ಕದ್ದ ವಾಹನಗಳನ್ನು ಖರೀದಿಸುವವರನ್ನು ಜೈಲಿಗೆ ಕಳುಹಿಸಲಿದೆ ಈ ಹೊಸ ಕಾನೂನು
ಜನರು ಕಾರು, ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳನ್ನು ಒಂದೆಡೆ ನಿಲ್ಲಿಸಿ ತಮ್ಮ ಕೆಲಸ ಮುಗಿಸಿ ವಾಪಸ್ ಆಗುವಷ್ಟರಲ್ಲಿ ನಿಲ್ಲಿಸಿದ್ದ ವಾಹನಗಳು ಕಳುವಾಗಿರುತ್ತವೆ. ವಾಹನಗಳಲ್ಲಿ ಎಷ್ಟೇ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿದ್ದರೂ ವಾಹನ ಕಳ್ಳತನವಾಗುವುದು ಕಡಿಮೆಯಾಗಿಲ್ಲ.

ಕಾಲಕ್ಕೆ ತಕ್ಕಂತೆ ವಾಹನಗಳ್ಳರು ಸಹ ಹೈಟೆಕ್ ಆಗಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ವಾಹನ ಕಳ್ಳತನದಲ್ಲಿ ತೊಡಗುತ್ತಿದ್ದಾರೆ. ಈ ಕಾರಣಕ್ಕೆ ವಾಹನಗಳ್ಳರನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಕಷ್ಟವಾಗುತ್ತದೆ. ವಾಹನಗಳ್ಳರು ಆಧುನಿಕ ತಂತ್ರಗಳನ್ನು ಬಳಸಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ವಾಹನ ಕಳ್ಳತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೊಲೀಸರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಸಂಬಂಧಪಟ್ಟ ಸರ್ಕಾರಗಳು ಸಹ ಈ ಬಗ್ಗೆ ಹೆಚ್ಚು ಗಮನ ಹರಿಸುತ್ತಿವೆ.

ವಾಹನ ಕಳ್ಳತನವನ್ನು ನಿರ್ಮೂಲನೆ ಮಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಲವಾರು ಕ್ರಮಗಳನ್ನು ಕೈಗೊಂಡರೂ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಈ ಸನ್ನಿವೇಶವನ್ನು ಎದುರಿಸಲು ಔರಂಗಾಬಾದ್ ಪೊಲೀಸರು ವಿಭಿನ್ನ ಕ್ರಮಕ್ಕೆ ಮುಂದಾಗಿದ್ದಾರೆ. ಕದ್ದ ವಾಹನಗಳನ್ನು ಖರೀದಿಸುವವರು ಕೂಡ ತಪ್ಪಿತಸ್ಥರೆಂದು ಪರಿಗಣಿಸಿ ಅವರ ಮೇಲೆ ವಾಹನ ಕಳ್ಳತನದ ಆರೋಪ ಹೊರಿಸಲಾಗುವುದು ಎಂದು ಔರಂಗಾಬಾದ್ ಪೊಲೀಸರು ತಿಳಿಸಿದ್ದಾರೆ.

ವಾಹನ ಕಳ್ಳತನವಾಗುವುದನ್ನು ತಡೆಯಲು ಹಾಗೂ ಕದ್ದ ವಾಹನಗಳ ಮಾರಾಟವನ್ನು ತಡೆಯಲು ಔರಂಗಾಬಾದ್ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕೆಲವರು ವಾಹನಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತವೆ ಎಂಬ ಕಾರಣಕ್ಕೆ ದಾಖಲೆಗಳನ್ನು ಪರಿಶೀಲಿಸದೇ ಕದ್ದ ವಾಹನಗಳನ್ನು ಖರೀದಿಸುತ್ತಾರೆ.

ಕಡಿಮೆ ಬೆಲೆಗೆ ಸೂಕ್ತ ದಾಖಲೆಗಳಿಲ್ಲದೆ ಮಾರಾಟವಾಗುವ ವಾಹನಗಳು ಬಹುತೇಕ ಕದ್ದ ವಾಹನಗಳೇ ಆಗಿರುತ್ತವೆ. ಇದನ್ನು ತಪ್ಪಿಸಲು ಔರಂಗಾಬಾದ್ ಪೊಲೀಸ್ ಆಯುಕ್ತರಾದ ನಿಖಿಲ್ ಗುಪ್ತಾ ಹೊಸ ಕಾನೂನನ್ನು ಜಾರಿಗೆ ತಂದಿದ್ದಾರೆ.

ಹೊಸ ಕಾನೂನು, ಕದ್ದ ವಾಹನಗಳನ್ನು ಖರೀದಿಸುವವರಲ್ಲಿ ಭೀತಿಯನ್ನುಂಟು ಮಾಡಿದೆ. ನಿಖಿಲ್ ಗುಪ್ತಾ ರವರು ಜಾರಿಗೆ ತಂದಿರುವ ಈ ಹೊಸ ಕಾನೂನಿನಿಂದ ಮುಂಬರುವ ದಿನಗಳಲ್ಲಿ ವಾಹನ ಕಳ್ಳತನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಗಳಿವೆ.

ವಾಹನಗಳ್ಳರು ಸಾರ್ವಜನಿಕರನ್ನು ವಂಚಿಸಲು ವಿವಿಧ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಹಕರನ್ನು ವಾಹನಗಳ ಡೀಲರ್ ಗಳಂತೆ ಸಂಪರ್ಕಿಸುವ ಅವರು ಬಳಿಕ ಕದ್ದ ವಾಹನಗಳನ್ನು ಮಾರಾಟ ಮಾಡುತ್ತಾರೆ.

ವಾಹನ ಹಸ್ತಾಂತರಿಸುವಾಗ 50% ನಷ್ಟು ಹಣ ಪಾವತಿಸಿ, ಉಳಿದ ಹಣವನ್ನು ದಾಖಲೆಗಳನ್ನು ನೀಡಿದ ನಂತರ ಪಾವತಿಸುವಂತೆ ತಿಳಿಸುತ್ತಾರೆ. ವಾಹನ ನೀಡುವಾಗ 50% ನಷ್ಟು ಹಣವನ್ನು ಪಡೆಯುವ ಖದೀಮರು ನಂತರ ಎಂದಿಗೂ ದಾಖಲೆಗಳನ್ನು ನೀಡುವುದೇ ಇಲ್ಲ.

ಇನ್ನು ಕೆಲವು ರಾಜ್ಯಗಳಲ್ಲಿ ಕದ್ದ ಕಾರುಗಳನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಕದ್ದ ವಾಹನಗಳನ್ನು ಅವರು ಕುಶಲತೆಯಿಂದ ಮಾರಾಟ ಮಾಡುತ್ತಾರೆ ಎಂದು ಪೊಲೀಸರು ಮಾಹಿತಿ ನೀಡುತ್ತಾರೆ.

ಇಂತಹ ಸಂದರ್ಭದಲ್ಲಿಯೇ ಕದ್ದ ವಾಹನಗಳನ್ನು ಖರೀದಿಸಿದವರನ್ನು ಸಹ ಆರೋಪಿಗಳೆಂದು ಪರಿಗಣಿಸಲಾಗುವುದು ಎಂದು ಔರಂಗಾಬಾದ್ ಪೊಲೀಸರು ಆದೇಶ ಹೊರಡಿಸಿದ್ದಾರೆ.

ಔರಂಗಾಬಾದ್ ನಗರ ಪೊಲೀಸರು ಇತ್ತೀಚೆಗೆ ಕದ್ದ ಆಭರಣಗಳನ್ನು ಖರೀದಿಸಿದ್ದ ಆಭರಣ ಮಾರಾಟಗಾರನ ವಿರುದ್ಧ ಪ್ರಕರಣ ದಾಖಲಿಸಿದ್ದರು ಎಂಬುದು ಗಮನಾರ್ಹ. ಇದನ್ನು ಅನುಸರಿಸಿ ಈಗ ಕದ್ದ ವಾಹನ ಖರೀದಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇದರ ಜೊತೆಗೆ ಔರಂಗಾಬಾದ್ ಪೊಲೀಸರು ಹೆಚ್ಚು ಅಪರಾಧ ನಡೆಯುವ ಸ್ಥಳಗಳನ್ನು ಗುರುತಿಸಿದ್ದು, ವಾಹನ ಕಳ್ಳತನವನ್ನು ತಪ್ಪಿಸಲು ಆ ಸ್ಥಳಗಳನ್ನು ಹೆಚ್ಚುವರಿ ಭದ್ರತಾ ವಲಯದ ಅಡಿಯಲ್ಲಿ ತಂದಿದ್ದಾರೆ.

ಇದರ ಜೊತೆಗೆ ಸಾರ್ವಜನಿಕ ಸ್ಥಳಗಳು ಹಾಗೂ ನಗರದ ಕೆಲವು ಸೂಕ್ಷ್ಮ ಸ್ಥಳಗಳ ಮೇಲೆ ನಿಗಾ ಇಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕದ್ದ ವಾಹನಗಳನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಖದೀಮರು ಕಡಿಮೆ ಬೆಲೆಯ ವಾಹನಗಳನ್ನು ಖರೀದಿಸಲು ಬಯಸುವವರನ್ನು ಹುಡುಕಿ ಅಂತಹವರಿಗೆ ಕದ್ದ ವಾಹನಗಳನ್ನು ಮಾರಾಟ ಮಾಡುತ್ತಾರೆ. ಕದ್ದ ವಾಹನಗಳೆಂದು ತಿಳಿಯದೇ ಖರೀದಿಸುವವರು ನಂತರ ತೊಂದರೆ ಸಿಲುಕುತ್ತಾರೆ. ಈ ಕಾರಣಕ್ಕೆ ಕದ್ದ ವಾಹನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ಅಭಿಯಾನವನ್ನು ಆರಂಭಿಸಲು ಮುಂದಾಗಿದ್ದಾರೆ. ಈ ಅಭಿಯಾನವು ಕದ್ದ ವಾಹನಗಳನ್ನು ಖರೀದಿಸಿ ಅನಗತ್ಯ ಕಾನೂನು ಕ್ರಮಗಳಿಗೆ ಸಿಲುಕುವ ಅಮಾಯಕರನ್ನು ರಕ್ಷಿಸಲು ನೆರವಾಗಲಿದೆ. ನಗರಗಳಲ್ಲಿ ಈ ಜಾಗೃತಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications