ಕಳಪೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಕೆಸರು ಸುರಿದ ಶಾಸಕ
ಕೆಟ್ಟ ರಸ್ತೆಗಳು ಭಾರತದಲ್ಲಿನ ಪ್ರಮುಖ ಸಮಸ್ಯೆಯಾಗಿದೆ. ಕೆಟ್ಟ ರಸ್ತೆಗಳಿಗೆ ಹಲವಾರು ಕಾರಣಗಳಿವೆ. ಕಳಪೆ ಕಾಮಗಾರಿಯಿಂದಾಗಿಯೂ ರಸ್ತೆಗಳು ಹದಗೆಡುತ್ತವೆ. ಕಳಪೆ ಕಾಮಗಾರಿಗೆ ಸಂಬಂಧಪಟ್ಟವರೆಲ್ಲರೂ ಹೊಣೆಗಾರರಾಗುತ್ತಾರೆ. ಕಳಪೆ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟ ಕಾರಣ, ರಾಜಕಾರಣಿಯೊಬ್ಬರು ಉಪ ಎಂಜಿನಿಯರ್ ತಲೆಗೆ ಬಕೆಟ್ ಮಣ್ಣನ್ನು ಸುರಿದು, ನಿಂದಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಎಂಜಿನಿಯರ್ ತಲೆಯ ಮೇಲೆ ಮಣ್ಣನ್ನು ಸುರಿದು ನಿಂದಿಸಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಅವರ ಪುತ್ರ, ಹಾಲಿ ಕಾಂಗ್ರೆಸ್ ಶಾಸಕ ನಿತೇಶ್ ರಾಣೆರವರು ಪ್ರಕಾಶ್ ಶೆಡೇಕರ್ ಎಂಬ ಎಂಜಿನಿಯರ್ ಮೇಲೆ ಮಣ್ಣು ಸುರಿಯುವಂತೆ ಸ್ಥಳದಲ್ಲಿದ್ದವರಿಗೆ ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಆ ಉಪ ಎಂಜಿನಿಯರ್ಗೆ ಪಾಠ ಕಲಿಸಲು ಬಕೆಟ್ನಿಂದ ಮಣ್ಣನ್ನು ಸುರಿಯಲಾಯಿತು ಎಂದು ಹೇಳಲಾಗಿದೆ.
ನಿತೇಶ್ ರಾಣೆರವರು, ಬಕೆಟ್ ಮಣ್ಣನ್ನು ಅವನ ಮೇಲೆ ಸುರಿಯಿರಿ. ಅವನ ತಲೆಯ ಮೇಲೆ ಸುರಿಯಿರಿ. ಈಗ ನಿಮಗೆ ಜನರ ಕಷ್ಟ ಅರ್ಥವಾಗಲಿದೆ. ಸೇತುವೆಯ ಗೋಡೆ ಕುಸಿದರೆ ಜನರು ಏನು ಮಾಡಬೇಕು, ನಿಮ್ಮ ಮುಂದೆ ಸಾಯಬೇಕೇ? ಎಂದು ಹೇಳುತ್ತಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ. ಡೆಪ್ಯೂಟಿ ಎಂಜಿನಿಯರ್ ಮೇಲೆ ಬಕೆಟ್ ತುಂಬಿದ ಮಣ್ಣನ್ನು ಸುರಿದ ನಂತರವೂ ಶಾಸಕರು ಸುಮ್ಮನಾಗಲಿಲ್ಲ. ಆ ಎಂಜಿನಿಯರ್ನನ್ನು ಕಾರಿನಲ್ಲಿ ಹಾಕಿಕೊಂಡು, ಕೆಸರು ಗುಂಡಿಗೆ ಎಸೆಯುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು.

