ಸೆಂಟರ್ನಲ್ಲಿ ಅದಕ್ಕೆ ಬದಲಾಗಿ ಹೊಸ ಬ್ಯಾಟರಿಯನ್ನು ಅಳವಡಿಸಲಾಗಿತ್ತು. ಇದಾದ ಬಳಿಕ ಕೊನೆಗೆ ಕಾರು ಬೆಂಕಿಗೆ ಆಹುತಿಯಾಗಿದೆ ಎಂದು ಮಾಲೀಕ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಟಾಟಾ ಮೋಟೋರ್ಸ್ ಭಾರತದ ಪ್ರತಿಷ್ಟಿತ ಕಾರು ತಯಾರಿಕಾ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿದೆ. ಟಾಟಾ ಕಾರುಗಳು ಅಪಘಾತವಾದಾಗ ಬಹುತೇಕ ಸಂದರ್ಭಗಳಲ್ಲಿ ಬಲಿಷ್ಟವಾಗಿರುವುದರಿಂದ ಪ್ರಯಾಣಿಕರು ಯಾವುದೆ ಪ್ರಾಣಪಾಯವಿಲ್ಲದೆ ಪಾರಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಗುಜರಾತ್ನ ಈ ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಸರಿಯಾದ ಕಾರಣವನ್ನು ಪತ್ತೆಹಚ್ಚಿದರೆ ಟಾಟಾ ಗ್ರಾಹಕರು ನಿರಾಳರಾಗುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಅಷ್ಟರಲ್ಲಿ ಮಾಲೀಕನ ದೂರಿಗೆ ಸಂಬಂದಿಸಿ ಕಂಪನಿ ಸಮಜಾಯಿಷಿ ನೀಡಬೇಕಿದೆ.


Click it and Unblock the Notifications