3,500ಕ್ಕೂ ಹೆಚ್ಚು ಅಪಘಾತಗಳಿಗೆ ಕಾರಣವಾದ ರಸ್ತೆ ಗುಂಡಿಗಳು
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಪ್ರಕಾರ 2020 ರಲ್ಲಿ ರಸ್ತೆ ಉಬ್ಬು ಹಾಗೂ ರಸ್ತೆ ಗುಂಡಿಗಳಿಂದ 3,564 ರಸ್ತೆ ಅಪಘಾತಗಳು ಸಂಭವಿಸಿವೆ. 2019 ರಲ್ಲಿ ಈ ಅಂಕಿ ಅಂಶವು ಇದಕ್ಕಿಂತ ಹೆಚ್ಚಾಗಿತ್ತು. ಆ ವರ್ಷ 4,775 ರಸ್ತೆ ಅಪಘಾತಗಳು ರಸ್ತೆ ಉಬ್ಬು ಹಾಗೂ ರಸ್ತೆ ಗುಂಡಿಗಳಿಂದ ಸಂಭವಿಸಿದ್ದವು. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಈ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.

ಹೆದ್ದಾರಿಗಳ ಕಳಪೆ ನಿರ್ವಹಣೆಯಿಂದ ಎಷ್ಟು ರಸ್ತೆ ಅಪಘಾತಗಳು ಸಂಭವಿಸಿವೆ ಎಂಬ ತೆಲುಗು ದೇಶಂ ಪಕ್ಷದ ಸಂಸದ ಜಯದೇವ್ ಕಲಾ ರವರ ಪ್ರಶ್ನೆಗೆ ಸಂಸತ್ತಿನಲ್ಲಿ ಈ ಮಾಹಿತಿ ನೀಡಲಾಗಿದೆ. ಇದೇ ವೇಳೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ರಸ್ತೆ ಅಪಘಾತಗಳಿಗೆ ಹಲವಾರು ಕಾರಣಗಳನ್ನು ನೀಡಿದೆ. ಇದರ ಪ್ರಕಾರ ಕೆಟ್ಟ ಬೆಳಕು, ಕೆಟ್ಟ ಹವಾಮಾನ, ಕೆಟ್ಟ ರಸ್ತೆಗಳು, ಅತಿ ವೇಗದ ಚಾಲನೆ, ಡ್ರೈವಿಂಗ್ ತಪ್ಪುಗಳು, ಓವರ್ಲೋಡ್, ಚಾಲನೆ ಮಾಡುವಾಗ ಸೆಲ್ ಫೋನ್ ಬಳಕೆಗಳಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.

ಇದರ ಜೊತೆಗೆ ಕುಡಿದು ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡುವುದು, ಓವರ್ಟೇಕ್ ಮಾಡುವುದು ಸೇರಿದಂತೆ ವಿವಿಧ ಕಾರಣಗಳಿಗೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಕಳೆದ 5 ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ ರಸ್ತೆ ಉಬ್ಬುಗಳು ಹಾಗೂ ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, 2016ರಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ 6,424 ರಸ್ತೆ ಅಪಘಾತಗಳು ಸಂಭವಿಸಿವೆ. ಇನ್ನು 2017 ರಲ್ಲಿ 9,423, 2018 ರಲ್ಲಿ 4,869 ರಸ್ತೆ ಅಪಘಾತಗಳು ಸಂಭವಿಸಿದ್ದರೆ, 2019 ರಲ್ಲಿ 4,775 ರಸ್ತೆ ಅಪಘಾತಗಳು ಸಂಭವಿಸಿವೆ. ಭಾರತದಲ್ಲಿ ಕೆಟ್ಟ ರಸ್ತೆಗಳಿಂದಾಗಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಈ ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಕೇಂದ್ರ ಸರ್ಕಾರವು, ಭಾರತದಲ್ಲಿ ರಸ್ತೆಗಳ ಗುಣಮಟ್ಟವನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತ ಹಾಗೂ ರಸ್ತೆ ಅಪಘಾತ ಸಾವುಗಳನ್ನು ಹೊಂದಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಸಂಖ್ಯೆಯನ್ನು ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ.

ಸಾಮಾನ್ಯವಾಗಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವುದರಿಂದ, ವಾಹನಗಳಲ್ಲಿ ತೊಂದರೆ ಕಂಡು ಬರುವುದರಿಂದ ಹಾಗೂ ಕಳಪೆ ಗುಣಮಟ್ಟದ ರಸ್ತೆಗಳಿಂದರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಪೈಕಿ ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಯಲು ಕೇಂದ್ರ ಸರ್ಕಾರವು ಸಂಚಾರ ಉಲ್ಲಂಘನೆಯ ದಂಡದ ಮೊತ್ತವನ್ನು ಹೆಚ್ಚಿಸಿದೆ.

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ವಾಹನಗಳಲ್ಲಿ ಸುರಕ್ಷತಾ ಫೀಚರ್ ಅಳವಡಿಸುವುದನ್ನು ಕಡ್ಡಾಯಗೊಳಿಸುತ್ತಿದೆ. ಹೊಸದಾಗಿ ಬಿಡುಗಡೆಯಾಗುವ ಕಾರುಗಳಲ್ಲಿ ಎಬಿಎಸ್, ಏರ್ಬ್ಯಾಗ್ಗಳಂತಹ ವಿವಿಧ ಸುರಕ್ಷತಾ ಫೀಚರ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕೇಂದ್ರ ಸರ್ಕಾರವು ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ.