ಎಂಜಿನಿಯರ್ ಮೇಲೆ ಮಣ್ಣನ್ನು ಸುರಿದ ಜನರು ಸ್ವಾಭಿಮಾನ್ ಸಂಘಟನೆಗೆ ಸೇರಿದವರೆಂದು ಹೇಳಲಾಗಿದೆ. ಜನರ ಗುಂಪು ಎಂಜಿನಿಯರ್ರವರನ್ನು ಸೇತುವೆಗೆ ಕಟ್ಟಿಹಾಕಿ ನಿಂದಿಸಿದೆ. ಈ ಘಟನೆಯು ಮುಂಬೈ-ಗೋವಾ ಹೆದ್ದಾರಿಯಲ್ಲಿರುವ ಕಂಕಾವ್ಲಿಯ ಗಡ್-ನಾಡಿ ಸೇತುವೆ ಮೇಲೆ ನಡೆದಿದೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡಿದಿದೆ. ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಎಕ್ಸ್ಪ್ರೆಸ್ ಹೆದ್ದಾರಿಯು ಹದಗೆಟ್ಟಿದೆ. ಇದರಿಂದಾಗಿ ಈ ರಸ್ತೆಯ ಮೂಲಕ ಹಾದುಹೋಗುವ ವಾಹನಗಳು ತೊಂದರೆ ಅನುಭವಿಸುತ್ತಿವೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಆದರೆ ಸಮಸ್ಯೆಯನ್ನು ಪರಿಹರಿಸುವ ಬದಲು ಈ ರೀತಿ ಅನಾಗರೀಕವಾಗಿ ನಡೆದುಕೊಂಡಿದ್ದು ಸರಿಯಲ್ಲ. ನಿತೇಶ್ ರಾಣೆಯವರ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆರವರು ಸಹ ತಮ್ಮ ಮಗನ ಕೃತ್ಯವನ್ನು ಖಂಡಿಸಿದ್ದು, ತಮ್ಮ ಮಗನ ಕೃತ್ಯವನ್ನು ಬೆಂಬಲಿಸುವುದಿಲ್ಲವೆಂದು ತಿಳಿಸಿದ್ದಾರೆ.
ತಮ್ಮ ಮಗ ಹಾಗೂ ಆತನ ಬೆಂಬಲಿಗರು ಮಾಡಿದ ತಪ್ಪಿಗೆ ಕ್ಷಮೆಯಾಚಿಸುವಂತೆ ತಮ್ಮ ಮಗನನ್ನು ಆಗ್ರಹಿಸಿದ್ದಾರೆ. ನಿತೇಶ್ ರಾಣೆರವರು ಈ ರೀತಿಯಾಗಿ ವರ್ತಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಮುಂಬೈ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ, ಅವರು ಮುಂಬೈನ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಮೀನನ್ನು ಎಸೆದಿದ್ದರು. ಘಟನೆ ಬಗ್ಗೆ ಸರ್ಕಾರವಾಗಲೀ, ಪೊಲೀಸರಾಗಲೀ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಡೆಪ್ಯೂಟಿ ಎಂಜಿನಿಯರ್ ಪ್ರಕಾಶ್ ಶೆಡೇಕರ್ ಕೂಡ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂಬೈ-ಗೋವಾ ಹೆದ್ದಾರಿ ಜನನಿಬಿಡ ಹೆದ್ದಾರಿಯಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಈ ಮಾರ್ಗವಾಗಿ ಚಲಿಸುತ್ತವೆ. ಗುಂಡಿಗಳಿಂದಾಗಿ ಹಾಗೂ ಹಾಳಾದ ರಸ್ತೆಗಳಿಂದಾಗಿ ವಾಹನಗಳ ದಟ್ಟಣೆ ಹೆಚ್ಚಾಗಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತವೆ. ರಾತ್ರಿ ವೇಳೆಯಲ್ಲಿ ಗುಂಡಿಗಳು ಸಡನ್ನಾಗಿ ಕಣ್ಣಿಗೆ ಬೀಳದೇ ಹೆಚ್ಚು ಅನಾಹುತಗಳು ಸಂಭವಿಸುತ್ತಿವೆ.


Click it and Unblock the Notifications