ರಸ್ತೆ ಅಪಘಾತಗಳಿಗೆ ರಸ್ತೆಗಳೂ ಕಾರಣವಾಗಿರುವುದರಿಂದ ರಸ್ತೆಗಳ ಗುಣಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗ ನಿರ್ಮಾಣವಾಗುತ್ತಿರುವ ಹೆದ್ದಾರಿಗಳನ್ನು ಗರಿಷ್ಠ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಭಾರತದ ಹೆದ್ದಾರಿಗಳನ್ನು ಅಮೆರಿಕಾ ಹೆದ್ದಾರಿಗಳ ರೀತಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೆಲವು ದಿನಗಳ ಹಿಂದಷ್ಟೇ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿರವರು ಹೇಳಿದ್ದರು.

ಸಂಚಾರ ನಿಯಮಗಳನ್ನು ಸುಧಾರಿಸಲು ಹಾಗೂ ರಸ್ತೆ ಚಾಲಕರ ಸುರಕ್ಷತೆಯನ್ನು ಹೆಚ್ಚಿಸಲು, ಕೇಂದ್ರ ಸರ್ಕಾರವು 2019ರ 1ರಂದು ತಿದ್ದುಪಡಿ ಮಾಡಲಾದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆಯನ್ನು ದೇಶದ ಹಲವು ರಾಜ್ಯಗಳಲ್ಲಿ ಜಾರಿಗೊಳಿಸಲಾಗಿತ್ತು. ಈ ಮೋಟಾರು ವಾಹನ ಕಾಯ್ದೆಯನ್ನು ದೆಹಲಿಯಲ್ಲಿಯೂ ಜಾರಿಗೆ ತರಲಾಯಿತು.

ಹೊಸ ನಿಯಮಗಳ ಪ್ರಕಾರ, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಜೊತೆಗೆ ಹೊಸ ಸುರಕ್ಷತಾ ನಿಯಮಗಳನ್ನು ಸಹ ಈ ಕಾಯ್ದೆಗೆ ಸೇರಿಸಲಾಗಿದೆ. ತಿದ್ದುಪಡಿ ಮಾಡಲಾದ ಈ ಮೋಟಾರು ವಾಹನ ಕಾಯ್ದೆಯಲ್ಲಿ ಹಲವಾರು ನಿಯಮಗಳಿದ್ದು, ಅದರ ಆಧಾರದ ಮೇಲೆ ದಂಡ ಅಥವಾ ಚಲನ್ ನಿಗದಿಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಹನ ಚಲಾಯಿಸುವವರು ಹೊಸ ಸಂಚಾರ ನಿಯಮಗಳ ಬಗ್ಗೆ ತಿಳಿದಿರಬೇಕು. ಇನ್ನು ಮುಂದೆ ದೆಹಲಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ರೂ. 5,000 ದಂಡ ಅಥವಾ ಮೂರು ತಿಂಗಳ ಸಮುದಾಯ ಸೇವೆಯ ಶಿಕ್ಷೆ ನೀಡಲಾಗುತ್ತದೆ. ಕುಡಿದು ವಾಹನ ಚಲಾಯಿಸಿದರೆ ರೂ. 10,000 ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.

ಅಪರಾಧದ ತೀವ್ರತೆಗೆ ಅನುಗುಣವಾಗಿ ರೂ. 15,000 ದಂಡ ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮಿತಿ ಮೀರಿದ ವೇಗದಲ್ಲಿ, ಲಘು ಮೋಟಾರು ವಾಹನ ಚಾಲನೆ ಮಾಡಿದರೆ ರೂ. 1,000 ದಂಡ ವಿಧಿಸಬಹುದು. ಇದೇ ವೇಳೆ ನಾಲ್ಕು ಚಕ್ರ ಅಥವಾ ಭಾರೀ ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡಿದರೆ ರೂ. 5,000 ಗಳವರೆಗೆ ದಂಡ ವಿಧಿಸಬಹುದು.

ಸಂಚಾರಕ್ಕೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಕಾನೂನನ್ನು ಉಲ್ಲಂಘಿಸಿದರೆ ರೂ. 5,000 ದಂಡ ವಿಧಿಸಬಹುದು. ಅಪ್ರಾಪ್ತ ಮಕ್ಕಳಿಗೆ ಸ್ಕೂಟಿ, ಬೈಕ್ ಅಥವಾ ಕಾರು ಅಥವಾ ಯಾವುದೇ ಲಘು ಅಥವಾ ಭಾರೀ ಮೋಟಾರು ವಾಹನವನ್ನು ನೀಡಿದರೆ ರೂ. 25,000 ದಂಡ ಅಥವಾ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.

ಈ ಅಪರಾಧಕ್ಕಾಗಿ ವಾಹನದ ನೋಂದಣಿಯನ್ನು ಸಹ ರದ್ದುಗೊಳಿಸಬಹುದು. ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಅಡಿಯಲ್ಲಿ ಮಾನ್ಯತೆ ಇಲ್ಲದೇ ದೆಹಲಿಯಲ್ಲಿ ವಾಹನ ಚಲಾಯಿಸಿದರೆ ರೂ. 10,000 ಗಳವರೆಗೆ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸಬಹುದು.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications